ಕೊಪ್ಪಳ ಹುಲಿಗೆಮ್ಮ ಭಕ್ತರಿಗೆ ಬಂಪರ್ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ
ಕೊಪ್ಪಳ, ಆಗಸ್ಟ್ 24: ಕೇಂದ್ರ ಸರ್ಕಾರ ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಹುಲಿಗೆಮ್ಮ ದೇವಿ ದೇವಾಲಯದ ಭಕ್ತರಿಗೆ ಬಂಪರ್ ಕೊಡುಗೆ ನೀಡಿದೆ. ದೇವಾಲಯದ ಭಕ್ತರ ಬಹುದಿನಗಳ ಬೇಡಿಕೆಗೆ ಒಪ್ಪಿಗೆಯನ್ನು ನೀಡಿದೆ.
ಕೊಪ್ಪಳದ ಬಿಜೆಪಿ ಸಂಸದ ಕರಡಿ ಸಂಗಣ್ಣ ಈ ಕುರಿತು ಮಾಹಿತಿ ನೀಡಿದ್ದಾರೆ. ಶ್ರೀ ಹುಲಿಗೆಮ್ಮ ದೇವಿ ದೇವಾಲಯವಿರುವ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ರೈಲ್ವೆ ಗೇಟ್ ನಂಬರ್ 79ರ ಹುಲಿಗಿ-ಮುನಿರಾಬಾದ್ ಮೇಲ್ಸೇತುವೆ ಕಾಮಗಾರಿಗೆ ಕೇಂದ್ರ ಸರ್ಕಾರ 29.57 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಕರಡಿ ಸಂಗಣ್ಣ ಈ ಕುರಿತು ಪ್ರಕಟಣೆ ಬಿಟುಗಡೆ ಮಾಡಿದ್ದು, ಇದು ಬಹುದಿನಗಳ ಬೇಡಿಕೆಯಾಗಿತ್ತು. ಈ ಮೇಲ್ಸೇತುವೆ ನಿರ್ಮಾಣದಿಂದ ಶ್ರೀ ಹುಲಿಗೆಮ್ಮ ದೇವಿ ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ, ಸಾರ್ವಜನಿಕರಿಗೆ ವಾಹನ ಸಂಚಾರಕ್ಕೆ ತುಂಬಾ ಅನುಕೂಲವಾಗಲಿದೆ. ಈ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿರುವ ಪ್ರಧಾನ ಮಂತ್ರಿಗಳಿಗೂ, ಕೇಂದ್ರ ರೈಲ್ವೆ ಮಂತ್ರಿಗಳು ಹಾಗೂ ರೈಲ್ವೆ ಮಂಡಳಿ ಮತ್ತು ಹಿರಿಯ ಅಧಿಕಾರಿಗಳಿಗೆ ಅಭಿನಂದನೆ ತಿಳಿಸುವೆ ಎಂದು ಕರಡಿ ಸಂಗಣ್ಣ ತಿಳಿಸಿದ್ದಾರೆ.
ರಾಜ್ಯದಿಂದ ಅನುದಾನ ಬಂದಿಲ್ಲ; ಹುಲಿಗಿ-ಮುನಿರಾಬಾದ್ ಮೇಲ್ಸೇತುವೆ ಕಾಮಗಾರಿಗಳಿಗೆ ರಾಜ್ಯ ಸರ್ಕಾರದ ಅನುದಾನ ಬಿಡುಗಡೆಯಾಗಿಲ್ಲ. ಕಾಮಗಾರಿಗಳಿಗೆ ಕೇಂದ್ರ ಸರ್ಕಾರವೇ ಸಂಪೂರ್ಣ ಅನುದಾನ ಬಿಡುಗಡೆ ಮಾಡುವ ಹೊಸ ನಿಯಮದಡಿ ರೈಲ್ವೆ ಗೇಟ್ ಸಂಖ್ಯೆ 79ರ ಹುಲಿಗಿ-ಮುನಿರಾಬಾದ್ ಮೇಲ್ಸೇತುವೆ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಸಲು ಮತ್ತು ಕಾಮಗಾರಿ ಪ್ರಾರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸಲಾಗುವುದು ಎಂದು ಸಂಸದರು ಹೇಳಿದ್ದಾರೆ.
ರೈಲ್ವೆ ಮೇಲ್ಸೇತುವೆಯಲ್ಲಿ ರಾಜ್ಯದ ಪಾಲು ಸಹ ಇರಲಿದೆ. ಆದರೆ ಈ ಯೋಜನೆಗಳಿಗೆ ರಾಜ್ಯ ಸರ್ಕಾರ ಆಸಕ್ತಿ ತೋರದ ಕಾರಣ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಆಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವೇ ಸಂಪೂರ್ಣ ಹಣವನ್ನು ಬಿಡುಗಡೆ ಮಾಡಿರುವುದು ವಿಶೇಷವಾಗಿದೆ. ಶೀಘ್ರವೇ ಟೆಂಡರ್ ಕಾಮಗಾರಿಗಳು ಪೂರ್ಣಗೊಂಡು, ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.
ಹುಲಿಗಿ-ಮುನಿರಾಬಾದ್ ಮೇಲ್ಸೇತುವೆ ಇಲ್ಲದ ಕಾರಣ ಶ್ರೀ ಹುಲಿಗೆಮ್ಮ ದೇವಿ ದೇವಾಲಯದ ಭಕ್ತರಿಗೆ ಭಾರೀ ತೊಂದರೆ ಉಂಟಾಗಿತ್ತು. ರೈಲುಗಳು ಬಂದರೆ ಸಾಕು ಗೇಟ್ ನಂಬರ್-79ರಲ್ಲಿ ಕಿ. ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಇದರಿಂದಾಗಿ ಭಕ್ತರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹುಲಿಗಿ-ಮುನಿರಾಬಾದ್ ನಡುವಿನ ರೈಲ್ವೆ ಮೇಲ್ಸೇತುವೆ ಇಲ್ಲದ ಕಾರಣ ಶ್ರೀ ಹುಲಿಗೆಮ್ಮ ದೇವಿ ದೇವಾಲಯದ ಭಕ್ತರಿಗೆ ತೊಂದರೆ ಉಂಟಾಗುತ್ತಿತ್ತು. ಈ ಕುರಿತು ಸಂಸದರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗಮನ ಸೆಳೆದಿದ್ದರು. ಈಗ ಇಲಾಖೆ ಅನುದಾನವನ್ನು ಮಂಜೂರು ಮಾಡಿದೆ, ಈ ಕುರಿತು ಆದೇಶವನ್ನು ಹೊರಡಿಸಿದೆ.
ಕೇಂದ್ರ ಸರ್ಕಾರ ರೈಲ್ವೆ ಮೇಲ್ಸೇತುವೆಗೆ 29.57 ಕೋಟಿ ರೂ. ಮತ್ತು ಭೂಮಿ ಪರಿಹಾರಕ್ಕೆ 3 ಕೋಟಿ ರೂ. ಅನುದಾನ ನೀಡಿದೆ. ಮೇಲ್ಸೇತುವೆ ಇಲ್ಲದ ಕಾರಣ ಸುತ್ತಮುತ್ತಲಿನ ಗ್ರಾಮದ ಜನರು ಸಹ ರೋಸಿ ಹೋಗಿದ್ದರು. ಈ ಸಮಸ್ಯೆಗೆ ಮುಕ್ತಿ ಕೊಡಿಸುವಂತೆ ಜನಪ್ರತಿನಿಧಿಗಳ ಬಳಿ ಬೇಡಿಕೆ ಇಟ್ಟಿದ್ದರು.
ಶ್ರೀ ಹುಲಿಗೆಮ್ಮ ದೇವಿ ದೇವಾಲಯಕ್ಕೆ ಕೋಟ್ಯಾಂತರ ಭಕ್ತರು ಇದ್ದಾರೆ. ಕರ್ನಾಟಕ ಮಾತ್ರವಲ್ಲ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷ ನಡೆಯುವ ಹುಲಿಗೆಮ್ಮ ಜಾತ್ರೆಗೆ ಲಕ್ಷಾಂತರ ಭಕ್ತರು ಸೇರುತ್ತಾರೆ. ಹಬ್ಬ, ರಜೆ ದಿನಗಳ ಸಮಯದಲ್ಲಿ ಪ್ರತಿನಿತ್ಯ ದೇವಿಯ ದರ್ಶನಕ್ಕೆ ಸಾವಿರಾರು ಭಕ್ತರು ಬರುತ್ತಾರೆ.












Click it and Unblock the Notifications