ಜೋಗ ಜಲಪಾತ : ಹೃದಯ ಸೂರೆಗೊಳ್ಳುವ ಜಲಧಾರೆ
ಜಲಪಾತದ ರುದ್ರರಮಣೀಯತೆ ಮಾತಿಗೆ ನಿಲಕದು. ಮಳೆಗಾಲದ ಅಬ್ಬರದ ಮಳೆಗೆ ಮೆರಗು ನೀಡುವ ಈ ವರ್ಣ ವೈಭವದ ನೈಜತೆ ನೋಡೇ ತಣಿಯಬೇಕು. ಜಲಧಾರೆಗಳ ಹೃದಯ ನಡುಗಿಸುವ ಸದ್ದು, ಕಡಿದಾದ ಕಣಿವೆಯ ಪರಿಸರ ಬೇರೆಯದೇ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ತುಂಬಿತುಳುಕುವ ಜೋಗದ ರಾಣಿಯನ್ನು ಕಾಣಲು ಈಗ ಸುಸುಮಯ.
- ವಿನಯಾ ಅಡಿ, ಶಿರಸಿ
[email protected]
ಅದರಂತೆ ಉತ್ತರ ಕನ್ನಡ ಜಿಲ್ಲೆಯ ಸುಪುತ್ರ, ಹೆಮ್ಮೆಯ ಕವಿ ‘ದಿನಕರ ದೇಸಾಯಿ‘ ಅವರ ಕಲ್ಪನಾ ಶಕ್ತಿಗೆ, ಉತ್ತಮ ರಚನೆಗಳಿಗೆ, ಜಿಲ್ಲೆಯ ಪ್ರಕೃತಿ ಸೌಂದರ್ಯ ತನ್ನ ಅಮೂಲ್ಯ ಕಾಣಿಕೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಜಲಪಾತಗಳಿದ್ದು ಪ್ರತಿಯೊಂದು ಅದರದೇ ವಿಶಿಷ್ಟತೆ ಹೊಂದಿದೆ. ಅದರಲ್ಲೂ ಜೋಗದ ಸೊಬಗಿಗೆ ಸಾಟಿ ಇನ್ನೊಂದಿಲ್ಲ ಎನ್ನುವ ಕವಿ ರಚನೆಯ ಸಾಲುಗಳಂತೆ, ಇಲ್ಲಿನ ದೃಶ್ಯ ವೈಭವ ಮಳೆಗಾಲದ ಈ ದಿನಗಳಲ್ಲಿ ಮಂತ್ರಮುಗ್ಧಗೊಳಿಸುತ್ತದೆ.
ಧೀರ ನಡಿಗೆಯ ರಾಜ, ಬಳಕುತ್ತಾ ಧುಮ್ಮಿಕ್ಕುವ ರಾಣಿ, ಹುಲಿಯಂತೆ ಆರ್ಭಟಿಸುತ್ತಾ ಪಾತಾಳ ಸೇರುವ ರೋರರ್, ಬಾಣದಂತೆ ಚಿಮ್ಮಿ, ನೊರೆ ಹಾಲುಕ್ಕಿಸುವಂತಿರುವ ರಾಕೆಟ್ ಜಲಧಾರೆಗಳ ಸೌಂದರ್ಯ, ಶಬ್ದಗಳಲ್ಲಿ ಹಿಡಿದಿಡಲಾಗದು. ಇಲ್ಲಿನ ಜಲಧಾರೆಗಳಲ್ಲಿ ರಾಣಿಗೆ ಗೌರವನೀತ ತಡಸಲು ಎಂದು ಇನ್ನೊಂದು ಹೆಸರಿದೆ, ಅಂತೆಯೇ ರೋರರ್ಗೆ ಅಬ್ಬರ ತಡಸಲು ಎಂದು, ರಾಕೆಟ್ಗೆ ಬಾಣ ತಡಸಲು ಎಂದು ಕರೆಯಲಾಗುತ್ತಿದ್ದು, ಮೈಸೂರು ಅರಸರ ರಾಜ್ಯಾಡಳಿತದ ಅವಧಿಯಲ್ಲಿ ಬಾಣ ತಡಸಲಿನ ತಳದಿಂದ ಪಟಾಕಿ, ಬಾಣಬಿರುಸುಗಳನ್ನು ಚಿಮ್ಮಿಸಲಾಗುತ್ತಿರುವುದಾಗಿ ಹೇಳಲಾಗುತ್ತದೆ.
ಸುಮಾರು 250 ಅಡಿ ಚದುರದ ಹಾಸುಗಲ್ಲಿನ ಮೇಲಿಂದ ಹರಿದುಬರುತ್ತಾ ನೇರವಾಗಿ 960 ಅಡಿ ಆಳದ ಕಮರಿಗೆ ತಮ್ಮದೇ ಹೊಸಹೊಸ ಬಗೆಯ ವಿವಿಧ ವಿನ್ಯಾಸದೊಂದಿಗೆ ಧುಮುಕುವ ಈ ನಾಲ್ಕು ಜಲಧಾರೆಗಳ ನೋಟದ ರುಧ್ರರಮಣೀಯತೆಯು ಮಾತಿಗೆ ನಿಲಕದು. ಮಳೆಗಾಲದ ಅಬ್ಬರದ ಮಳೆಗೆ ಮೆರಗು ನೀಡುವ ಈ ವರ್ಣ ವೈಭವದ ನೈಜತೆ ನೋಡೇ ತಣಿಯಬೇಕು. ಜಲಧಾರೆಗಳ ಹೃದಯ ನಡುಗಿಸುವ ಶಬ್ದ, ಕಡಿದಾದ ಕಣಿವೆಯ ಪರಿಸರದ ದೃಶ್ಯವು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಲೋಕ ವಿಖ್ಯಾತ ಈ ಸುಂದರ ಜೋಗಜಲಪಾತ, ಕನ್ನಡ ನಾಡಿನ ಹೆಮ್ಮೆಯ ತಾಣ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ‘ಜೋಗ್‘ ಮಲೆನಾಡಿನ ಹಳ್ಳಿ. ಪ್ರಸಿದ್ದ ಐತಿಹಾಸಿಕ ರಾಜಧಾನಿಯಾದ ಗೇರಸೊಪ್ಪೆಗೆ ಹತ್ತಿರದಲ್ಲಿ ಇರುವುದರಿಂದ ಈ ಹಿಂದೆ ‘ಗೇರಸೊಪ್ಪಾ ಜಲಪಾತ‘ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿತ್ತು. ಇತಿಹಾಸದಲ್ಲಿನ ಉಲ್ಲೇಖದಂತೆ ನಾಲ್ಕು ನೂರು ವರ್ಷಗಳ ಇತಿಹಾಸ ಹೊಂದಿದ ಗೇರಸೊಪ್ಪೆ ರಾಜ್ಯವು ‘ನಗಿರಾರಾಜ್ಯ’ ಎಂದು ಕರೆಯಲ್ಪಡುತ್ತಿದ್ದು, ರಾಜಧಾನಿಯನ್ನು ಬಳಸಿ ಹರಿಯುತ್ತಿದ್ದ ಶರಾವತಿ ನದಿಗೆ ‘ಗೇರುಸೊಪ್ಪೆ ನದಿ‘ ಎನ್ನುತ್ತಿದ್ದರು. ಈ ರಾಜ್ಯವಾಳಿದ ‘ರಾಣಿ ಚೆನ್ನಭೈರಾದೇವಿ‘ಯನ್ನು ‘ಕಾಳು ಮೆಣಸಿನ ರಾಣಿ‘ ಎಂದು ಕರೆಯಲಾಗುತ್ತಿತ್ತೆಂದು ಇತಿಹಾಸ ಹೇಳುತ್ತದೆ. ಇಂದಿನ ಗೇರುಸೊಪ್ಪೆ ಹಾಗೂ ನಗರಬಸ್ತಿಕೇರಿ ಎಂದು ಕರೆಯಲ್ಪಡುವ ಗತ ಇತಿಹಾಸದ ರಾಜಧಾನಿ ಮಧ್ಯೆ ಶರಾವತಿ ಹರಿಯುತ್ತಾಳೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ, 12 ಉಪ ನದಿಗಳನ್ನು ಸೇರಿಸಿಕೊಂಡು, ರಭಸದಿಂದ ಮುನ್ನುಗ್ಗುವ ಶರಾವತಿಗೆ 132 ಕಿ.ಮೀ. ಕ್ರಮಿಸಿ ಅರಬ್ಬೀ ಸಮುದ್ರ ಸೇರುವ ತವಕ. ಜೋಗದ ಬಳಿ ಇರುವ ಕಣಿವೆಯನ್ನೂ ಲೆಕ್ಕಿಸದೆ, ಕಮರಿಗೆ ಧುಮುಕಿ ಓಡುವ ಅಬ್ಬರ, ಕಣ್ಮನಗಳಿಗೆ ತೃಪ್ತಿ, ಜೀವಜಂತುಗಳಿಗರ ಆಸರೆ. ಈ ನದಿಗೆ ಈಗಾಗಲೇ ಮೂರು ಆಣೆಕಟ್ಟೆಗಳನ್ನು ಕಟ್ಟಲಾಗಿದ್ದು, ನಾಲ್ಕನೆಯ ಆಣೆಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ವಿವಿಧೋದ್ದೇಶ ಯೋಜನೆಯನ್ವಯ ನಾಡಿಗೆ, ಔದ್ಯಮೀಕರಣಕ್ಕೆ ಅವಶ್ಯಕ ವಿದ್ಯುತ್ ಉತ್ಪಾದನೆ ಹಾಗೂ ಕೃಷಿಗೆ ನೀರಾವರಿ ಒದಗಿಸುವುದು. ಲಿಂಗನಮಕ್ಕಿ ಎಂಬ ಮೊದಲ ಆಣೆಕಟ್ಟೆಯನ್ನು ನಿರ್ಮಿಸಲು 1956ರಲ್ಲಿ ಆರಂಭಿಸಿದ್ದರೆ, ಎರಡನೇ ಆಣೆಕಟ್ಟೆ ಶರಾವತಿ ಟೇಲರೇಸ್ ಎಂದು ನಾಮಕರಣಗೊಂಡು 2002ರಿಂದ ವಿದ್ಯುತ್ ಉತ್ಪಾದನೆ ಪ್ರಾರಂಭಿಸಿದೆ. ಮೂರನೇಯ ಆಣೆಯ ನಿರ್ಮಾಣವು 2004ರಲ್ಲಿ ಪ್ರಾರಂಭಗೊಂಡಿದ್ದರೂ ಪರಿಸರದಲ್ಲಿನ ಬೆಟ್ಟ ಕುಸಿತದಿಂದ ಸ್ವಲ್ಪ ನಿಧಾನವಾಗಿ ಇದೀಗ ರಭಸದಿಂದ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹೀಗೆ ಮಹಾತ್ಮಾಗಾಂಧಿ ವಿದ್ಯುದಾಗಾರ, ಆನೆಬೈಲ್ ಸೈಟ್(ಶರಾವತಿ ಹೈಡ್ರೋಪವರ್ ಸ್ಟೇಶನ್), ಶರಾವತಿ ಟೇಲರೇಸ್ ಎಂಬ ಹೆಸರಿನಿಂದ ಮೂರು ವಿದ್ಯುದಾಗರಗಳ ಮೂಲಕ ನಾಡಿಗೆ ವಿದ್ಯುತ್ ಒದಗಿಸುತ್ತಾ ನಾಲ್ಕನೇಯದರ ಸಮರ್ಪಣೆಗೆ ಶರಾವತಿ ಉಧ್ಯುಕ್ತಳಾಗಿದ್ದಾಳೆ.
ಈ ಸಿರಿ ಸೊಬಗಿನ ಜೋಗದ ಜಲಪಾತ ತಲುಪಲು ನಾಲ್ಕು ಕಡೆಯಿಂದಿರುವ ದಾರಿಯ ಇಕ್ಕೆಲೆಗಳಲ್ಲಿ ಮಲೆನಾಡಿನ ಸೌಂದರ್ಯ ಮನಸೂರೆಗೊಳ್ಳುತ್ತದೆ. ಈ ಎಲ್ಲ ಹಾದಿಗಳಲ್ಲಿ ಆಳವಾದ ಕಣಿವೆಗಳು, ಕಡಿದಾದ ಬೆಟ್ಟಗಳಿರುವುದರಿಂದ ದಾರಿ ಅಂಕುಡೊಂಕಿನಿಂದಕೂಡಿದೆ. ರಸ್ತೆಯಲ್ಲಿ ಆಚೆಯಿಂದ ಈಚೆಗೆ ನೆಗೆಯು ಕಾಡುಕೋತಿಗಳ ಸಂಸಾರಗಳು, ವಿವಿಧ ಬಗೆಯ ಪಕ್ಷಿಗಳು ಹಾಗೂ ಸಣ್ಣ ಮರಿಯಿಂದ ದೊಡ್ಡ ಗಾತ್ರದ ವಿವಿಧ ಹಾವುಗಳು ಅಡ್ಡಲಾಗಿ ಬರುತ್ತವೆ. ನಮ್ಮ ಜೀವದ ರಕ್ಷಣೆಯ ಜೊತೆಗೆ ಅವುಗಳ ಜೀವರಕ್ಷಣೆ ನಮ್ಮ ಹೊಣೆ ಎಂಬುದರಿತು ಸಾವಧಾನವಾಗಿ ವಾಹನ ನಡೆಸಬೇಕಿರುವುದು ಪೃಕೃತಿ ಹಾಗೂ ಪ್ರವಾಸಿಗರ ಕ್ಷೇಮಕ್ಕಾಗಿ ಅತೀಅಗತ್ಯ.
ಸಾಗರದಿಂದ ಸುಮಾರು 30 ಕಿ.ಮೀ., ಸಿದ್ದಾಪುರದಿಂದ ಮಾವಿನಗುಂಡಿ ಹಾದು 24 ಕಿ.ಮೀ., ಹೊನ್ನಾವರದಿಂದ ಗೇರುಸೊಪ್ಪಾ ಮಾರ್ಗವಾಗಿ ಕತ್ತಲೆಕಾನ, ಮಾಸ್ತಿಮನೆ ಘಟ್ಟ ಹಾಗೂ ಮಲೆಮನೆ ಘಟ್ಟ ಏರಿ ಸಾಗಿ ಸುಮಾರು 60 ಕಿಮೀ. ಹಾಗೂ ಭಟ್ಕಳದಿಂದ ಕೋಗಾರ ಘಟ್ಟದ ಮೂಲಕ ಕಾರ್ಗಾಲ್ ಬಳಸಿ ಸುಮಾರು 60 ಕಿಮೀ ದೂರದ ಜೋಗ ಜಲಪಾತ ಪ್ರಯಾಣದ ಹಾದಿಯಲ್ಲಿನ ಸಹ್ಯಾದ್ರಿಯ ಶ್ರೇಣಿಯ ಸೊಬಗು ಕಣ್ಮನ ಸೆಳೆಯುತ್ತದೆ.
ಜಲಪಾತದ ಧುಮ್ಮಿಕ್ಕುವ ಹಾಗೂ ಕಣಿವೆಯಲ್ಲಿ ಹಾರುವುದನ್ನು ನೇರವಾಗಿ ನೋಡಲು ಮೈಸೂರ ಬಂಗಲೆ ಪ್ರದೇಶ ಸೂಕ್ತ. ಇಲ್ಲಿಂದಲೇ ಜಲಪಾತದ ತಳಭಾಗದ ತನಕ ಸಾಗಲು ಸ್ವಲ್ಪ ಶಿಥಿಲಾವಸ್ಥೆಯಲ್ಲಿರುವ ಮೆಟ್ಟಿಲುಗಳ ವ್ಯವಸ್ಥೆಯಿದ್ದು ಜಾಗರೂಕವಾಗಿ ಇಳಿದರೆ ಜಲಪಾತದ ಬುಡದಲ್ಲಿ ನಿಂತು ಕಣಿವೆಯ ಸೊಬಗ ಸವಿದು ಹಿಂದಿರುಗಬಹುದು. ಜಲಧಾರೆಯ ಧುಮುಕುವಿಕೆಯಿಂದ ತಳಭಾಗದಲ್ಲಿ ಆಳವಾದ ಗುಂಡಿಗಳಿದ್ದು ಅನಗತ್ಯ ಸಾಹಸ ಅಪಾಯಕಾರಿ. ನೀರಿನೊಡನಿರುವ ಕಲ್ಲುಬಂಡೆಗಳು ಸತತ ನೀರಿನ ಸಿಂಪರಣೆಯಿಂದ ಪಾಚಿ ಕಟ್ಟಿ ಜಾರುವುದರಿಂದ ಗಮನ ಅಗತ್ಯ.
ಜಲಪಾತ ಧುಮ್ಮಿಕ್ಕುವ ಹಾಸುಗಲ್ಲಿನಿಂದ ಹರಿದೋಡುವ ಸೊಬಗ ಗಮನಿಸಲು ಕಣಿವೆಯ ವಿಹಂಗಮ ದೃಶ್ಯಕ್ಕೆ ಬ್ರಿಟೀಷ್ ಬಂಗಲೆ ಸೂಕ್ತ ಪ್ರದೇಶ. ರಾಜ ಜಲಧಾರೆಯ ಪಕ್ಕದಲ್ಲಿನ ನಿರಾಧಾರವೆನಿಸುವ ಶಿಲೆಯ ಮೇಲೆ ನಿಂತು ಹರಿದೋಡುವ ಹಾದಿಯಲ್ಲಿನ ಕಡಿದಾದ ಕಣಿವೆಗೆ ಧುಮುಕಿ ಕಣಿವೆಯುದ್ದಕ್ಕೂ ಸಾಗುವ ಶರಾವತಿ ಸೌಂದರ್ಯ ಅಧ್ಭುತದೃಶ್ಯ ಕಾವ್ಯವಾಗಿರುತ್ತದೆ. ಆದರೆ ಮಳೆಗಾಲದಲ್ಲಿ ತುಂಬಿ ಹರಿಯುವ ಶರಾವತಿ ರಾಜಾ ತಡಸಲಿನ ಮೇಲ್ಭಾಗವನ್ನು ಆವರಿಸಿ ಸುರಿಯುವ ಸಂಭವ ಹೆಚ್ಚಾಗಿರುವುದರಿಂದ ಈ ದೃಶ್ಯ ನೋಡುವ ಆಸೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದ್ದು, ಇಲ್ಲಿನಿಂತು ಸೊಬಗ ಸವಿಯಲು ಅಕ್ಟೋಬರ್ ತಿಂಗಳ ನಂತರ ಉತ್ತಮ ಅವಕಾಶ.
ಶರಾವತಿ ನದಿಯು ಕೇವಲ ಜಲಪಾತಕ್ಕೆ ಹಾಗೂ ವಿದ್ಯುದಾಗರಗಳಿಗಾಗಿ ಮಾತ್ರ ಪ್ರಸಿದ್ಧವಾಗಿರದೆ ಅಪರೂಪದ ಜೀವವೈವಿಧ್ಯತೆಯ ಖಜಾನೆಯಾಗಿದೆ. ಸಹ್ಯ ಶಿಖರಗಳು ಅಮೂಲ್ಯ ಸಸ್ಯ ಸಂಪತ್ತನ್ನು ಹೊಂದಿದ್ದು ಅದರ ಭಾಗವಾದ ಶರಾವತಿ ಕಣಿವೆ ಜೀವ ವೈವಿಧ್ಯತಾ ಕಣಜವೆನ್ನಲಾಗುತ್ತದೆ.
ಕೇರಳದ ಮೌನ ಕಣಿವೆಯಲ್ಲಿ ಮಾತ್ರ ಕಂಡುಬರುವ ಸಿಂಗಳೀಕ (ಲಾಯ್ನ್ು ಟೇಲ್ಡ್ ಮೊಂಕ್ಯೂ) ಇಲ್ಲಿ ಕಾಣಸಿಗುತ್ತದೆ. ಅಲ್ಲದೆ ಪ್ರಪಂಚದಲ್ಲಿ ಕೇವಲ ಶರಾವತಿ ಕಣಿವೆಯ ಕತ್ತಲೆಕಾನು ಕಾಡಿನಲ್ಲಿ ಮಾತ್ರವೇ ಕಾಣಸಿಗುವ ಸಸ್ಯ ಪ್ರಭೇದ, ಈ ಪ್ರದೇಶದ ಹೆಸರಿನಿಂದಲೇ ಜಗತ್ತಿಗೆ ಪರಿಚಿತವಾದ ‘ಕತ್ತಲೆಕಾನ್ಸಿಸ್‘ನ ಏಕೈಕ ತಾಣವಾಗಿದೆ ಈ ಕಣಿವೆ. ಆದರೆ ಯೋಜನಾ ಭಾರಗಳು ಇಂದು ಈ ಅಪರೂಪದ ಸಂಕುಲಗಳನ್ನು ವಿದೇಶೀ ನೆರವಿನಿಂದಲೂ ಉಳಿಸಲಾಗದೇ ವಿನಾಶದಂಚಿಗೆ ನಿಲ್ಲಿಸಿವೆ. ಮಲೆನಾಡ ನಿತ್ಯ ಹರಿದ್ವರ್ಣದ ರಕ್ಷಣೆಗಾಗಿ ಜಪಾನ್ ಇನ್ನಿತರ ದೇಶಗಳು ನೆರವು ನೀಡುತ್ತಿದ್ದರೆ, ಇನ್ನು ಕೆಲವು ಕಡೆಗಳಿಂದ ಉದ್ದಿಮೆಗಳಿಗಾಗಿ ಬಂಡವಾಳ ಹರಿದು ಇದೇ ಕಾಡಿನ ಅಂಚಿನಲ್ಲಿ ನೆಲೆಯಾಗುವ ಪ್ರಯತ್ನ ಎಲ್ಲ ನಿರಾಕರಣೆ ಮೀರಿ ನಿಂತಿದೆ ಎಂಬ ಮಾತು ಕೇಳಿಬರುತ್ತಿದೆ.
ಪ್ರವಾಸಿಗರ ಅನುಕೂಲಕ್ಕಾಗಿ ಜೋಗ ಜಲಪಾತ ತಲುಪುವ ಎಲ್ಲ ದಾರಿಗಳಲ್ಲಿ ಸೂಚನಾ ಫಲಕದ ವ್ಯವಸ್ಥೆಯಿದ್ದು, ಎಚ್ಚರಿಕೆಯಿಂದ ಪ್ರಯಾಣಿಸಿದರೆ ಸುಲಭವಾಗಿ ತಲುಪಬಹುದಾಗಿದೆ. ಕವಿವಾಣಿಯಂತೆ ಜೋಗದ ಸಿರಿ ಜಲಧಾರೆಯನ್ನು ವೀಕ್ಷಿಸಿದಾಗ ಧನ್ಯತಾಭಾವ ಮೂಡಿದರೆ ಆಶ್ಚರ್ಯವಿಲ್ಲ. ಇದರ ವೀಕ್ಷಣೆಯಿಂದ ಜೀವನದಲ್ಲಿ ಒಮ್ಮೆ ಜೋಗದ ಗುಂಡಿ ನೋಡು ಎಂದಿರುವ ಕವಿನುಡಿಯ ನಿಜ ಅರ್ಥವಾಗುತ್ತದೆ. ಪ್ರವಾಸಿಗರು ಈ ಸೊಬಗ ಮುಂದಿನವರಿಗೆ ಉಳಿಸಲು ಪರಿಸರ ಸ್ನೇಹಿಗಳಾಗಿರಬೇಕಿರುವುದು ಸೌಂದರ್ಯರಾಣಿಗೆ ಸಲ್ಲಿಸುವ ಕೃತಜ್ಞತೆಯಾಗಿರುತ್ತದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications