ಬಸವಣ್ಣನನ್ನು ಟ್ವಿಟ್ಟರಲ್ಲಿ ಟ್ರೆಂಡ್ ಮಾಡೋಣ ಬನ್ನಿ!
ಏಪ್ರಿಲ್ 29, ಶನಿವಾರ ಬಸವ ಜಯಂತಿ. ಜಾತಿ ಪದ್ಧತಿಯನ್ನು ತೊಲಗಿಸಿಹಾಕಲು, ಸಮಾನತೆ ಎತ್ತಿಹಿಡಿಯಲು, ಮೂಢನಂಬಿಕೆ ತೊಲಗಿಸಲು 12ನೇ ಶತಮಾನದಲ್ಲೇ ಭಾರೀ ಕ್ರಾಂತಿ ಮಾಡಿದ ಭಕ್ತಿ ಭಂಡಾರಿ ಬಸವಣ್ಣನವರ ಹುಟ್ಟುಹಬ್ಬ.
ಎಂತೆಂಥದೋ ಕೆಲಸಕ್ಕೆ ಬಾರದ ವ್ಯಕ್ತಿಗಳ ಹುಟ್ಟುಹಬ್ಬವನ್ನು ಲಕ್ಷಗಟ್ಟಲೆ ಖರ್ಚು ಮಾಡಿ ಆಚರಿಸುವ ನಾವು, ಕ್ರಾಂತಿಯೋಗಿ ಬಸವಣ್ಣನವರ ಜನುಮದಿನವನ್ನು ಒಂದು ಪೈಸೆ ಖರ್ಚಿಲ್ಲದೆ ಏಕೆ ಆಚರಿಸಬಾರದು?
ಹೀಗಾಗಿ, ಆಗಿನ ಕಾಲದ ಟ್ರೆಂಡ್ ಸೆಟ್ಟರ್ ಬಸವಣ್ಣನವರ ಹುಟ್ಟುಹಬ್ಬವನ್ನು, ಅವರ ಅವರ ವಚನಗಳನ್ನು ಓದುತ್ತ, ಎಲ್ಲರಿಗೂ ತಿಳಿಸುತ್ತ, #BasavaJayanti ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡುವ ಮೂಲಕ ಆಚರಿಸೋಣ. ಶುಕ್ರವಾರ 28ರ ರಾತ್ರಿ 9ರಿಂದ 29 ಸಂಜೆ 6 ಗಂಟೆವರೆಗೆ ಟ್ವಿಟ್ಟರಿನಲ್ಲಿ ಮತ್ತು ಫೇಸ್ ಬುಕ್ಕಿನಲ್ಲಿ ಟ್ರೆಂಡ್ ಮಾಡಿ.
ಬಸವಣ್ಣನ ಸಮಾನತೆ, ದಾಸೋಹ ಮತ್ತು ಕಾಯಕದ ಕ್ರಾಂತಿ ಅಂದಿನಿಂದ ಇಂದಿನವರೆಗೂ ಜನಜನಿತ ಮತ್ತು ಈಗಿನ ಸಮಾಜಕ್ಕೆ ಅತ್ಯುತ್ತಮ ಮದ್ದು. ಬಸವಣ್ಣನಿಗೆ ಯಾವುದೇ ಜಾತಿ ಮತವಿಲ್ಲ, ಅವನು ಸರ್ವರಲ್ಲಿ ಸಮಾನತೆಗಾಗಿ ಬದುಕಿನ ಹಕ್ಕಿಗಾಗಿ ಕ್ರಾಂತಿ ಮಾಡಿದವರು. ಜನರ ಮೂಢನಂಬಿಕೆ, ಮೌಢ್ಯತೆ ಕೊಳೆಯನು ತೊಳೆದರು.
ವಿಶ್ವದಲ್ಲೇ ಮೊದಲ ಬಾರಿ ಹೆಣ್ಣಿನ ಶೋಷಣೆ ಮತ್ತು ಅಸಮಾನತೆಯ ಕೂಗು ಹಾಕಿದ್ದು ಕಲ್ಯಾಣದ ಅನುಭವ ಮಂಟಪದಲ್ಲಿ. ಸೂಳೆಯರಿಗೂ ಸಮಾಜದಲ್ಲಿ ಸಮಾನ ಸ್ಥಾನ ಉಂಟೆಂದು ಹಲವರಿಗೆ ದೀಕ್ಷೆ ಕೊಟ್ಟು ವಿನೂತನ ಕ್ರಾಂತಿ ಮಾಡಿದವರು ಅಂದಿನ ನಮ್ಮ ಬಸವಾದಿ ಪ್ರಮಥರೆಂದರೆ ನಮಗೆ ಹೆಮ್ಮೆ.
ಎಲ್ಲ ಕಾಯಕ ವರ್ಗದವರಾದ ಮೋಳಿಗೆ ಮಾರಯ್ಯ, ಕುಂಬಾರ ಗುಂಡಯ್ಯ, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಕುರುಬ ಗೊಲ್ಲಾಳ, ಹಡಪದ ಅಪ್ಪಣ್ಣ, ಒಕ್ಕಲಿಗ ಮಡ್ಡಣ್ಣ, ಮಡಿವಾಳ ಮಾಚಿದೇವ, ಸೂಳೆ ಸಂಕವ್ವ ಹೀಗೆ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಹಲವು ವರ್ಗಗಳನ್ನ ಕೂಡಿಸಿ ಸಮಾನತೆಗಾಗಿ ಕ್ರಾಂತಿ ಮಾಡಿದರು ನಮ್ಮ ಶರಣರು. ಬಡವರಿಗೆ, ಹಸಿದವರಿಗೆ ಅನ್ನ ದಾಸೋಹದ ಮೂಲಕ ಹಲವರ ಒಳಿತಿಗಾಗಿ ಶ್ರಮಿಸಿದವರಿವರು.
ಹೀಗಾಗಿ ಇಂದಿನ ಅಸಮಾನತೆ, ಮೌಢ್ಯತನ, ಬಡತನ, ನಿರುದ್ಯೋಗ ಮತ್ತು ತಾರತಮ್ಯದ ಜಂಜಾಟದ ಜೀವನದಲ್ಲಿ ಅಂದಿನ ತತ್ವಗಳಾದ ಹಸಿದವರಿಗೆ ದಾಸೋಹ, ಸಮಾನತೆಯ ಜಗತ್ತು, ಸಾಮಾಜಿಕ ಮೌಢ್ಯತನ ಮತ್ತು ಪುರೋಹಿತ ಡಾಂಭಿಕತ್ವವನ್ನ ತೊಳೆಯಲು ಶರಣರ ತತ್ವಗಳು ಅತ್ಯವಶ್ಯ.
ಇವರ ತತ್ವಗಳಿಗೆ ಮಾರು ಹೋಗಿ ಇರಾನ್ ಇಂದ ಕಲ್ಯಾಣಕ್ಕೆ ಬಂದವರು ಮರುಳ ಶಂಕರರು, ಕಾಶ್ಮೀರದ ರಾಜ ಸುಖ ವೈಭೋಗವನ್ನ ತೊರೆದು ಕಲ್ಯಾಣಕ್ಕೆ ಬಂದು ಮೋಳಿಗೆ ಮಾರಯ್ಯ. ಹೀಗೆ ಭಾರತ ಉದ್ದಗಲಕ್ಕೂ ಅಲ್ಲದೆ ಮದ್ಯ ಪ್ರಾಚ್ಯದವರೆಗೂ ಬಸವನ ಡಂಗೂರ ಕೇಳಿಸಿತ್ತು.
ಕನ್ನಡ ನಾಡಿನಲ್ಲಿ ಪ್ರಪಂಚದಲ್ಲೇ ಮೊದಲಸಲ ಆದ ವಿನೂತನ ಸಾಮಾಜಿಕ ಕ್ರಾಂತಿಯ ತತ್ವಗಳನ್ನ ಜಗತ್ತಿಗೆ ಮುಟ್ಟಿಸುವ ಸಲುವಾಗಿ ಆ ತತ್ವದ ಹರಿಕಾರರಾದ ಬಸವಣ್ಣನವರ ಜಯಂತಿ ನಾಳೆ ಏಪ್ರಿಲ್ 29ರಂದು ಕನ್ನಡಿಗರಾದ ನಾವೆಲ್ಲ ಸೇರಿಕೊಂಡು #BasavaJayanti ಎಂಬ ಹ್ಯಾಷ್ ಟ್ಯಾಗ್ ಇಟ್ಟುಕೊಂಡು ಟ್ವಿಟ್ಟರ್ ಮತ್ತು ಫೇಸ್ಬುಕ್ ಅಲ್ಲಿ ಪೋಸ್ಟಗಳನ್ನ ಮಾಡೋಣ ಬನ್ನಿ. ನಮ್ಮ ನಾಡಿನ ಪ್ರಸಿದ್ಧ ಮಹನೀಯರಾದ ಇವರನ್ನ ಜಗತ್ತಿಗೆ ತಿಳಿಸೋಣ.