ಜೀವನದುದ್ದಕ್ಕೂ ಕರ್ನಾಟಕದ ಪಾಲಿಗೆ ' ವಿಲನ್' ಆದ ಜಯಲಲಿತಾ
ವಿಧಿವಶರಾದ ಜಯಲಲಿತಾ ತನ್ನ ರಾಜಕೀಯ ಜೀವನದುದ್ದಕ್ಕೂ ಕರ್ನಾಟಕದ ಪಾಲಿಗೆ ' ವಿಲನ್' ಆಗಿದ್ದೇ ಹೆಚ್ಚು. ಜಯಲಲಿತಾ ಮುಖ್ಯಮಂತ್ರಿ ಆದಾಗಲೆಲ್ಲಾ ಕಾವೇರಿ ನದಿನೀರು ಹಂಚಿಕೆ ವಿವಾದ ಮತ್ತೆ ಮತ್ತೆ ಭುಗಿಲೇಳುತ್ತಿತ್ತು.
ಸತ್ತವರು ದೇವರಿಗೆ ಸಮಾನ ಎನ್ನುವ ಮಾತಿದೆ. ಆದರೂ, ಸೋಮವಾರ (ಡಿ 5) ವಿಧಿವಶರಾದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತು ಕರ್ನಾಟಕದ ನಡುವಿನ ಸಂಬಂಧ ಯಾವ ರೀತಿ ಇತ್ತು ಎನ್ನುವುದಕ್ಕಿಂತ ತನ್ನ ರಾಜಕೀಯ ಜೀವನದುದ್ದಕ್ಕೂ ಆಕೆ ಕರ್ನಾಟಕದ ಪಾಲಿಗೆ ' ವಿಲನ್' ಆಗಿದ್ದೇ ಹೆಚ್ಚು.
[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]
ಕರ್ನಾಟಕ ಮೂಲದ ನಾಯಕಿ ಎನ್ನುವ ಭಾವನೆ ತಮಿಳುನಾಡಿನ ಜನರಿಗೆ ಬರಬಾರದು ಎನ್ನುವ ಒಂದಂಶವನ್ನು ಇಟ್ಟುಕೊಂಡು ರಾಜಕೀಯ ಮಾಡಿಕೊಂಡು ಬಂದ ಜಯಾ, ರಾಜ್ಯದ ವಿರುದ್ದ ನಿಲುವನ್ನೇ ತಾಳಿಕೊಂಡು ಬಂದವರು.
ಜಯಲಲಿತಾ ಮುಖ್ಯಮಂತ್ರಿ ಆದಾಗಲೆಲ್ಲಾ ಕಾವೇರಿ ನದಿನೀರು ಹಂಚಿಕೆ ವಿವಾದ ಮತ್ತೆ ಮತ್ತೆ ಭುಗಿಲೇಳುತ್ತಿತ್ತು. ರಾಜ್ಯದ ಹಿತಕ್ಕಾಗಿ ಕಠಿಣ ನಿಲುವು ತಾಳುವ ಇಂತಹ ನಾಯಕಿ ನಮಗೂ ಸಿಗಬಾರದೇ ಎಂದು ಇತರರು ಅಸೂಹೆ ಪಡುವಂತೆ ತಮಿಳುನಾಡು ಜನರ ಪರವಾಗಿ ನಿಂತವರು ಜಯಲಲಿತಾ.
24.02.1948ರಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯ ಐಯ್ಯಂಗಾರಿ ಕುಟುಂಬದಲ್ಲಿ ಹುಟ್ಟಿದ ಜಯಾ, ರಾಜಕೀಯವಾಗಿ ನೆಲೆಕೆಂಡಿದ್ದು ಎಂಜಿಆರ್ ನೆರಳಿನಲ್ಲಿ. ಎಂಜಿಆರ್ ನಂತರ ತಮಿಳುನಾಡು ರಾಜಕೀಯದಲ್ಲಿ ಹಿರಿಯ ನಾಯಕ ಕರುಣಾನಿಧಿಗೆ ಸರಿಸಮನಾಗಿ ಪೈಪೋಟಿ ನೀಡಿದವರು ಜಯಲಲಿತಾ.
ದಶಕಗಳಿಂದ ಜ್ವಲಂತ ಸಮಸ್ಯೆಯಾಗಿರುವ ಕಾವೇರಿ ನದಿನೀರು ಹಂಚಿಕೆ ವಿವಾದದಿಂದಾಗಿ ಕರ್ನಾಟಕ ಮತ್ತು ತಮಿಳುನಾಡು ಜನರ ನಡುವಿನ ಬಾಂಧವ್ಯ ಕೂಡಾ ಅಷ್ಟಕಷ್ಟೇ.. ಇದಕ್ಕೇ ಏನೋ ಜಯಲಲಿತಾ ತನ್ನ ತಮಿಳು ಪ್ರೇಮ ತೋರಲು ಕರ್ನಾಟಕದ ಜೊತೆ ಕಾವೇರಿ ನೀರಿಗಾಗಿ ತಕರಾರಿಗೆ ಬಿದ್ದಿದ್ದೇ ಹೆಚ್ಚು. ಮುಂದೆ ಓದಿ..
ಕರುಣಾನಿಧಿ
ತಮಿಳುನಾಡಿನ ಇತ್ತೀಚಿನ ಹಲವು ಅಸೆಂಬ್ಲಿ ಚುನಾವಣೆಗಳಲ್ಲಿ ಒಂದೋ ಡಿಎಂಕೆ ಇಲ್ಲವೋ ಎಐಡಿಎಂಕೆ ಎಂದು ಎರಡು ಪಕ್ಷಗಳ ನಡುವೆ ತಮಿಳುನಾಡು ರಾಜ್ಯಭಾರ ಬದಲಾವಣೆಯಾಗುತ್ತಿದೆ. ಆದರೆ, ಡಿಎಂಕೆ ಅಧಿಕಾರದಲ್ಲಿದ್ದಾಗ ಎರಡು ರಾಜ್ಯಗಳ ನಡುವೆ ಕಾವೇರಿ ಸಮಸ್ಯೆ ಉಲ್ಬಣಗೊಂಡಿದ್ದು ಕಮ್ಮಿ. ಉದಾಹರಣೆಗಳಿದ್ದರೂ ಅಪರೂಪ. ಇದಕ್ಕಿಂತ ಹೆಚ್ಚಾಗಿ ಈ ವಿಚಾರದಲ್ಲಿ ಕರುಣಾನಿಧಿ ರಾಜಕೀಯ ಮಾಡಿಲ್ಲ ಎನ್ನುವುದೇ ಹೆಚ್ಚು ಸೂಕ್ತ.
ಜಯಲಲಿತಾ
ಜಯಲಲಿತಾ ಸಿಎಂ ಆದಾಗ ಕಾವೇರಿ ಸಮಸ್ಯೆ ಶುರುವಾಗುವುದು ಮಾಮೂಲಿಯಂತಾಗಿತ್ತು. ತನ್ನ ರಾಜ್ಯದ ಪಾಲಿನ ನೀರಿಗಾಗಿ ಕರ್ನಾಟಕದ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲೂ ಮುಂದಾಗದ ಜಯಾ, ನೀರಿಗಾಗಿ ಸೀದಾ ನ್ಯಾಯಾಧೀಕರಣ ಅಥವಾ ಕೋರ್ಟ್ ಮೆಟ್ಟಲೇರುತ್ತಿದ್ದರು. ಬಯಸಿದ್ದನ್ನು ಪಡೆಯುತ್ತಿದ್ದರು.
ಬಂಗಾರಪ್ಪ ಅವಧಿ
ಜಯಾ ಸಿಎಂ ಆದಾಗಲೆಲ್ಲಾ ಕಾವೇರಿ ಕಣಿವೆಯ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದರು. ಜಯಾ ಮೊದಲ ಬಾರಿಗೆ ಸಿಎಂ ಆದಾಗ, 1990ರಲ್ಲಿ ನ್ಯಾಯಾಧಿಕರಣ ರಚನೆಗೆ ಸುಪ್ರೀಂ ಆದೇಶ ನೀಡಿತ್ತು. 1991ರ ಅಂತ್ಯದಲ್ಲಿ 205 ಟಿಎಂಸಿ ನೀರು ತಮಿಳುನಾಡಿಗೆ ಬಿಡುವಂತೆ ಸುಪ್ರೀಂ, ರಾಜ್ಯದ ಬಂಗಾರಪ್ಪ ಸರಕಾರಕ್ಕೆ ಆದೇಶ ನೀಡಿತ್ತು.
ಎಸ್ ಎಂ ಕೃಷ್ಣ
ಜಯಾ ಮತ್ತೆ ಸಿಎಂ ಆದಾಗ ರಾಜ್ಯದಲ್ಲಿ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಮತ್ತೆ ಕಾವೇರಿ ವಿವಾದ ಭುಗಿಲೆದ್ದಿತು. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನೀರು ಬೇಕೇ ಬೇಕೇ ಎಂದು ಹಠ ಹಿಡಿದ ಜಯಾ, ಇಲ್ಲೂ ಯಶಸ್ವಿಯಾದರು.
ಜಗದೀಶ್ ಶೆಟ್ಟರ್
2012ರಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ವೇಳೆಯೂ ಮತ್ತೆ ಕಾವೇರಿ ಸಮಸ್ಯೆಯನ್ನು ಜಯಾ ಕೆದಕಿದರು. ಸುಪ್ರೀಂ ಮತ್ತು ನ್ಯಾಯಾಧೀಕರಣದ ಮುಂದೆ ತಮಿಳುನಾಡು ವಕೀಲರು ಸಮರ್ಥವಾಗಿ ಮಂಡಿಸಿದರು. ಮತ್ತೆ ಕಾವೇರಿ ನೀರು ಬಿಡುವ ಅನಿವಾರ್ಯತೆಗೆ ರಾಜ್ಯ ಬಿದ್ದಿತು. ಅದ್ಯಾವುದಕ್ಕೂ ಕ್ಯಾರೇ ಮಾಡದ ಜಯಾ ಬಗ್ಗೆ ಕನ್ನಡಿಗರ ಕೋಪ ದ್ವಿಗುಣಗೊಳ್ಳಲಾರಂಭಿಸಿತು.
ಸಿದ್ದರಾಮಯ್ಯ
ಕೆಲವು ತಿಂಗಳ ಹಿಂದೆ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲೂ ಜಯಾ, ಕಾವೇರಿ ವಿಚಾರದಲ್ಲಿ ಕರ್ನಾಟಕವನ್ನು ಕೋರ್ಟಿಗೆ ಎಳೆದದ್ದು ಕಣ್ಮುಂದಿದೆ. ಕನ್ನಡಿಗರಿಗೆ ಜಯಾ ವಿರುದ್ದದ ಆಕ್ರೋಶ ಅವರಿಗೆ ಪಿಂಡ, ತಿಥಿ ಇಡುವ ಮಟ್ಟಕ್ಕೆ ಹೋಗಿದ್ದು ಪ್ರತಿಭಟನೆ ವೇಳೆ ನೋಡಿದ್ದಾಗಿದೆ. ಒಟ್ಟಿನಲ್ಲಿ ರಾಜಕೀಯ ಜೀವನದುದ್ದಕ್ಕೂ ಜಯಾ ಕರ್ನಾಟಕದ ಪಾಲಿಗೆ ' ಖಳನಾಯಕಿ' ಯಾಗಿಯೇ ಇದ್ದುಬಿಟ್ಟರು. ಎನಿ ವೇ.. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವುದು ಕನ್ನಡಿಗರ ಉದಾತ್ತ ಗುಣ.