ನಮ್ಮ ಊರು, ಕಸಮುಕ್ತ ಬೆಂಗಳೂರು: ದಿನೇಶ್ ಗುಂಡೂರಾವ್
ಬೆಂಗಳೂರು, ಜನವರಿ 4: ಇಡೀ ಬೆಂಗಳೂರನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆ ಪ್ರಾರಂಭಿಸಿರುವ 100 ದಿನಗಳ ಸ್ವಚ್ಛತಾ ಆಂದೋಲನ ಶನಿವಾರ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ.ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಬಳಿಕ ಮಾತನಾಡಿ ಈ ಕ್ಷೇತ್ರದಲ್ಲಿ ವ್ಯಾಪಾರ ಮಳಿಗೆಗಳು ಹೆಚ್ಚಾಗಿರುವುದರಿಂದ ಕಸವೂ ಹೆಚ್ಚು. ಅದನ್ನು ತೆರವುಗೊಳಿಸಲು ಬಿಬಿಎಂಪಿ ಎಲ್ಲ ಕ್ರಮ ಕೈಗೊಂಡಿದ್ದರೂ ಸಣ್ಣ ರಸ್ತೆಗಳಲ್ಲಿ ಇದು ಸಾಧ್ಯವಾಗುತ್ತಿಲ್ಲ. ಅದನ್ನು ಈ ಅಭಿಯಾನದ ಮೂಲಕ ಜಯ ಕರ್ನಾಟಕದ ಕಾರ್ಯಕರ್ತರು ಮಾಡುತ್ತಿರುವುದು ಶ್ಲಾಘನೀಯ ಎಂದರು.[ಫೆಬ್ರವರಿ 1ರಿಂದ ಕಸ ವಿಂಗಡಣೆ ಮಾಡದಿದ್ದರೆ ಬೀಳುತ್ತೆ ದಂಡ!]
ಇದೇ ವೇಳೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಶ್ರೀ.ಸಾ.ರಾ.ಗೋವಿಂದು, ಶುಚಿತ್ವವೇ ಆರೋಗ್ಯದ ಬುನಾದಿ. ಸ್ವಚ್ಛತೆ ಕಾಯ್ದುಕೊಂಡರು ನಮ್ಮ ನಗರ ಸುಂದರವಾಗುವುದಷ್ಟೇ ಅಲ್ಲದೆ ಜನರ ಆರೋಗ್ಯವೂ ಉಳಿಯುತ್ತದೆ ಎಂದರು. ಈ ನಿಟ್ಟಿನಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಬೀದಿಗಿಳಿದು ಸ್ವಚ್ಛತಾ ಆಂದಲೋನವನ್ನು ನಡೆಸುತ್ತಿರುವ ಜಯ ಕರ್ನಾಟಕ ಸಂಘಟನೆಗೆ ತಮ್ಮ ಅಭಿನಂದನೆ ತಿಳಿಸಿದರು.
500 ಹೆಚ್ಚು ಶಾಲಾ ಮಕ್ಕಳು ಪಾಲ್ಗೊಂಡು ಕಾರ್ಯಕರ್ತರ ಹುರುಪು ಹೆಚ್ಚಿಸಿದ್ದು, ಇದರ ಜೊತೆಗೆ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಚ್ಛತಾ ಕಾರ್ಯ ಕೈಗೊಂಡಿದ್ದು ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಸಂಘಟನೆಯ ಸಹಸ್ರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಶನಿವಾರ ಗಾಂಧಿನಗರ, ಮಾಗಡಿ ರಸ್ತೆಯ ಮುಖ್ಯ ಬೀದಿಗಳು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.