ಭಕ್ತಿಯ ಅತಿರೇಕವೋ, ಮೂಢತನದ ಪರಮಾವಧಿಯೋ?
ಜಲಂಧರ್, ಡಿ. 15: ಭಾರೀ ಮಳೆ ಮತ್ತು ಚಳಿಯ ಮಧ್ಯೆಯೂ ದಿ. ಧರ್ಮಗುರು ಅಶುತೋಶ್ ಮಹಾರಾಜ್ ಅವರ ಭಕ್ತರು ನರ್ಮಹಾಲ್ ಡೆರಾ ಸ್ಥಳದಲ್ಲಿ ಆಯೋಜಿಸಿರುವ ತಿಂಗಳ ಭಂಡಾರಾ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ.
ಹೈ ಕೋರ್ಟ್ ಆದೇಶ ನೀಡಿದ್ದರೂ ಬೆದರದ ಜನರು ಇನ್ನೂ ಮಹಾರಾಜರು ಬದುಕಿ ಬರಲಿದ್ದಾರೆಂದು ನಂಬಿಕೊಂಡಿದ್ದಾರೆ. ಆದ್ದರಿಂದ ಅಶುತೋಷರು ಬದುಕಿಲ್ಲದಿದ್ದರೂ ಅವರೇ ಆರಂಭಿಸಿರುವ ಭಂಡಾರ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದಾರೆ.
ದಿವ್ಯಜ್ಯೋತಿ ಜಾಗೃತಿ ಸಂಸ್ಥಾನ ಆಯೋಜಿಸಿರುವ ಈ ಮಾಸಿಕ ಭಂಡಾರಾ ಕಾರ್ಯಕ್ರಮದಲ್ಲಿ 60 ರಿಂದ 75 ಸಾವಿರ ಭಕ್ತರು ಪಾಲ್ಗೊಂಡಿದ್ದಾರೆಂದು ಅಂದಾಜಿಸಲಾಗಿದೆ.
"ಇಲ್ಲಿ ಸೇರಿದ ಎಲ್ಲ ಭಕ್ತರೂ ಅಶುತೋಷ್ ಅವರು ಸಮಾಧಿಯಿಂದ ಎದ್ದು ಬರುತ್ತಾರೆಂದು ನಂಬಿಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಮಾಧಿಯೊಳಗೆ ಹೋಗುವ ಮೊದಲೂ ಅಶುತೋಷ್ ಅವರು ತಾವು ಮತ್ತೆ ದೈನಂದಿನ ಜೀವನಕ್ಕೆ ಮರಳುವುದಾಗಿ ತಿಳಿಸಿದ್ದರು" ಎಂದು ಸಂಸ್ಥಾನದ ವಕ್ತಾರ ಸ್ವಾಮಿ ವಿಶಾಲಾನಂದ ತಿಳಿಸಿದ್ದಾರೆ.
ಭಂಡಾರಾ ಕಾರ್ಯಕ್ರಮವನ್ನು ಪ್ರತಿ ತಿಂಗಳೂ ಏರ್ಪಡಿಸಲಾಗುವುದು. ಎರಡು ದಶಕಗಳಿಂದ ಭಂಡಾರಾ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಇನ್ನು ಮುಂದೆಯೂ ಏರ್ಪಡಿಸುವುದಾಗಿ ಸಂಸ್ಥಾನ ತಿಳಿಸಿದೆ.
ಸ್ವಾಮಿಗಳ ಸಮಾಧಿಗೆ ಅಡ್ಡಿ ಬೇಡ: "ಸ್ವಾಮಿಗಳು ಸಮಾಧಿ (ಆಳ ಪ್ರಾಣಾಯಾಮ)ಯಲ್ಲಿದ್ದಾರೆ. ಯಾರೂ ಕೂಡ ಇದಕ್ಕೆ ಅಡ್ಡಿಪಡಿಸಬಾರದು" ಎಂದು ಡೆರಾ ವಕ್ತಾರರು ಹೇಳಿದ್ದಾರೆ.
ಈ ವರ್ಷ ಜನವರಿ 29ರಂದೇ ಅಶುತೋಷ್ ಮಹಾರಾಜರು ಮೃತಪಟ್ಟಿದ್ದಾರೆಂದು ವೈದ್ಯಕೀಯ ವರದಿ ನೀಡಲಾಗಿತ್ತು. ಆದರೆ, ಮಹಾರಾಜರು ಸಮಾಧಿಯಿಂದ ಜೀವಂತವಾಗಿ ವಾಪಸ್ ಬರಲಿದ್ದಾರೆಂಬ ನಂಬಿಕೆಯಲ್ಲಿ ಅವರ ಶವವನ್ನು ಭಕ್ತರು ಅತ್ಯಂತ ಶಕ್ತಿಯುತ ಫ್ರಿಜ್ನಲ್ಲಿ ರಕ್ಷಿಸಿಟ್ಟಿದ್ದಾರೆ.
ಈ ಕುರಿತು ವಿಚಾರಣೆ ನಡೆಸಿದ ಪಂಜಾಬ್ ಹೈ ಕೋರ್ಟ್ 15 ದಿನಗಳ ಒಳಗೆ ಅಶುತೋಷ್ ಅವರ ಶವ ಸಂಸ್ಕಾರ ನಡೆಸಬೇಕೆಂದು ಸರ್ಕಾರಕ್ಕೆ ಸೂಚಿಸಿತ್ತು. ಇದಕ್ಕಾಗಿ ಜಲಂಧರ್ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನೂ ನೇಮಿಸಿತ್ತು.
ಆದರೆ, ಡಿ. 4ರಂದು ಮೇಲ್ಮನವಿ ಸಲ್ಲಿಸಿದ್ದ ಡೆರಾ, ಅಂತ್ಯ ಸಂಸ್ಕಾರದ ಗಡುವನ್ನು 30 ದಿನಗಳಿಗೆ ವಿಸ್ತರಿಸಬೇಕೆಂದು ಕೋರಿತ್ತು.