ನೈರುತ್ಯ ಮುಂಗಾರಿಗೆ ಮುನ್ನ ಹವಾಮಾನ ಇಲಾಖೆ ನಿರ್ದೇಶಕರ ಸಂದರ್ಶನ
ಬೆಂಗಳೂರು, ಮೇ 23: ಈ ಬಾರಿ ನೈರುತ್ಯ ಮುಂಗಾರು ಸಮಾಧಾನಕರವಾಗಿರಲಿದೆ. ಇಡೀ ದೇಶದಲ್ಲಿ ಶೇ 96ರಷ್ಟು ಮಳೆಯಾಗಲಿದೆ ಎಂಬ ನಿರೀಕ್ಷೆ ಇದ್ದು, ಶೇ 4ರಷ್ಟು ಹೆಚ್ಚು ಅಥವಾ ಕಡಿಮೆ ಮಳೆ ಆಗಬಹುದು. ಇದೇ ಕರ್ನಾಟಕಕ್ಕೂ ಅನ್ವಯಿಸಲಿದೆ ಎಂಬ ಮಾತನ್ನು ಹವಾಮಾನ ಇಲಾಖೆಯ ನಿರ್ದೇಶಕರಾದ ಸುಂದರ್ ಎಂ ಮೇತ್ರಿ ಹೇಳಿದ್ದಾರೆ.
ಒನ್ಇಂಡಿಯಾ ಕನ್ನಡದ ಜತೆ ನೈರುತ್ಯ ಮುಂಗಾರು ಮಳೆ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ತುಂಬ ಆಸಕ್ತಿಕರವಾದ ಪ್ರಶ್ನೋತ್ತರ ಇಲ್ಲಿದೆ.
* ಈ ಸಲದ ಮುಂಗಾರು ಮಳೆ ಹೇಗಾಗಹುದು?
ದೇಶಾದ್ಯಂತ ಶೇ 96ರಷ್ಟು ಮಳೆಯಾಗುವ ಅಂದಾಜಿದೆ. ಅದೇ ಪ್ರಮಾಣದಲ್ಲಿ ಕರ್ನಾಟಕದಲ್ಲೂ ಆಗುತ್ತದೆ.
* ಕಳೆದ ವರ್ಷಗಳಲ್ಲಿ ಏಕೆ ಮಳೆ ಕೈ ಕೊಟ್ಟಿದ್ದು?
ಅದು ಎಲ್ ನೀನೊ ಪರಿಣಾಮ. ಈ ಸಲ ಹಾಗಾಗುವುದಿಲ್ಲ.
*ಮುಂಗಾರು ಕರ್ನಾಟಕದೊಳಗೆ ಯಾವಾಗ ಪ್ರವೇಶ ಆಗುತ್ತದೆ?
ಕೇರಳಕ್ಕೆ ಮೇ 30ಕ್ಕೆ ಪ್ರವೇಶ ಆಗಬಹುದು. ಅಲ್ಲಿ ಪ್ರವೇಶ ಆಗೋದು ಮೂರು ದಿನ ಹೆಚ್ಚು-ಕಡಿಮೆ ಆಗಬಹುದು. ಅಲ್ಲಿ ಬಂದ ಮೂರು ದಿನಕ್ಕೆ ಕರ್ನಾಟಕ ಪ್ರವೇಶ ಆಗುತ್ತದೆ.
* ಹವಾಮಾನ ಇಲಾಖೆಯಿಂದ ರೈತರಿಗೆ ಏನು ಪ್ರಯೋಜನ?
ನಮ್ಮ ವೆಬ್ ಸೈಟ್ ನಲ್ಲಿ ರೈತರು ನೋಂದಣಿ ಮಾಡಿಕೊಂಡರೆ ಅವರಿಗೆ ಮಳೆ ಹಾಗೂ ಹವಾಮಾನದ ಮಾಹಿತಿ ಕೊಡ್ತೀವಿ. ಅದರಿಂದ ಅವರಿಗೆ ಅನುಕೂಲವಾಗುತ್ತದೆ.
* ಮಳೆ ಪ್ರಮಾಣದ ಆಧಾರದಲ್ಲಿ ಕಡಿಮೆ ಎಂಬುದನ್ನು ಹೇಗೆ ನಿರ್ಧರಿಸುತ್ತೀರಿ?
ಸರಾಸರಿ ಮಳೆಗಿಂತ ಶೇ 9ರಿಂದ ಶೇ -19ರವರೆಗೆ ಅದನ್ನು ಸರಾಸರಿ ಮಳೆ ಅಂತಲೇ ಪರಿಗಣಿಸುತ್ತೀವಿ.
* ಈ ಬಗ್ಗೆ ಇನ್ನೊಂದಿಷ್ಟು ವಿವರವನ್ನು ಹೇಳ್ತೀರಾ?
ಕಳೆದ ವರ್ಷ ಬೀದರ್ ನಲ್ಲಿ 102.3 ಸೆಂ.ಮೀ ಮಳೆ ಆಗಿತ್ತು. ಅಲ್ಲಿ ಸರಾಸರಿ ಮಳೆ 69.4 ಸೆಂ.ಮೀ. ಅಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿತ್ತು. ಇನ್ನು ಚಿಕ್ಕಮಗಳೂರಿನಲ್ಲಿ 106.2 ಸೆಂ.ಮೀ ಮಳೆಯಾಗಿತ್ತು. ಅಲ್ಲಿನ ವಾಡಿಕೆ ಮಳೆ 165.7 ಸೆಮೀ. ಅಂದರೆ -36. ಮಳೆ ಪ್ರಮಾಣದ ಪ್ರಕಾರ ಅದು ಬರಗಾಲ ಅಂತಲೇ. ಇನ್ನು ಕೋಲಾರದಲ್ಲಿ 32.8 ಸೆಂಮೀ ಮಳೆಯಾಗಿತ್ತು. ಅಲ್ಲಿನ ಸರಾಸರಿ ಮಳೆ ಪ್ರಮಾಣ 38.2 ಸೆಂಮೀ. ಅಂದರೆ -14 ಅಷ್ಟೇ ಮಳೆ ಪ್ರಮಾಣ ಕಡಿಮೆ ಆದ ಹಾಗಾಯ್ತು.
* ಕೆಲವು ಜಿಲ್ಲೆಗಳಲ್ಲಿ ಮಳೆ ಚೆನ್ನಾಗಿದೆ ಎಂಬ ಸಂಖ್ಯೆ ತೋರಿಸಿರುತ್ತದೆ. ಆದರೆ ಕೆಲ ತಾಲೂಕು ಹಾಗೂ ಹೋಬಳಿ ಕೇಂದ್ರದಲ್ಲಿ ಮಳೆ ಆಗಿರಲ್ವಲ್ಲ?
ನಿಜ. ಮಳೆ ಮಾಪನ ಕೇಂದ್ರಗಳನ್ನು ಎಲ್ಲ ಕಡೆ ಮಾಡುವುದಕ್ಕಾಗಲ್ಲ. ಆಯಾ ಜಿಲ್ಲಾ ಕೇಂದ್ರದಲ್ಲಿನ ಮಾಪನಗಳನ್ನು ಲೆಕ್ಕಕ್ಕೆ ತೆಗೆದುಕೊಳ್ತೀವಿ. ಕೆಲವು ಕಡೆ ತಾಲೂಕು ಮಟ್ಟದಲ್ಲೂ ಇರುತ್ತದೆ. ಎಲ್ಲ ಕಡೆ ಇರಿಸುವುದು ಸಾಧ್ಯವಿಲ್ಲ.
* ಆದರೆ ಬರ ಪರಿಹಾರ ವಿತರಿಸುವಾಗ ಮಳೆ ಪ್ರಮಾಣವನ್ನು ಲೆಕ್ಕಕ್ಕೆ ತೆಗೆದುಕೊಳ್ತಾರಲ್ವ?
ಹೌದು. ಕೆಲ ಹೋಬಳಿ ಕೇಂದ್ರದವರು ನಮ್ಮ ಬಳಿ ಮಾಹಿತಿ ಕೇಳಿದರೆ, ಹತ್ತಿರದಲ್ಲಿರುವ ಮಾಪನ ಕೇಂದ್ರದ ಮಾಹಿತಿ ನೀಡಬಹುದು ಅಷ್ಟೇ.
* ಜನ ಸಾಮಾನ್ಯರಿಗೆ, ರೈತರಿಗೆ ನಿಮ್ಮ ಇಲಾಖೆ ಉಪಯೋಗ ಏನು?
ರೈತರು ಬಿತ್ತನೆ ವೇಳೆ, ಜನ ಸಾಮಾನ್ಯರು ತಮ್ಮ ಪ್ರವಾಸ ಮತ್ತಿತರ ಕಾರ್ಯಕ್ರಮ ಹಾಕಿಕೊಳ್ಳುವಾಗ ನಮ್ಮ ವೆಬ್ ಸೈಟ್ ನಿಂದ ಮಾಹಿತಿ ಪಡೆಯಬಹುದು.