ತರಾತುರಿಯಲ್ಲಿ ಸಿಎಂ ಹುದ್ದೆಗೆ ಶಶಿಕಲಾ: ಪ್ರಧಾನಿ ಮೋದಿ ಭಯ ಕಾಡಿತೇ?
ಚೆನ್ನೈನಲ್ಲಿ ನಡೆಯುತ್ತಿರುವ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ, ಶಶಿಕಲಾ ನಟರಾಜನ್ ತಮಿಳುನಾಡು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯ ರಾಜಕೀಯ ತಂತ್ರಗಾರಿಕೆಗೆ ಹೆದರಿ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ತರಾತುರಿಯಲ್ಲಿ ಮುಖ್ಯಮಂತ್ರಿ ಹುದ್ದೆಗೇರಲು ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಕಳೆದ ವರ್ಷ ಡಿಸೆಂಬರ್ ಐದರಂದು ಸಿಎಂ ಜಯಲಲಿತಾ ನಿಧನ ಹೊಂದಿದರು ಎಂದು ಅಪೋಲೋ ಆಸ್ಪತ್ರೆ ಅಧಿಕೃತವಾಗಿ ಪ್ರಕಟಿಸಿದ್ದರೂ, ಜಯಾ ಸಾವನ್ನಪ್ಪಿದ ಸರಿಯಾದ ದಿನಾಂಕ ಯಾವುದು ಎನ್ನುವ ಮಾಹಿತಿ ಇರುವುದು ಶಶಿಕಲಾಗೆ ಮಾತ್ರ ಎನ್ನುವ ಮಾತೂ ಕೇಳಿ ಬರುತ್ತಿರುವುದು ಹೊಸದೇನಲ್ಲ.
ಜಯಾ ಜೀವಿತಾವಧಿಯಲ್ಲೂ ಅಸಾಧಾರಣ ತಂತ್ರಗಾರಿಕೆ ರೂಪಿಸುವಲ್ಲಿ ಹೆಸರಾಗಿದ್ದ ಶಶಿಕಲಾಗೆ, ಜಯಾ ನಿಧನದ ನಂತರ ತಾನು ಬಿಟ್ಟು ಇನ್ನೊಬ್ಬರು ಪಕ್ಷದಲ್ಲಿ ಹಿಡಿತ ಸಾಧಿಸುವುದು ಬೇಕಾಗಿಲ್ಲ ಎನ್ನುವುದಕ್ಕೆ ಹಲವು ರಾಜಕೀಯ ಬೆಳವಣಿಗೆಗಳು ಸಾಕ್ಷಿಯಾಗಿವೆ.
ಜಯಾ ನಿಧನದ ನಂತರ ಶಶಿಕಲಾ ಮುಖ್ಯಮಂತ್ರಿಯಾಗಬೇಕು ಎನ್ನುವ ಒತ್ತಾಯ ಈಗ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಭಾನುವಾರ (ಫೆ 5) ಚೆನ್ನೈನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುತ್ತಿದೆ.
ಚೆನ್ನೈ ಕಡಲತೀರದಲ್ಲಿ ತೈಲ ಸೋರಿಕೆಯಾದ ನಂತರ, ಮೀನುಗಾರರನ್ನು ಭೇಟಿಯಾಗಲು ಹೊರಟಿದ್ದ ಸಿಎಂ ಪನ್ನೀರ್ ಸೆಲ್ವಂಗೆ ತುರ್ತಾಗಿ ಪೋಯಿಸ್ ಗಾರ್ಡನ್ ಗೆ ಬರುವಂತೆ ಭಾನುವಾರ ಶಶಿಕಲಾ ಆದೇಶ ನೀಡಿದ್ದಾರೆ.
ಒಂದು ಮೂಲಗಳ ಪ್ರಕಾರ ಪ್ರಧಾನಮಂತ್ರಿ ನರೇಂದ್ರ ಮೋದಿ ತಮಿಳುನಾಡು ರಾಜಕೀಯದಲ್ಲಿ ಹಿಡಿತ ಸಾಧಿಸಲು ಮುಂದಾಗುತ್ತಿದ್ದಾರೆ ಎನ್ನುವ ಬೆಳವಣಿಗೆಯಿಂದ ಶಶಿಕಲಾ ತುರ್ತಾಗಿ ಮುಖ್ಯಮಂತ್ರಿ ಹುದ್ದೆಗೆ ಏರಲು ಸಜ್ಜಾಗುತ್ತಿದ್ದಾರೆ. ಇಂದು ಅಥವಾ ನಾಳೆ (ಫೆ 6) ಶಶಿಕಲಾ ತಮಿಳುನಾಡು ಸಿಎಂ ಆದರೂ ಆಶ್ಚರ್ಯ ಪಡಬೇಕಾಗಿಲ್ಲ. ಮುಂದೆ ಓದಿ..
ಶೀಲಾ ಬಾಲಕೃಷ್ಣನ್, ಮತ್ತಿಬ್ಬರು ಹೊರಕ್ಕೆ
ಜಯಲಲಿತಾ ಅವರ ಪರಮಾಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದ, ಮುಖ್ಯ ಕಾರ್ಯದರ್ಶಿ ಶೀಲಾ ಬಾಲಕೃಷ್ಣನ್, ಸಿಎಂ ಕಚೇರಿಯ ನಂಬರ್ 1 ಕೆ ಎನ್ ವೆಂಕಟರಾಮನ್ ಮತ್ತು ನಂಬರ್ 4 ಎ ರಾಮಲಿಂಗಂ ಹುದ್ದೆ ತೊರೆಯುವ ಹಿಂದೆ ಇರುವುದು ಶಶಿಕಲಾ ರಣತಂತ್ರ ಎನ್ನುವ ಮಾತಿದೆ. (ಚಿತ್ರದಲ್ಲಿ ಶೀಲಾ ಬಾಲಕೃಷ್ಣನ್)
ಪ್ರಧಾನಿ ಮಧ್ಯಪ್ರವೇಶ
ಜಯಾ ಆರೋಗ್ಯದ ಬಗ್ಗೆ ದಿನದಿಂದ ದಿನಕ್ಕೆ ಹಬ್ಬುತ್ತಿದ್ದ ಊಹಾಪೋಹ ಸುದ್ದಿಯ ನಡುವೆ ಅಂತಿಮ ಕ್ಷಣದಲ್ಲಿ ವೆಂಕಯ್ಯ ನಾಯ್ಡು ಮುಖಾಂತರ ಪ್ರಧಾನಿ ಮಧ್ಯಪ್ರವೇಶಿಸಿದ್ದರು, ಇದಾದ ನಂತರವೇ ಜಯಲಲಿತಾ ಸಾವಿನ ಸುದ್ದಿ ಪ್ರಕಟಿಸಲಾಯಿತು ಎನ್ನುವ ಸುದ್ದಿಯೂ ಹಿಂದೆ ಹರಿದಾಡುತ್ತಿತ್ತು.
ಪ್ರಧಾನಿ ಜೊತೆ ಓಪಿಎಸ್ ಬಾಂಧವ್ಯ
ದುರಾದೃಷ್ಟವಂತ ಮುಖ್ಯಮಂತ್ರಿ ಎಂದೇ ಕರೆಯಲ್ಪಡುವ ಓ ಪನ್ನೀರ್ ಸೆಲ್ವಂ ಜಯಾ ನಿಧನದ ನಂತರ ಮೂರನೇ ಬಾರಿಗೆ ತಮಿಳುನಾಡು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಇದಾದ ನಂತರ ಪನ್ನೀರ್ ಸೆಲ್ವಂ ಮತ್ತು ಪ್ರಧಾನಿಯ ಬಾಂಧವ್ಯ ದಿನದಿಂದ ದಿನಕ್ಕೆ ವೃದ್ದಿಯಾಯಿತು.
ದೆಹಲಿಗೆ ಹೋದಾಗಲೆಲ್ಲಾ ಪ್ರಧಾನಿ ಭೇಟಿಯ ಅವಕಾಶ
ಕರ್ನಾಟಕದ ಸಿಎಂ ಸಿದ್ದರಾಮಯ್ಯನವರಿಗೆ ಸಿಗದ ಪ್ರಧಾನಿ ಭೇಟಿಯಾಗುವ ಅವಕಾಶ ಪನ್ನೀರ್ ಸೆಲ್ವಂಗೆ ಸಿಕ್ಕಿತು. ಬರ ಪರಿಹಾರದಿಂದ ಹಿಡಿದು, ಜಲ್ಲಿಕಟ್ಟು ವಿವಾದ ತಾರಕಕ್ಕೇರಿದಾಗಲೂ, ಪ್ರಧಾನಿ ತಮಿಳುನಾಡು ಪರವಾಗಿ ನಿಂತು ಪನ್ನೀರ್ ಸೆಲ್ವಂಗೆ ಅಭಯ ನೀಡಿದರು.
ಶಶಿಕಲಾಗೆ ಕಾಡಿದ ಭಯ
ದಿನದಿಂದ ದಿನಕ್ಕೆ ಪನ್ನೀರ್ ಸೆಲ್ವಂ ಪ್ರಧಾನಿಗೆ ಹತ್ತಿರವಾಗುತ್ತಿರುವುದು, ತನ್ನ ಸಿಎಂ ಕನಸಿಗೆ ಸಂಚಕಾರ ತರಬಹುದು ಎನ್ನುವ ರಾಜಕೀಯ ಲೆಕ್ಕಾಚಾರವೇ ಶಶಿಕಲಾ ತುರ್ತಾಗಿ ಮುಖ್ಯಮಂತ್ರಿಯಾಗಲು ಸಿದ್ದತೆ ನಡೆಸಿಕೊಳ್ಳುತ್ತಿರುವುದು ಎಂದು ತಮಿಳುನಾಡು ರಾಜಕೀಯ ಅಂಗಣದಲ್ಲಿ ಹರಿದಾಡುತ್ತಿರುವ ಸುದ್ದಿ.
ಚೆನ್ನೈನಲ್ಲಿ ಮಹತ್ವದ ಬೆಳವಣಿಗೆಗಳು
ಈ ಎಲ್ಲಾ ಘಟನೆಗಳಿಗೆ ಪೂರಕ ಎನ್ನುವಂತೆ ಭಾನುವಾರ ಚೆನ್ನೈನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಎಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆ ಭಾನುವಾರ ಸಂಜೆ (Feb 5) ಆಯೋಜಿಸಲಾಗಿದ್ದರೆ, ಅದಕ್ಕೂ ಮುನ್ನ ಪನ್ನೀರ್ ಸೆಲ್ವಂಗೆ ಶಶಿಕಲಾ ಅವರಿಂದ ಬುಲಾವ್ ಬಂದಿದೆ.
ಪನ್ನೀರ್ ಸೆಲ್ವಂ ಮತ್ತೊಮ್ಮೆ ಬಲಿಪಶು
ತಮಿಳುನಾಡು ರಾಜಕೀಯದಲ್ಲಿ ಮೇಲ್ನೋಟಕ್ಕೆ ಪ್ರಾಮಾಣಿಕ ಪೊಲಿಟಿಸಿಯನ್ ಎಂದೇ ಕರೆಯಲ್ಪಡುವ ಪನ್ನೀರ್ ಸೆಲ್ವಂ ಮತ್ತೊಮ್ಮೆ ಶಶಿಕಲಾ ರಾಜಕೀಯ ಮೇಲಾಟದಲ್ಲಿ ಬಲಿಪಶುವಾಗುವುದು ಹೆಚ್ಚುಕಮ್ಮಿ ಬಹುತೇಕ ನಿಶ್ಚಿತ. ಆದರೂ ಮೂರು ಬಾರಿ ಸಿಎಂ ಪದವಿ ಕಳೆದುಕೊಂಡರೂ ರಾಜಕೀಯದಲ್ಲಿ ಈ ಮಟ್ಟಿನ ನಿಷ್ಠರು ಇರುತ್ತಾರೆಂದರೆ, ಅಂತವರನ್ನು ಪಡೆದ ಇಂತವರೇ ಧನ್ಯರು.