ಮೆಟ್ರೋ ಉದ್ಘಾಟನೆ: ಪ್ರಧಾನಮಂತ್ರಿ ಕಚೇರಿಯ ಅಚ್ಚರಿಯ ನಿರ್ಧಾರ
ಕೇರಳದ ಮೊಟ್ಟಮೊದಲ 'ಕೊಚ್ಚಿ ಮೆಟ್ರೋ' ಕಾರ್ಯಕ್ರಮದ ಆಯೋಜಕರ ನಿರ್ಧಾರ ಹೊಸ ವಿವಾದವನ್ನು ಹುಟ್ಟುಹಾಕಿದೆ. 'ಮೆಟ್ರೋ ಮ್ಯಾನ್' ಇ. ಶ್ರೀಧರನ್ ಅವರನ್ನು ವೇದಿಕೆಯಲ್ಲಿ ಕುಳಿತುಕೊಳ್ಳುವ ಗಣ್ಯರ ಪಟ್ಟಿಯಿಂದ ಹೊರಗಿಡಲಾಗಿದೆ.
ನವದೆಹಲಿ, ಜೂ 15: ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಳ್ಳಲಿರುವ ಕೇರಳದ ಮೊಟ್ಟಮೊದಲ 'ಕೊಚ್ಚಿ ಮೆಟ್ರೋ' ಕಾರ್ಯಕ್ರಮದ ಆಯೋಜಕರ ನಿರ್ಧಾರ ಹೊಸ ವಿವಾದವನ್ನು ಹುಟ್ಟುಹಾಕಿದೆ.
ಇದೇ ಶನಿವಾರ (ಜೂ 17) ಕೊಚ್ಚಿ ಮೆಟ್ರೋ ಸೇವೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ದೇಶದ 'ಮೆಟ್ರೋ ಮ್ಯಾನ್' ಎಂದೇ ಹೆಸರಾಗಿರುವ ಇ. ಶ್ರೀಧರನ್ ಅವರನ್ನು ವೇದಿಕೆಯಲ್ಲಿ ಕುಳಿತುಕೊಳ್ಳುವ ಗಣ್ಯರ ಪಟ್ಟಿಯಿಂದ ಆಯೋಜಕರು ಹೊರಗಿಟ್ಟಿದ್ದಾರೆ.
ಕೇರಳದಲ್ಲಿ ಶೃಂಗೇರಿ ಶ್ರೀಗಳಿಗೆ ಅವಮಾನ
ಒಟ್ಟು 25 ಕಿ.ಮೀ ಯೋಜನೆಯ ಮೆಟ್ರೋ ಸೇವೆಯ ಮೊದಲ ಹಂತದ, 13ಕಿ.ಮೀ ದೂರದ ರೈಲು ಸೇವೆ ಶನಿವಾರದಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಕೊಚ್ಚಿ ನಗರದ ಪಲಾರಿವಟ್ಟಂ ಮತ್ತು ಆಲುವಾ ನಡುವಿನ ಮೆಟ್ರೋ ಸಂಚಾರ ಶನಿವಾರದಿಂದ ಆರಂಭವಾಗಲಿದೆ.
ಪ್ರಧಾನಿ ಮೋದಿ, ಕೇರಳ ರಾಜ್ಯಪಾಲ ಪಿ ಸದಾಶಿವಂ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮತ್ತು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮಾತ್ರ ವೇದಿಕೆಯಲ್ಲಿ ಆಸನ ಕಲ್ಪಿಸಲು ಕೊಚ್ಚಿ ಮೆಟ್ರೋ ರೈಲು ಕಾರ್ಪೋರೇಶನ್ ನಿರ್ಧರಿಸಿದೆ.
ಆದರೆ, ಶ್ರೀಧರನ್ ಅವರನ್ನು ವೇದಿಕೆಯಲ್ಲಿ ಕುಳಿತುಕೊಳ್ಳುವ ಗಣ್ಯರ ಪಟ್ಟಿಯಿಂದ ಕೈಬಿಟ್ಟಿರುವುದು ನಮ್ಮ ನಿರ್ಧಾರವಲ್ಲ, ಅದೇನಿದ್ದರೂ ಪ್ರಧಾನಮಂತ್ರಿ ಕಾರ್ಯಾಲಯದ ನಿರ್ಧಾರ ಎಂದು ಕೊಚ್ಚಿ ಮೆಟ್ರೋ ರೈಲು ಕಾರ್ಪೋರೇಶನ್ ಎಂಡಿ ಇ. ಜಾರ್ಜ್, ಕೇಂದ್ರ ಸರಕಾರದ ಕಡೆ ಬೊಟ್ಟು ಮಾಡಿದ್ದಾರೆ.
ಶ್ರೀಧರನ್ ಜೊತೆ, ಹಾಲೀ ಕೇರಳ ಅಸೆಂಬ್ಲಿಯ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಾಲ, ಮಾಜಿ ಸಿಎಂ ಒಮನ್ ಚಾಂಡಿ, ಸ್ಥಳೀಯ ಸಂಸದ ಕೆ ವಿ ಥಾಮಸ್ ಮತ್ತು ಕ್ಷೇತ್ರದ ಶಾಸಕ ಪಿ ಟಿ ಥಾಮಸ್ ಅವರನ್ನೂ ವೇದಿಕೆಯಲ್ಲಿ ಕುಳಿತುಕೊಳ್ಳುವ ಗಣ್ಯರ ಪಟ್ಟಿಯಿಂದ ಪ್ರಧಾನಮಂತ್ರಿ ಕಚೇರಿ ಹೊರಗಿಡುವ ಅಚ್ಚರಿಯ ನಿರ್ಧಾರಕ್ಕೆ ಬಂದಿದೆ.
ಮಾಜೀ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಶಂಕುಸ್ಥಾಪನೆಗೊಂಡಿದ್ದ ಕೇರಳದ ಕನಸಿನ 'ಕೊಚ್ಚಿ ಮೆಟ್ರೋ' ಪ್ರಾಜೆಕ್ಟ್ ಸಾಕಾರಗೊಳ್ಳಲು ಪ್ರಯತ್ನಿಸಿದ್ದ ಹಲವು ಪ್ರಮುಖರನ್ನು, ವೇದಿಕೆಯಿಂದ ದೂರವಿಟ್ಟಿದ್ದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.