ಉಗ್ರರ ನೆಲೆ ಮೇಲೆ ದಾಳಿ: ಮುಂಬೈ ಸೂಚ್ಯಂಕ 500 ಅಂಶ ಬಿತ್ತು
ಬೆಂಗಳೂರು, ಸೆಪ್ಟೆಂಬರ್ 29: ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಸುದ್ದಿ ಹೊರಬೀಳುತ್ತಿದ್ದಂತೆಯೇ ಸೆನ್ಸೆಕ್ಸ್ 500 ಅಂಶ ಬಿದ್ದಿದೆ. ಇನ್ನು ನಿಫ್ಟಿ 125ಕ್ಕೂ ಹೆಚ್ಚು ಅಂಶ ಬಿದ್ದಿದೆ. "ಹೌದು, ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆ ಸುದ್ದಿಯಿಂದಲೇ ಸೂಚ್ಯಂಕ ಬಿದ್ದಿದೆ. ಜತೆಗೆ ಮಾರಾಟದ ಒತ್ತಡವೂ ಹೌದು.
'ಉತ್ತಮವಾದ ಷೇರುಗಳನ್ನು ಖರೀದಿಸುವುದಕ್ಕೆ ಇದನ್ನೇ ಸೂಕ್ತ ಸಮಯ ಮಾಡಿಕೊಳ್ಳಬಹುದು. ಆದರೆ ಶಾರ್ಟ್ ಟರ್ಮ್ ಗುರಿಯೊಂದಿಗೆ ಖರೀದಿಸಬೇಕು. ತುಂಬ ಎಚ್ಚರದಿಂದ ವ್ಯವಹರಿಸಬೇಕು' ಎಂದು ಅಭಿಪ್ರಾಯ ಹಂಚಿಕೊಂಡರು ಅಂಕಣಕಾರ ಹಾಗೂ ಷೇರು ದಲ್ಲಾಳಿಗಳಾದ ಕೆ.ಜಿ.ಕೃಪಾಲ್.[ಗಡಿ ನಿಯಂತ್ರಣಾ ರೇಖೆ ದಾಟಿ ಉಗ್ರರ ಸದ್ದಡಗಿಸಿದ ಭಾರತೀಯ ಸೇನೆ]
ಇನ್ನು ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್, ಸೇನೆ ಸನ್ನದ್ಧವಾಗಿರುವಂತೆ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಉಗ್ರರ ಮೇಲೆ ಭಾರತವು ಸರ್ಜಿಕಲ್ ಆಪರೇಷನ್ ನಡೆಸಿದ ಸುದ್ದಿ ಹೊರಬಿದ್ದ ನಂತರ ಪಾಕಿಸ್ತಾನದ ಷೇರು ಸೂಚ್ಯಂಕವೂ 500 ಅಂಶಗಳಷ್ಟು ಕುಸಿತ ಕಂಡಿತು.
ಇದೇ ವೇಳೆ ಡಾಲರ್ ವಿರುದ್ಧ 46 ಪೈಸೆ ಕುಸಿತ ಕಂಡ ಭಾರತದ ರುಪಾಯಿ ಮೌಲ್ಯ 66.91 ರು.ಗೆ ಕುಸಿಯಿತು.
ಸರ್ಜಿಕಲ್ ಸ್ಟ್ರೈಕ್ ಸುದ್ದಿಗೆ ಮಾರ್ಕೆಟ್ ನ ಪ್ರತಿಕ್ರಿಯೆ ಇದು ಎಂದು ಎಚ್ ಡಿಎಫ್ ಸಿ ಬ್ಯಾಂಕ್ ನ ವಿದೇಶಿ ವಿನಿಮಯ ವಿಭಾಗದ ಮುಖ್ಯಸ್ಥ ಅಶುತೋಷ್ ರೈನಾ ತಿಳಿಸಿದ್ದಾರೆ. ಯಾವುದೇ ಉದ್ವಿಗ್ನ ಪರಿಸ್ಥಿತಿಯಿಂದ ಸನ್ನಿವೇಶ ಮತ್ತೂ ಬಿಗಡಾಯಿಸಬಹುದು ಎಂದು ಅವರು ಹೇಳಿದ್ದಾರೆ.['ಸರ್ಜಿಕಲ್ ಆಪರೇಷನ್' ಅಂದರೆ ಏನು ಗೊತ್ತಾ?]
ಬಿಎಸ್ ಇ ಹಾಗೂ ಎನ್ ಎಸ್ ಇ ಸದಸ್ಯ ದೀಪನ್ ಮೆಹ್ತಾ ಮಾತನಾಡಿ, ಮಾರುಕಟ್ಟೆಯ ಇಂಥ ಅನಿಶ್ಚಿತತೆ ವೇಳೆಯಲ್ಲಿ ವಿದೇಶಿ ಬಂಡವಾಳದಾರರು ಬಂಡವಾಳ ಹೂಡುವುದಕ್ಕೆ ಹಿಂದೆ-ಮುಂದೆ ಯೋಚಿಸ್ತಾರೆ ಎಂದಿದ್ದಾರೆ.
ಈ ವರ್ಷ ವಿದೇಶಿ ಮೂಲದಿಂದ ಏಳು ಬಿಲಿಯನ್ ಅಮೆರಿಕನ್ ಡಾಲರ್ ಹರಿದುಬಂದಿದೆ. ಅದರ ಮೇಲೆ ಈ ಸನ್ನಿವೇಶ ಹೇಗೆ ಪರಿಣಾಮ ಬೀರಬಹುದು ಎಂದು ಗಮನಿಸಬೇಕಾಗಿದೆ ಎನ್ನುತ್ತಾರೆ ತಜ್ಞರು.