Vande Bharat Express: ಯಶವಂತಪುರ-ಶಿವಮೊಗ್ಗ ಮಾರ್ಗದಲ್ಲಿ ವಂದೇ ಭಾರತ್ ರೈಲು
ಬೆಂಗಳೂರು, ಸೆಪ್ಟೆಂಬರ್ 26: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಪರ್ಕ ಬೇಕು ಎಂಬುದು ಬಹಳ ದಿನಗಳ ಬೇಡಿಕೆ. ಬೆಂಗಳೂರು ನಗರದ ಯಶವಂತಪುರ-ಶಿವಮೊಗ್ಗ ಮಾರ್ಗದಲ್ಲಿ ಶೀಘ್ರವೇ ಈ ಮಾದರಿಯ ರೈಲು ಸಂಚಾರ ನಡೆಸುವ ನಿರೀಕ್ಷೆ ಮೂಡಿದೆ. ರೈಲ್ವೆ ಖಾತೆ ರಾಜ್ಯ ಸಚಿವರ ಸಮ್ಮುಖದಲ್ಲಿಯೇ ಈ ಕುರಿತು ಗುರುವಾರ ಚರ್ಚೆಗಳು ನಡೆದಿವೆ.
ತುಮಕೂರು ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಗುರುವಾರ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಜಿಲ್ಲಾ ಪಂಚಾಯತ್ನ ನಜೀರ್ ಸಾಬ್ ಸಭಾಂಗಣದಲ್ಲಿ ಸಂಸದ ಬಿ. ವೈ. ರಾಘವೇಂದ್ರ ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಯಿತು. ಜಿಲ್ಲೆಯ ವಿವಿಧ ರೈಲು ಕಾಮಗಾರಿಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

ಈ ಸಭೆಯಲ್ಲಿ ಯಶವಂತಪುರ-ಶಿವಮೊಗ್ಗ ಮಾರ್ಗದಲ್ಲಿ ವಂದೇ ಭಾರತ್ ರೈಲು ಪರಿಚಯಿಸುವ ಕುರಿತು ಚರ್ಚಿಸಲಾಯಿತು ಎಂದು ಸಂಸದ ಬಿ. ವೈ. ರಾಘವೇಂದ್ರ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಮಾಹಿತಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಕರ್ನಾಟಕಕ್ಕೆ 3 ಹೊಸ ವಂದೇ ಭಾರತ್ ರೈಲು ಸಿಗಲಿದೆ. ಶಿವಮೊಗ್ಗಕ್ಕೂ ಒಂದು ರೈಲು ಸಿಗಬಹುದು ಎಂದು ವಿ. ಸೋಮಣ್ಣ ಹೇಳಿದ್ದರು.
ವಿ. ಸೋಮಣ್ಣ ಶಿವಮೊಗ್ಗ ಹೊರವಲಯದ ಕೋಟೆಗಂಗೂರು ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಡಿಪೋ ಮತ್ತು ಟರ್ಮಿನಲ್ ವೀಕ್ಷಣೆ ಮಾಡಿದ್ದರು. ಒಟ್ಟು 74 ಎಕರೆ ಪ್ರದೇಶದಲ್ಲಿ ರೂ. 80 ಕೋಟಿ ವೆಚ್ಚದಲ್ಲಿ ಟರ್ಮಿನಲ್ ನಿರ್ಮಾಣವಾಗುತ್ತಿದೆ. ಇಲ್ಲಿ ಟರ್ಮಿನಲ್ ಆಗುವುದರಿಂದ ರಾಜ್ಯದ ಎಲ್ಲ ರೈಲುಗಳು ಇಲ್ಲಿ ಸ್ವಚ್ಚತೆಗಾಗಿ ಬರಲಿವೆ. ಇಲ್ಲಿ ಡಿಪೋ ಆಗುವುದರಿಂದ ವಂದೇ ಭಾರತ್ ರೈಲು ಸಹ ಬರಲಿದೆ ಎಂದು ತಿಳಿಸಿದ್ದರು.
ಯಶವಂತಪುರ-ಶಿವಮೊಗ್ಗ ನಡುವೆ ಈಗಾಗಲೇ ಜನ ಶತಾಬ್ದಿ ರೈಲು ಸಂಚಾರವನ್ನು ನಡೆಸುತ್ತಿದೆ. ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನ ಸೇವೆ ಸಹ ಇದೆ. ರಾಜಧಾನಿ ಬೆಂಗಳೂರು ಮಲೆನಾಡು ಶಿವಮೊಗ್ಗ ಸಂಪರ್ಕಿಸಲು ವಂದೇ ಭಾರತ್ ರೈಲು ಬೇಕು ಎಂಬುದು ಹಳೆಯ ಬೇಡಿಕೆಯಾಗಿದೆ. ಈ ಕುರಿತು ಸಂಸದ ಬಿ. ವೈ. ರಾಘವೇಂದ್ರ ಕೇಂದ್ರ ರೈಲ್ವೆ ಸಚಿವರಿಗೆ ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ.
2023ರಲ್ಲಿ ನೈಋತ್ಯ ರೈಲ್ವೆ ಕರ್ನಾಟಕದ 10 ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಮೂಲ ಸೌಕರ್ಯದ ವ್ಯವಸ್ಥೆ ಮಾಡಲು ಸುತ್ತೋಲೆಯನ್ನು ಹೊರಡಿಸಿತ್ತು. ಇದರಲ್ಲಿ ಬೆಂಗಳೂರು-ಶಿವಮೊಗ್ಗ ಮಾರ್ಗವೂ ಸೇರಿತ್ತು. ನೈಋತ್ಯ ರೈಲ್ವೆಗೆ ಈಗಾಗಲೇ 8 ವಂದೇ ಭಾರತ್ ರೈಲು ಬೋಗಿ ಹಂಚಿಕೆಯಾಗಿದೆ ಎಂಬ ಮಾಹಿತಿ ಇದೆ. ಇದನ್ನು ಯಾವ ಮಾರ್ಗದಲ್ಲಿ ಓಡಿಸಬೇಕು ಎಂದು ರೈಲ್ವೆ ವಿಭಾಗ ತೀರ್ಮಾನ ಮಾಡಬೇಕಿದೆ.
ಸದ್ಯ ಮಂಗಳೂರು, ದಾವಣಗೆರೆಗೆ ವಂದೇ ಭಾರತ್ ರೈಲು ಸಂಪರ್ಕವಿದೆ. ಆದರೆ ಮಲೆನಾಡು ಭಾಗಕ್ಕೆ ಒಂದೇ ಒಂದು ವಂದೇ ಭಾರತ್ ರೈಲುಗಳಿಲ್ಲ. ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಬಂದರೆ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗೆ ಸಹ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ರೈಲಿಗಾಗಿ ಬೇಡಿಕೆ ಇಡಲಾಗಿದೆ.
ಸಚಿವರು ಚರ್ಚಿಸಿದ ಪ್ರಮುಖ ಯೋಜನೆಗಳು
* ಶಿವಮೊಗ್ಗ-ಶಿಕಾರಿಪುರ- ರಾಣೆಬೆನ್ನೂರು ಹೊಸ ರೈಲು ಮಾರ್ಗದ ಕಾಮಗಾರಿ
* ಕೋಟೆಗಂಗೂರು ಕೋಚಿಂಗ್ ಡಿಪೋ ಮತ್ತು ಟರ್ಮಿನಲ್ ಕಾಮಗಾರಿ
* ಭದ್ರಾವತಿ ಬಳಿಯ ಕಡದಕಟ್ಟೆ ಎಲ್.ಸಿ 34ರಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ
* ಸಾರ್ವಜನಿಕ ಬಳಕೆಗೆ ಮುಕ್ತವಾಗಿರುವ ಮೇಲ್ಸೇತುವೆ ರಸ್ತೆ ಅಭಿವೃದ್ಧಿ
* ಶಿವಮೊಗ್ಗ-ಬೀರೂರು ದ್ವಿಪಥ ರೈಲ್ವೆ ಹಳಿ ನಿರ್ಮಾಣ
* ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ವಿಐಪಿ ಲಾಂಜ್ ಮೇಲ್ದರ್ಜೆಗೇರಿಸುವ ಕುರಿತು
* ವಿದ್ಯಾನಗರ ರೈಲ್ವೆ ಸ್ಟೇಷನ್ ಬಳಿ ಕೆಳ ಸೇತುವೆ ನಿರ್ಮಾಣ ಕುರಿತು
* ಅಮೃತ್ ಭಾರತ್ ಯೋಜನೆಯಡಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ವೇಗ ನೀಡುವ ಕುರಿತು
* ಶಿವಮೊಗ್ಗ-ರೇಣಿಗುಂಟಾ-ಚೆನ್ನೈ ಮಾರ್ಗದಲ್ಲಿ ಮತ್ತೆ ರೈಲು ಪರಿಚಯಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.












Click it and Unblock the Notifications