ಕರ್ನಾಟಕ-ಗೋವಾದಲ್ಲಿ ಐಟಿ ದಾಳಿಯಲ್ಲಿ ಸಿಕ್ಕಿದ್ದು ಸಾವಿರ ಕೋಟಿ ಪ್ಲಸ್
ಬೆಂಗಳೂರು, ಡಿಸೆಂಬರ್ 14: ನೋಟು ನಿಷೇಧದ ಘೋಷಣೆಯಾದ ನಂತರ ಕರ್ನಾಟಕ ಹಾಗೂ ಗೋವಾ ರಾಜ್ಯಗಳಲ್ಲಿ ಮಾತ್ರ ಆದಾಯ ತೆರಿಗೆ ಇಲಾಖೆ ಬಯಲಿಗೆಳೆದ ಲೆಕ್ಕಕ್ಕೆ ನೀಡದ ಆಸ್ತಿಯ ಮೊತ್ತ ಒಂದು ಸಾವಿರ ಕೋಟಿ ರುಪಾಯಿಗೂ ಹೆಚ್ಚು. 36 ಪ್ರಕರಣಗಳಲ್ಲಿ ಅಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿರುವುದು ಲೆಕ್ಕಕ್ಕೆ ನೀಡದಿದ್ದ 1,000 ಕೋಟಿ ರುಪಾಯಿಗೂ ಹೆಚ್ಚಿನ ಮೌಲ್ಯದ ಆಸ್ತಿ.
ಹಣ ಬದಲಾವಣೆ ದಂಧೆಕೋರರ ಮೇಲೆ ಡಿ.12, 13 ಸಹ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಯಶವಂತಪುರದ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಸಿಕ್ಕಿದ್ದು 2.89 ಕೋಟಿ ರುಪಾಯಿ. ಅದರಲ್ಲಿ 2.25 ಕೋಟಿ ರುಪಾಯಿಯಷ್ಟು ಎರಡು ಸಾವಿರ ರುಪಾಯಿ ಹೊಸ ನೋಟುಗಳು ಇದ್ದವು.[ಚೆನ್ನೈನಲ್ಲಿ ಒಟ್ಟು ಸಿಕ್ಕಿದ್ದು 170 ಕೋಟಿ ನಗದು, 130 ಕೆಜಿ ಚಿನ್ನ]
ಆ ಮನೆ ಕಾವಲಿಗೆ ಇದ್ದಿದ್ದು ವಯಸ್ಸಾದ ಮಹಿಳೆ. ಆಕೆ ಸ್ಥಳ ಪರಿಶೀಲನೆಗೆ ಅಧಿಕಾರಿಗಳಿಗೆ ಅವಕಾಶವೇ ಕೊಡದೆ ತಡೆದಳು. ಆ ನಂತರ ಲೆಕ್ಕಕ್ಕೆ ನೀಡದೆ ಬಚ್ಚಿಟ್ಟಿದ್ದ ಹಣವನ್ನು ವಶಪಡಿಸಿಕೊಂಡ ಅಧಿಕಾರಿಗಳು ತನಿಖೆ ಮುಂದುವರಿಸಿದರು. ಇನ್ನು ಗೋವಾದಲ್ಲಿ ವಶಪಡಿಸಿಕೊಂಡಿದ್ದು 67.98 ಲಕ್ಷ ರುಪಾಯಿ, ಪೂರ್ತಿಯಾಗಿ ಎರಡು ಸಾವಿರ ರುಪಾಯಿ ಹೊಸ ನೋಟುಗಳೇ ಇದ್ದವು.[ಕಪ್ಪು ಹಣ: ಕರ್ನಾಟಕ, ಬಿಜೆಪಿಯವರದೇ ಮೇಲುಗೈ]
ಹಣ ಬದಲಾವಣೆ ದಂಧೆಯಲ್ಲಿ ತೊಡಗಿದ್ದವರ ಬಳಿ ಗಿರಾಕಿಗಳಂತೆ ತೆರಳಿದ್ದ ಅಧಿಕಾರಿಗಳು ಜಾಲವನ್ನು ಭೇದಿಸುವಲ್ಲಿ ಸಫಲರಾದರು. ವಾಹನದಲ್ಲಿ ಸಾಗಿಸುತ್ತಿದ್ದ ಹಣವನ್ನು ಕೂಡ ವಶಪಡಿಸಿಕೊಂಡು, ವ್ಯಕ್ತಿಯೊಬ್ಬನನ್ನು ಬಂಧಿಸಲಾಯಿತು. ಬಾಂದಾ ಮೂಲದ ವ್ಯಕ್ತಿಯು ಮಹಾರಾಷ್ಟ್ರ-ಗೋವಾ ಗಡಿಯಲ್ಲಿ ಹಣ ಸಾಗಿಸುವಾಗ ಸಿಕ್ಕಿಬಿದ್ದಿದ್ದ.