ಬಹುಮುಖ ಪ್ರತಿಭೆಯ ಕನ್ನಡ ಕಲಾವಿದ ದಿಲೀಪ್
ಕಾಂಟೆಂಪೊರರಿ, ಜಾನಪದ ನೃತ್ಯಶೈಲಿಯಲ್ಲಿ ಪರಿಣತಿ ಪಡೆದಿರುವ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಗ್ರಾಜ್ಯುಯೇಟ್ ಸ್ಟಡೀಸಲ್ಲಿ ಎಂ.ಕಾಂ. ಓದುತ್ತಿರುವ ದಿಲೀಪ್ ಒಬ್ಬ ಅಪರೂಪದ ಕಲಾವಿದ. ಇತ್ತೀಚೆಗೆ ನಡೆಸಿದ ರಾಜ್ಯಮಟ್ಟದ ಅಂತರ ಕಾಲೇಜು ನಾಟಕ ಸ್ಪರ್ಧೆಯಲ್ಲಿಯೂ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ದಿಲೀಪ್ ಉದಯಿಸುತ್ತಿರುವ ಕಲಾ ಪ್ರತಿಭೆ.
ಕಲೆ ಮತ್ತು ಸಾಂಸ್ಕೃತಿ ಚಟುವಟಿಕೆಗಳಲ್ಲಿ ಉತ್ಕೃಷ್ಟ ಮಟ್ಟ ಮುಟ್ಟಬೇಕೆಂಬ ಕನಸು ಕಟ್ಟಿಕೊಂಡಿರುವ ದಿಲೀಪ್ ಅವರು, ಇತ್ತೀಚೆಗಷ್ಟೆ ಸಿಂಗಪುರದಲ್ಲಿ ಆಯೋಜಿಸಲಾಗಿದ್ದ ನೃತ್ಯ ಪ್ರದರ್ಶನದಲ್ಲಿ ಆನೆ ಗುಡ್ಡ ಗಣಪತಿ ತಂಡದ ಪರವಾಗಿ ಭಾರತವನ್ನು ಪ್ರತಿನಿಧಿಸಿ ಸಮೃದ್ಧ ಅನುಭವದೊಂದಿಗೆ ಭಾರತಕ್ಕೆ ಮರಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಪ್ರತಿಭಾ ಪ್ರದರ್ಶನಗಳನ್ನು ಆಯೋಜಿಸುವ ಏಷ್ಯನ್ ಥಿಯೇಟರ್ ಗ್ರೂಪ್ ಏರ್ಪಡಿಸಿದ್ದ ಸಿಂಗಪುರದಲ್ಲಿನ ನೃತ್ಯ ಪ್ರದರ್ಶನದಲ್ಲಿ ಭಾರತದ ಪರವಾಗಿ ಭಾಗವಹಿಸಿದ್ದ 17 ಕಲಾವಿದರಲ್ಲಿ ದಿಲೀಪ್ ಕೂಡ ಒಬ್ಬರಾಗಿದ್ದರು. ಇದರಲ್ಲಿ ಅಮೆರಿಕ, ಯುಕೆ, ಚೀನಾ ಮತ್ತಿತರ ರಾಷ್ಟ್ರಗಳು ಕೂಡ ಭಾಗವಹಿಸಿದ್ದವು.
"ಇಂಥದೊಂದು ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ. ಅಲ್ಲಿಯ ಅನುಭವ ವಿಶಿಷ್ಟವಾಗಿತ್ತು. ಆನೇ ಗುಡ್ಡ ಗಣಪತಿ ನಿರ್ದೇಶಕಿ ಡಾ. ಪೂರ್ಣಿಮಾ ಅವರಿಂದಾಗಿ ಸಿಂಗಪುರದಲ್ಲಿ ಪ್ರತಿಭೆ ತೋರಲು ಅವಕಾಶ ಸಿಕ್ಕಿತು. ಅದಕ್ಕಾಗಿ ಅವರಿಗೆ ಧನ್ಯವಾದ. ಇಡೀ ದೇಶವನ್ನು ಪ್ರತಿನಿಧಿಸಿದ್ದು ನಿಜಕ್ಕೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು" ಎಂದು ದಿಲೀಪ್ ಅವರು ಒನ್ಇಂಡಿಯಾ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
"ನೃತ್ಯ ಪ್ರದರ್ಶನದ ಜೊತೆಗೆ ಅಲ್ಲಿ ಥಿಯೇಟರ್ ಚಟುವಟಿಕೆ, ಲಘು ನಾಟಕ, ಬೀದಿ ನಾಟಕ, ಸಂಗೀತ ಮತ್ತಿತರ ಕಲಾ ಪ್ರಕಾರಗಳ ಬಗ್ಗೆ ಶಿಬಿರ ಕೂಡ ಏರ್ಪಡಿಸಲಾಗಿತ್ತು. ಅನೇಕ ಕಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದೇನೆ. ಆದರೆ, ಸಿಂಗಪುರದ ಅನುಭವವೇ ವಿಶಿಷ್ಟ ಮತ್ತು ವಿಭಿನ್ನ. ಅಲ್ಲಿನ ಕಲಾವಿದರಿಂದಲೂ ಅನೇಕ ಸಂಗತಿಗಳನ್ನು ಕಲಿತುಕೊಳ್ಳಲು ಅನುವಾಯಿತು" ಎಂದವರು ಹೇಳುತ್ತಾರೆ.
ಇತ್ತೀಚೆಗೆ ಆಚಾರ್ಯ ಇನ್ಸ್ಟಿಟ್ಯೂಟ್ ನಲ್ಲಿ ಉದಯಿಸಿರುವ ಅಲೆ ಎಂಬ ಕಲೆ ಮತ್ತು ಸಾಂಸ್ಕೃತಿಕ ಸಂಘಟನೆಯ ಸಂಚಾಲಕರಲ್ಲಿ ದಿಲೀಪ್ ಕೂಡ ಒಬ್ಬರಾಗಿದ್ದಾರೆ. ಸನ್ ನೆಟ್ವರ್ಕ್ನ 'ಚಿಂಟು' ಟಿವಿಯಲ್ಲಿ ಕೂಡ ದಿಲೀಪ್ ಅವರು ಮಕ್ಕಳಿಗಾಗಿ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಅವರು ಜೈನ್ ಕಾಲೇಜು ಆಯೋಜಿಸಿದ್ದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿಯೂ ಅಂತಿಮ ಸುತ್ತು ತಲುಪಿದ್ದರು.
ಮಕ್ಕಳಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಹಲವಾರು ಬೀದಿ ನಾಟಕಗಳನ್ನು ದಿಲೀಪ್ ಮಾಡಿದ್ದಾರೆ. ಅಲ್ಲದೆ, ಜಾನಪದ ನೃತ್ಯಗಾರನಾಗಿರುವ ದಿಲೀಪ್ ಅವರು ಶಾಲೆ ಮತ್ತು ಕಾಲೇಜುಗಳಲ್ಲಿ ಥಿಯೇಟರ್ ಮತ್ತು ಜಾನಪದ ನೃತ್ಯದ ಕಾರ್ಯಾಗಾರಗಳನ್ನೂ ನಡೆಸಿಕೊಡುತ್ತಾರೆ.