ಅರೆ ಇದೇನಿದು? ಪರಶುರಾಮ್ ವಾಘ್ಮೋರೆ ಖುಲಾಸೆ!
ವಿಜಯಪುರ, ಜುಲೈ 23: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ ವಾಘ್ಮೋರೆ ಖುಲಾಸೆಗೊಂಡಿದ್ದಾನೆ, ಆದರೆ ಗೌರಿ ಹತ್ಯೆ ಕೇಸಿನಿಂದಲ್ಲ.
ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಪರಶುರಾಮ್ ವಾಘ್ಮೋರೆ ಪ್ರಕರಣದಿಂದ ಖುಲಾಸೆ ಆಗಿದ್ದಾನೆ.
ಸಿಂಧಗಿಯ ತಹಶೀಲ್ದಾರ್ ಕಚೇರಿ ಮುಂದೆ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣದಲ್ಲಿ ವಾಘ್ಮೋರೆ ಆರೋಪಿಯಾಗಿದ್ದ. ಹಾಗಾಗಿ ಇಂದು ಆತನನ್ನು ವಿಜಯಪುರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಮಾಡಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಆತ ಖುಲಾಸೆಯಾಗಿದ್ದಾನೆ.


5ನೇ ಆರೋಪಿ ಆಗಿದ್ದ ವಾಘ್ಮೋರೆ
ಪರಶುರಾಮ್ ವಾಘ್ಮೋರೆ ಮಾತ್ರವಲ್ಲದೆ ಆತನ ಜೊತೆ ಆರೋಪಿಗಳಾಗಿದ್ದ ಇನ್ನೂ ಆರು ಮಂದಿ ಸಹ ಪ್ರಕರಣದಿಂದ ಖುಲಾಸೆ ಆಗಿದ್ದಾರೆ. ಆರು ವರ್ಷದ ಹಿಂದೆ ಈ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ವಾಘ್ಮೋರೆ 5ನೇ ಆರೋಪಿ ಆಗಿದ್ದ. ಗೌರಿ ಹತ್ಯೆ ಪ್ರಕರಣದಲ್ಲಿ ಈತನೊಂದಿಗೆ ವಿಚಾರಣೆಗೆ ಒಳಗಾಗಿದ್ದ ಸುನಿಲ್ ಅಗಸರ ಸಹ ಈ ಪ್ರಕರಣದಲ್ಲಿದ್ದು ಆತನೂ ಸಹ ಖುಲಾಸೆ ಆಗಿದ್ದಾನೆ.

ಗೌರಿ ಹತ್ಯೆ ಬಗ್ಗೆ ಮೌನವಾದ ವಾಘ್ಮೋರೆ
ವಿಜಯಪುರದ ಜಿಲ್ಲಾ ನ್ಯಾಯಾಲಾಯದ ನ್ಯಾಯಮೂರ್ತಿಗಳು ಪರಶುರಾಮ್ನನ್ನು ಗೌರಿ ಹತ್ಯೆ ಬಗ್ಗೆ ಪ್ರಶ್ನಿಸಿದಾಗ ಆತ ಯಾವುದೇ ಉತ್ತರ ನೀಡದೇ ಮೌನಕ್ಕೆ ಶರಣಾದ. ವಾಘ್ಮೋರೆಯು ಈಗಾಗಲೇ ಎಸ್ಐಟಿ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ನಗರದ ಎಎಂಸಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.

ಮಗನ ವಿಡಿಯೋ ಮಾಡಬೇಡಿ
ಪೊಲೀಸ್ ವ್ಯಾನಿನಲ್ಲಿ ಕೂತಿದ್ದ ಆರೋಪಿ ಪರಶುರಾಮ ವಾಘ್ಮೋರೆಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಸುದ್ದಿ ಮಾಧ್ಯಮದವರ ಮೇಲೆ ಪರಶುರಾಮ್ನ ತಾಯಿ ಜಾನಕಿ ಅವರು ಗರಂ ಆದರು. ನನ್ನ ಮಗನ ವಿಡಿಯೋ ಮಾಡಬೇಡಿ ಅವನು ನೆಮ್ಮದಿಯಿಂದ ಇರಲು ಬಿಡಿ, ವಿಡಿಯೋ ಮಾಡಿದರೆ ಕಲ್ಲು ತೆಗೆದುಕೊಂಡು ಹೊಡೆಯುತ್ತೇನೆ ಎಂದರು.

ಗುಂಡು ಹೊಡೆದದ್ದು ಪರಶುರಾಮ್?
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪರಶುರಾಮ್ ವಾಘ್ಮೋರೆ ಪ್ರಮುಖ ಆರೋಪಿ ಆಗಿದ್ದು, ಆತನೇ ಗೌರಿ ಲಂಕೇಶ್ಗೆ ಗುಂಡು ಹೊಡೆದಿದ್ದು ಎಂದು ಎಸ್ಐಟಿ ಆರೋಪಿಸಿದೆ. ವಾಘ್ಮೋರೆಯೇ ಈ ವಿಷಯವನ್ನು ಒಪ್ಪಿಕೊಂಡಿದ್ದಾನೆ ಎಂದು ಎಸ್ಐಟಿ ಹೇಳಿದೆ.












Click it and Unblock the Notifications