ಉಡುಪಿ; ಕ್ಯೂ-ಆರ್ ಕೋಡ್ ಸ್ಕ್ಯಾನ್ ಮಾಡಿ, ಪ್ರವಾಸಿ ತಾಣದ ಬಗ್ಗೆ ತಿಳಿ
ಉಡುಪಿ, ಜನವರಿ 09; ಕರ್ನಾಟಕದ ಕರಾವಳಿಯ ಜಿಲ್ಲೆಯಾದ ಉಡುಪಿ ಅನೇಕ ಪ್ರವಾಸಿ ತಾಣಗಳನ್ನು ಹೊಂದಿದೆ. ನಿಸರ್ಗ ಸೌಂದರ್ಯದಿಂದ ಕೂಡಿದ ಉಡುಪಿಯಲ್ಲಿ ಸಮುದ್ರ, ಪಶ್ಚಿಮ ಘಟ್ಟಗಳನ್ನು ಕಾಣಬಹುದು.
ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಈಗ ಅಂಗೈಯಲ್ಲಿಯೇ ಸಿಗುತ್ತದೆ. ಅಪ್ಲಿಕೇಶನ್ ಡೌನ್ಲೋಡ್ ಮಾಡುವುದು ಬೇಡ, ಹುಡುಕಾಡುವುದು ಬೇಡ. ಕ್ಯೂ-ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಎಲ್ಲಾ ಮಾಹಿತಿ ಸಿಗಲಿದೆ.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಈ ಕುರಿತು ಮಾಹಿತಿ ನೀಡಿದ್ದಾರೆ, "ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಬಗೆಗಿನ ಮಾಹಿತಿಯನ್ನು ಇನ್ನು ಮುಂದೆ ಕ್ಯೂ-ಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ಪಡೆಯಬಹುದಾಗಿದೆ" ಎಂದು ಹೇಳಿದ್ದಾರೆ.

ಸೋಮವಾರ ಅಜ್ಜರಕಾಡು ಭುಜಂಗ ಪಾರ್ಕ್ನಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಕರಾವಳಿ ವಿಕಿಮೀಡಿಯಾ ಮತ್ತು ವಿಕಿ ಇ-ಲರ್ನಿಂಗ್ ಕೋರ್ಸ್ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದೊಂದಿಗೆ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು.
ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಇಲಾಖೆಯ ಕ್ಯೂ-ಆರ್ ಕೋಡ್ ಬೋರ್ಡ್ ಅಳವಡಿಸುವ ಉದ್ಘಾಟನಾ ಕಾರ್ಯಕ್ರಮ ಇದಾಗಿತ್ತು. ಅಜ್ಜರಕಾಡು ಭುಜಂಗ ಪಾರ್ಕ್ನ ಕುರಿತು ಕ್ಯೂ-ಆರ್ ಕೋಡ್ ಅನಾವರಣಗೊಳಿಸಿ ಡಿಸಿ ಮಾತನಾಡಿದರು.
ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿ; ಉಡುಪಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಹಲವು ಪ್ರೇಕ್ಷಣಿಯ ಸ್ಥಳಗಳಿಗೆ ತೆರಳಿದರೂ ಸಹ ಅಲ್ಲಿನ ವೈಶಿಷ್ಟ್ಯತೆಯ ಸಂಪೂರ್ಣ ವಿವರಗಳು ಅವರಿಗೆ ದೊರೆಯದ ಕಾರಣ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.

ಆದರೆ ಪ್ರಸ್ತುತ ಜಿಲ್ಲೆಯ 30 ಪ್ರೇಕ್ಷಣೀಯ ಸ್ಥಳಗಳಲ್ಲಿ ಕ್ಯೂ-ಆರ್ ಕೋಡ್ ಮೂಲಕ ಅಲ್ಲಿನ ಪ್ರದೇಶದ ಇತಿಹಾಸ ಸೇರಿದಂತೆ ಸಂಪೂರ್ಣ ವಿವರಗಳನ್ನು ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ ವೀಕ್ಷಿಸಲು ಸಾಧ್ಯವಾಗಲಿದ್ದು, ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಇನ್ನಷ್ಟು ಸಹಕಾರಿಯಾಗಲಿದೆ.
ಉಡುಪಿ ಜಿಲ್ಲೆಯಲ್ಲಿರುವ ಎಲ್ಲಾ ಪ್ರವಾಸಿತಾಣಗಳ ಕುರಿತಂತೆ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ ಇದೇ ರೀತಿಯಲ್ಲಿ ಕ್ಯೂ-ಆರ್ ಕೋಡ್ಗಳನ್ನು ಆ ಪ್ರದೇಶದಲ್ಲಿ ಅಳವಡಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರವಾಸಿ ತಾಣಗಳ ಇತಿಹಾಸ ಮತ್ತು ಮಾಹಿತಿಗಳನ್ನು ಅಳವಡಿಸುವಾಗ, ನಿಖರ ಮತ್ತು ಅಧಿಕೃತ ಮಾಹಿತಿಗಳನ್ನು ಸಂಗ್ರಹಿಸಿ, ಪರಿಶೀಲಿಸುವಂತೆ ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಕಾರ್ಕಳ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ (ಪ್ರಭಾರ) ನಿರ್ದೇಶಕ ಗುರುಪ್ರಸಾದ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಲವು ಪ್ರವಾಸಿ ತಾಣಗಳು; ದಕ್ಷಿಣ ಕನ್ನಡ ಮತ್ತು ಉಡುಪಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾಗಿದ್ದವು. ಉಡುಪಿಯು 1997ರಲ್ಲಿ ಸ್ವತಂತ್ರ ಜಿಲ್ಲೆಯಾಗಿ ಅಸ್ತಿತ್ವ ಪಡೆದುಕೊಂಡಿದೆ. ಸಮುದ್ರ, ಪಶ್ಚಿಮ ಘಟ್ಟದಿಂದ ಕೂಡಿರುವ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ.
ಪ್ರಾಕೃತಿಕವಾಗಿ ಉಡುಪಿ ಜಿಲ್ಲೆಯನ್ನು ಕರಾವಳಿ, ಒಳನಾಡು ಮತ್ತು ಘಟ್ಟ ಪ್ರದೇಶವೆಂದು ವಿಂಗಡಣೆ ಮಾಡಲಾಗಿದೆ. ಪಶ್ಚಿಮ ಘಟ್ಟ ಹಲವಾರು ನದಿಗಳ ಉಗಮ ಸ್ಥಾನ. ಸೌಪರ್ಣಿಕ, ಸ್ವರ್ಣ, ಸೀತಾ, ವಾರಾಹಿ ಹಾಗೂ ಗಂಗೊಳ್ಳಿ ಜಿಲ್ಲೆಯ ಪ್ರಮುಖ ನದಿಗಳು. ಇವು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬೀ ಸಮುದ್ರ ಸೇರುತ್ತವೆ.
ಉಡುಪಿಯ ಮಲ್ಪೆ ಏಷ್ಯಾದ ಅತಿದೊಡ್ಡ ಸರ್ವಋತು ಮೀನುಗಾರಿಕಾ ಬಂದರು. ಜಿಲ್ಲೆಗೆ ಇದು ದೊಡ್ಡ ಆದಾಯದ ಮೂಲ, ಅಸಂಖ್ಯಾತ ಜನರಿಗೆ ಉದ್ಯೋಗಾವಕಾಶವನ್ನು ನೀಡಿದೆ. ಕಾಲಕ್ಕೆ ತಕ್ಕಂತೆ ಮಲ್ಪೆ ಬಂದರಿನ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.
ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಭಕ್ತರು ಆಗಮಿಸುವ ಮೂಕಾಂಬಿಕಾ ದೇವಾಲಯ ಇರುವ ಕೊಲ್ಲೂರು, ಉತ್ತಮ ಬೀಚ್, ಸೈಂಟ್ ಮೇರೀಸ್ ದ್ವೀಪ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿದೆ.











Click it and Unblock the Notifications