ಶೇ.72 ಮೀಸಲಾತಿ: 2018ರ ಅಸೆಂಬ್ಲಿ ಚುನಾವಣೆಯ ತಂತ್ರವೇ..?
ರಾಜ್ಯದಲ್ಲಿ ಪ.ಜಾತಿ ಮತ್ತು ಪಂಗಡದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಒಟ್ಟು ಮೀಸಲಾತಿಯನ್ನು ಶೇ. 72ಕ್ಕೆ ಹೆಚ್ಚಿಸುವ ಚಿಂತನೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು, ಮಾರ್ಚ್ 27: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರಾಜ್ಯದಲ್ಲಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಒಟ್ಟು ಮೀಸಲಾತಿಯನ್ನು ಶೇ.50 ರಿಂದ 72ಕ್ಕೆ ಹೆಚ್ಚಿಸುವ ಚಿಂತನೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ದಲಿತ ಸಂಘಟನೆಯ ಸಮನ್ವಯ ಸಮಿತಿ ಮಾರ್ಚ್ 26 ಭಾನುವಾರದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಕೃತಜ್ಞತಾ ಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.[ಮೇ ತಿಂಗಳಿನಿಂದ ಸಬ್ ಅರ್ಬನ್ ರೈಲು ಕಾಮಗಾರಿ ಶುರು?]
ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಪ್ರಮಾಣ ಶೇ.50 ನ್ನು ಮೀರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ತಮಿಳು ನಾಡು ಈ ಪ್ರಮಾಣವನ್ನು ಶೇ.69 ಕ್ಕೆ ಹೆಚ್ಚಿಸಿದೆ. ರಾಜ್ಯದಲ್ಲೂ ಒಟ್ಟು ಮೀಸಲಾತಿಯನ್ನು ಶೇ.72 ಕ್ಕೆ ಹೆಚ್ಚಿಸುವ ಚಿಂತನೆಯಿದೆ ಎಂದವರು ತಿಳಿಸಿದರು. 2018 ರ ಅಸೆಂಬ್ಲಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಇಂಥ ನಿರ್ಧಾರ ಕೈಗೊಂಡಿದೆಯಾ ಎಂಬ ಪ್ರಶ್ನೆಯೂ ಎದ್ದಿದೆ.[ಎರಡು ದಶಕಗಳ ಕನಸು ನನಸು: ಹಾಸನ -ಬೆಂಗಳೂರು ರೈಲಿಗೆ ಚಾಲನೆ]
'ಇಡೀ ಸರ್ಕಾರಿ ನೌಕರ ವಲಯಕ್ಕೆ ಅನ್ವಯವಾಗುವಂತೆ ಸಾರ್ವತ್ರಿಕ ವರ್ಗಾವಣೆ ಪ್ರಮಾಣವನ್ನು ಶೇ.4.5 ರಿಂದ 10 ಕ್ಕೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ. 2018 ರಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂಬುದು ಈ ಮೂಲಕ ಸ್ಪಷ್ಟವಾಗಿದೆ.
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರಿಗೆ ಸಚಿವ ಆಂಜನೇಯ ಶಾಹು ಮಹಾರಾಜರ ವೇಷ ತೊಡಿಸಿ ಸನ್ಮಾನಿಸಿದ್ದು ವಿಶೇಷವೆನ್ನಿಸಿತ್ತು.