'ಥಟ್ ಅಂತ ಹೇಳಿ' ಕಾರ್ಯಕ್ರಮಗಳು ಹೆಚ್ಚಾಗಲಿ
ಕನ್ನಡ ದೂರದರ್ಶನ ವಾಹಿನಿಗಳಲ್ಲಿ ಮೂಡಿಬರುತ್ತಿರುವ ಬೆರಳೆಣಿಕೆಯಷ್ಟು ಉತ್ತಮ ಕಾರ್ಯಕ್ರಗಳಲ್ಲಿ ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಸಹ ಒಂದು. ವಿದ್ಯಾರ್ಥಿಗಳಾದ ನಾವು ಪ್ರತಿ ರಾತ್ರಿ 9.30ಕ್ಕೆ ತಪ್ಪದೆ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತೇವೆ. ಕಾರ್ಯಕ್ರಮದ ನಿರೂಪಕ, ಕ್ವಿಜ್ ಮಾಸ್ಟರ್ ಡಾ.ನಾ.ಸೋಮೇಶ್ವರ ಕೇಳುವ ಪ್ರಶ್ನೆಗಳು ನಿಜಕ್ಕೂ ವಿಚಾರಪೂರ್ಣವಾಗಿರುತ್ತದೆ. ಪುಸ್ತಕ ಕೊಡುವ ಮುನ್ನ ಆ ಪುಸ್ತಕ ಬಗ್ಗೆ ಕೆಲವೇ ಪದಗಳಲ್ಲಿ ಅವರು ನೀಡುವ ವಿವರಣೆ ಪುಸ್ತಕ ಗೆಲ್ಲಲೇ ಬೇಕೆಂಬ ಉಮೇದು ಸ್ಪರ್ಧಿಗಳಲ್ಲಿ ಹೆಚ್ಚಾಗುತ್ತದೆ. ಹಾಗೆಯೇ ಬೇರೆ ಕಾರ್ಯಕ್ರಮಗಳ ಲ್ಲಿ ಕಾಣಿಸುವ ಒತ್ತಡದ ಪರಿಸ್ಥಿತಿ ಥಟ್ ಅಂತ ಹೇಳಿಯಲ್ಲಿ ಇಲ್ಲ. ಅರ್ಥವಾಗುವ ಸರಳ ಸಂಭಾಷಣೆ, ಆಡಂಬರವಿಲ್ಲದ ಕಾರ್ಯಕ್ರಮ, ಹಣದ ಆಮೀಷ ತೋರದೆ ಕನ್ನಡ ಪುಸ್ತಕಗಳನ್ನು ನೀಡುವುದು ನಿಜಕ್ಕೂ ಸ್ವಾಗತಾರ್ಹ.
ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಇಂದು ಸಂಪೂರ್ಣ ಮರೆಯಾಗಿದೆ ಎನ್ನಬಹುದು. ಕಾರ್ಯಕ್ರಮದಲ್ಲಿ ಕನ್ನಡದ ಮಹಾನ್ ಲೇಖಕರ ಪುಸ್ತಕಗಳನ್ನು ಕೊಡರೆ ಹೋದರೂ ಒಟ್ಟಿನಲ್ಲಿ 'ಥಟ್ ಅಂತ ಹೇಳಿ 'ಕಾರ್ಯಕ್ರಮ ನಿಜಕ್ಕೂ ಮನಮುಟ್ಟುವಂತಿದೆ. ಕನ್ನಡದ ಅಳಿಲು ಸೇವೆ ಮಾಡುತ್ತಿರುವ ಚಂದನ ವಾಹಿನಿ ಹಿರಿಕಿರಿಯರೆನ್ನದೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಉಳಿದ ಖಾಸಗಿ ವಾಹಿನಿಗಳು ಚಿನ್ನ, ಬೆಳ್ಳಿ ವಸ್ತುಗಳನ್ನು ಕೊಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿವೆ. ಪ್ರೇಕ್ಷಕನನ್ನು ದಿಕ್ಕು ತಪ್ಪಿಸುವ ಈ ರೀತಿಯ ಕಾರ್ಯಕ್ರಮಗಳು ನಮಗೆ ಖಂಡಿತ ಬೇಡ. ಇಂತಹ ಪರಿಸ್ಥಿತಿಯಲ್ಲಿ ನಮಗೆ ನಾ.ಸೋಮೇಶ್ವರರ ಕಾರ್ಯಕ್ರಮ ದಾರಿದೀಪದಂತೆ ತೋರುತ್ತದೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಈ ರೀತಿ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗಲಿ ಹಾಗೂ ಉಳಿದ ಕನ್ನಡ ದೂರದರ್ಶನ ವಾಹಿನಿಗಳು ಈ ರೀತಿಯ ಕಾರ್ಯಕ್ರಮಗಳನ್ನು ವಾರದಲ್ಲಿ ಒಮ್ಮೆಯಾದರೂ ಪ್ರಸಾರ ಮಾಡಿದರೆ ಕನ್ನಡ ಪುಸ್ತಕಗಳ ಮುದ್ರಣ ಸಂಖ್ಯೆಯೂ ಹೆಚ್ಚಾಗುತ್ತದೆ.
ವಿದ್ಯಾರ್ಥಿಗಳಾದ
ಪುಷ್ಪ,
ವಿಮಲಾ,
ನವ್ಯಾ
ಹಾಗೂ
ಶಶಾಂಕ್