ಕನ್ನಡ ನಾಮಫಲಕ ಎಲ್ಲಿದೆ ಹುಡುಕಿಕೊಡಿ

ಮೊದಲ ಆದ್ಯತೆ ಕನ್ನಡಕ್ಕೆ ನೀಡಬೇಕು ತದನಂತರ ಬೇರೆ ಭಾಷೆಗಳಿಗೆ ನೀಡಬೇಕು. ಇದನ್ನು ಉಲ್ಲಂಘಿಸಿದಲ್ಲಿ ಕಲಂ 26ಎ 'ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಕಾರ್ಯ ಸಂಸ್ಥೆಗಳ (ತಿದ್ದುಪಡಿ) ನಿಯಮ 2008'ರ ಅಡಿಯಲ್ಲಿ ರೂ. 10,000/- ಗಳ ದಂಡ ವಿಧಿಸಲಾಗುವುದು. ಈ ಥರದ ಒಂದು ಕಾನೂನನ್ನು ರಾಜ್ಯ ಸರಕಾರ 2008ರಲ್ಲೇ ಹೊರಡಿಸಿದ್ದರೂ ಅದರ ಅನುಷ್ಠಾನ ಮಾತ್ರ ಇನ್ನೂ ಮರೀಚಿಕೆಯಾಗಿದೆ.
ಅಂಗಡಿ ಮಾಲೀಕರ ಜಾಣ ಕುರುಡುತನ, ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ಇಂದು ಕನ್ನಡವನ್ನೇ ಬಿಂಬಿಸಬೇಕಾದ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ಸ್ಥಳಗಳಲ್ಲಿ ಈ ಕಾನೂನನ್ನು ಉಲ್ಲಂಘಿಸಲಾಗಿದೆ. ನಾಮಫಲಕಗಳಲ್ಲಿ ಕನ್ನಡವಿದ್ದರೂ ಅದನ್ನು ಯಾವುದೋ ಮೂಲೆಯಲ್ಲಿ, ಸಣ್ಣ ಗಾತ್ರದ ಅಕ್ಷರಗಳಲ್ಲಿ ಕಾಟಾಚಾರಕ್ಕೆ ಸೇರಿಸಲಾಗಿರುತ್ತದೆ.
ಕನ್ನಡ ಅನುಷ್ಠಾನದ ಹೊಣೆ ಹೊರಬೇಕಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೂಡ ತನ್ನ ವ್ಯಾಪ್ತಿಗೆ ಬರುವ ಈ ಕಾನೂನನ್ನು ಜಾರಿಗೆ ತರುವುದರಲ್ಲಿ ವಿಫಲವಾಗಿದೆ. ಹೀಗಾಗಿ ಸರಕಾರ ಮಾಡಿದ ಕಾನೂನನ್ನು ಇಂದು ಕೇಳುವವರೇ ಇಲ್ಲವಾಗಿದೆ.
ಬದಲಾಗಿ, ಇದರ ಬಗ್ಗೆ ಧ್ವನಿಯೆತ್ತುವ ಕನ್ನಡ ಪರ ಹೋರಾಟಗಾರರ ಮೇಲೆ ಕ್ರಮ ಕೈಗೊಳ್ಳುವುದರ ಮೂಲಕ ಸರಕಾರ ತಾನೇ ಮಾಡಿದ ಕಾನೂನಿಗೆ ತೊಡಕಾಗಿ ಪರಿಣಮಿಸಿದೆ. ಒಂದು ರಾಜ್ಯದಲ್ಲಿ ಸಂಪರ್ಕ ಭಾಷೆಯಾಗಿ ಅಲ್ಲಿನ ಪ್ರಾದೇಶಿಕ ಭಾಷೆ ಬೆಳೆಯುವುದು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ನಾಮಫಲಕಗಳಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಒಂದು ಜನಜಾಗೃತಿಯ ಅಗತ್ಯವಿದೆ.
ಓದಲು ಮರೆಯದಿರಿ : ವೆಂಕಟಪ್ಪ ಅಲ್ಲ ಕನ್ನಡ ಸಂಕಟಪ್ಪ ಗ್ಯಾಲರಿ
ನೋಡಲು ಮರೆಯದಿರಿ : ತಮಾಷೆ ಗೋಡೆ ಬರಹಗಳು












Click it and Unblock the Notifications