ನಾಪತ್ತೆಯಾದ ಮೀನುಗಾರರು ಸುರಕ್ಷಿತವಾಗಿ ಬರುತ್ತಾರೆ ಎಂಬ ನಂಬಿಕೆಯಿದೆ: ಜಯಮಾಲ
ಉಡುಪಿ, ಜನವರಿ 07: ಕಡಲಿನೊಂದಿಗೆ ಸಂಘರ್ಷಕ್ಕೆ ಇಳಿದು ಬದುಕನ್ನು ಕಟ್ಟಿಕೊಳ್ಳುವ ಮೀನುಗಾರರನ್ನು ಯಾರೂ ಕೂಡ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. 7 ಮಂದಿ ಮೀನುಗಾರರು ನಾಪತ್ತೆಯಾದ ಪ್ರಕರಣ ದಾಖಲಾದ ಮರುದಿನದಿಂದಲೇ ರಾಜ್ಯ ಸರಕಾರ ಶೋಧ ಕಾರ್ಯಾಚರಣೆ ಆರಂಭಿಸಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಹೇಳಿದ್ದಾರೆ.
ಮಲ್ಪೆ ಮೀನುಗಾರರ ಸಂಘದಿಂದ ಜ.06 ಭಾನುವಾರದಂದು ಮನವಿ ಸ್ವೀಕರಿಸಿ ಮಾತನಾಡಿದ ಅವರು, ನಿಮ್ಮ ನೋವು ನಮಗೆ ಅರ್ಥ ಆಗುತ್ತದೆ. ಏಳು ಕುಟುಂಬದ ಜೊತೆ ಇಡೀ ಕರ್ನಾಟಕವೇ ಇದೆ.
ಮಹಾರಾಷ್ಟ್ರ, ಗೋವಾ, ಕೇರಳ ಎಲ್ಲಾ ಸರಕಾರಗಳ ಜೊತೆ ಸೇರಿ ಶೋಧ ಕಾರ್ಯ ಮಾಡುತ್ತಲೇ ಇದ್ದೇವೆ. ದಿನಕ್ಕೆ ನಾಲ್ಕು ಗಂಟೆಗಳ ಕಾಲ ಹೆಲಿಕಾಪ್ಟರ್ ನಲ್ಲಿ ಕುರುಹುಗಳಿಗಾಗಿ ಹುಡುಕಾಟ ಮಾಡುತ್ತಿದ್ದೇವೆ. ಏಳು ಜೀವಗಳು ಸುರಕ್ಷಿತವಾಗಿ ಬರುತ್ತದೆ ಎಂಬ ನಂಬಿಕೆಯಲ್ಲಿ ನಾನು ಕೂಡ ಇದ್ದೇನೆ. ಅವರನ್ನು ಹುಡುಕಿ ತರುವುದು ನಮ್ಮ ಜವಾಬ್ದಾರಿ. ಇದಕ್ಕೆ ಸರಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ನಿಟ್ಟಿನಲ್ಲಿ ನೌಕಪಡೆ ಕೂಡ ಕೆಲಸ ಮಾಡುತ್ತಿದ್ದು, ಮುಖ್ಯಮಂತ್ರಿ ಮತ್ತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಕೇಂದ್ರ ಸರಕಾರದ ನೆರವು ಪಡೆದುಕೊಂಡು ರಾಜ್ಯ ಸರಕಾರ ಎಲ್ಲ ರೀತಿಯ ಕೆಲಸ ಮಾಡುತ್ತದೆ ಎಂದು ಜಯಮಾಲ ತಿಳಿಸಿದರು.












Click it and Unblock the Notifications