'ಆಗಸ್ಟ್ ತಿಂಗಳ ಆರಂಭದಲ್ಲಿ ನಮ್ಮ ಪಕ್ಷಕ್ಕೆ ಗ್ರಹಣ ಆವರಿಸಿತ್ತು'
ಬೆಂಗಳೂರು, ಆ.09 : 'ಆಗಸ್ಟ್ ತಿಂಗಳ ಆರಂಭದಿಂದ ನಮ್ಮ ಪಕ್ಷಕ್ಕೆ ಗ್ರಹಣ ಆವರಿಸಿತ್ತು. ಅಹಮದ್ ಪಟೇಲ್ ಅವರು ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅದು ಬಿಟ್ಟು ಹೋಗಿದೆ. ಎಷ್ಟೇ ಕಷ್ಟ ಬಂದರೂ ಹೆದರಬೇಡಿ' ಎಂದು ಇಂಧನ ಸಚಿವ ಡಿ.ಕೆ.ಶಿಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದರು.
ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬುಧವಾರ ಕ್ವಿಟ್ ಇಂಡಿಯಾ ಚಳವಳಿ ಎಪ್ಪತೈದನೇ ವರ್ಷಾಚರಣೆ ಅಂಗವಾಗಿ ಬೃಹತ್ ಕಾರ್ಯಕ್ರಮ ಆಯೋಜಿಸಿತ್ತು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, 'ಯಾವುದೇ ಕಷ್ಟಗಳಿಗೆ ಹೆದರಬೇಡಿ, ಗ್ರಹಣ ಬಂದರೂ ಹೆಚ್ಚು ಹೊತ್ತು ಇರುವುದಿಲ್ಲ. ಸತ್ಯಕ್ಕೆ, ನಿಷ್ಠೆಗೆ ಸದಾ ಗೆಲ್ಲುತ್ತದೆ' ಎಂದು ಹೇಳಿದರು.
'ಪಂಚಾಯಿತಿ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್ ಜಯಗಳಿಸಿದೆ. ಆದ್ದರಿಂದ, ಬಿಜೆಪಿ ನಾಯಕರಿಗೆ ಭಯ ಉಂಟಾಗಿದೆ. ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ. ಆದರೆ, ಇಂತಹ ಪ್ರಯತ್ನ ಯಶಸ್ವಿಯಾಗುವುದಿಲ್ಲ' ಎಂದರು. ಸಮಾವೇಶದ ಹೆಚ್ಚಿನ ವರದಿ ಚಿತ್ರಗಳಲ್ಲಿ ನೋಡಿ....
ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದ ಡಿ.ಕೆ.ಶಿವಕುಮಾರ್
ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬುಧವಾರ ಕ್ವಿಟ್ ಇಂಡಿಯಾ ಚಳವಳಿ ಎಪ್ಪತೈದನೇ ವರ್ಷಾಚರಣೆ ಅಂಗವಾಗಿ ಬೃಹತ್ ಕಾರ್ಯಕ್ರಮ ಆಯೋಜಿಸಿತ್ತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಡಿ.ಕೆ.ಶಿವಕುಮಾರ್ ತಮ್ಮ ಮಾತಿನ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದರು.
ಪಕ್ಷವನ್ನು ಮರಳಿ ಅಧಿಕಾರಕ್ಕೆ ತರೋಣ
'ನಾವು ಕಾಂಗ್ರೆಸ್ ಪಕ್ಷದಲ್ಲಿರುವುದು ಹೆಮ್ಮೆಯ ವಿಷಯ. ರಾಷ್ಟ್ರಧ್ವಜ ಹಿಡಿಯಲು ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಯೋಗ್ಯತೆ ಇದೆ. ಕಾರ್ಯಕರ್ತರೇ ನಮ್ಮ ಪಕ್ಷದ ಆಸ್ತಿ. ನಿಮ್ಮಿಂದ ಮಾತ್ರ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
'ಗ್ರಹಣವೂ ಹೆಚ್ಚು ಹೊತ್ತು ಇರಲ್ಲ'
'ಯಾವುದೇ ಕಷ್ಟಗಳಿಗೂ ಹೆದರಬೇಡಿ, ಗ್ರಹಣ ಬಂದರೂ ಹೆಚ್ಚು ಸಮಯ ಇರುವುದಿಲ್ಲ. ಸತ್ಯ, ನಿಷ್ಠೆಗೆ ಎಂದೂ ಬೆಲೆ ಇದ್ದೇ ಇದೆ. ಸತ್ಯಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ' ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಜಾಥಾ
ಕ್ವಿಟ್ ಇಂಡಿಯಾ ಚಳವಳಿ ಎಪ್ಪತೈದನೇ ವರ್ಷಾಚರಣೆ ಅಂಗವಾಗಿ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ತನಕ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಜಾಥಾ ನಡೆಸಿದರು.
ವಿವಿಧ ನಾಯಕರು ಭಾಗಿ
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ವಿವಿಧ ಸಚಿವರು ಸೇರಿದಂತೆ ಹಲವಾರು ನಾಯಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.