ರಾಮ ಮಂದಿರ ನಿರ್ಮಾಣ ವಿಚಾರ : ರವಿ ಶಂಕರ ಗುರೂಜಿ ಹೇಳಿದ್ದೇನು?
ಉಡುಪಿ, ಡಿಸೆಂಬರ್ 06 : 'ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಆರ್ಎಸ್ಎಸ್ ಸೇರಿದಂತೆ ಎಲ್ಲರೂ ತಮ್ಮದೇ ಅಭಿಪ್ರಾಯ ಹೊಂದಲು ಸ್ವತಂತ್ರರು. ಆದರೆ, ಈ ವಿಚಾರದಲ್ಲಿ ನನ್ನ ಸೌಹಾರ್ಧ ಪ್ರಯತ್ನ ಮುಂದುವರಿಸುವೆ' ಎಂದು ರವಿಶಂಕರ ಗುರೂಜಿ ಹೇಳಿದರು.
ಬುಧವಾರ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ ಗುರೂಜಿ ಅವರು ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಉಡುಪಿಯಲ್ಲಿ ನಡೆದ ವಿಶ್ವಹಿಂದೂ ಪರಿಷತ್ ನ ಧರ್ಮ ಸಂಸದ್ ನಲ್ಲಿ ರಾಮ ಮಂದಿರ ವಿಚಾರದ ಕುರಿತು ರವಿ ಶಂಕರ್ ಗುರೂಜಿ ಅವರ ಮದ್ಯಸ್ಥಿಕೆ ವಿಚಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ರವಿ ಶಂಕರ್ ಗುರೂಜಿ ಧರ್ಮ ಸಂಸದ್ಗೆ ಗೈರಾಗಿದ್ದಾರೆ ಅನ್ನುವ ಮಾತು ಕೇಳಿಬಂದಿತ್ತು. ಆದರೆ, ರವಿಶಂಕರ್ ಗುರೂಜಿ ಅವರ ಇಂದಿನ ಉಡುಪಿ ಭೇಟಿ ಮಹತ್ವ ಪಡೆದು ಕೊಂಡಿದೆ.
ರವಿಶಂಕರ ಗುರೂಜಿ ಅವರು ಉಡುಪಿಗೆ ಆಗಮಿಸಿ ಕೃಷ್ಣ ಮಠಕ್ಕೆ ಭೇಟಿ ನೀಡಿ, ಪೇಜಾವರ ಶ್ರೀ ಗಳೊಂದಿಗೆ ಮಾತುಕತೆ ನಡೆಸಿದರು. ಸುಮಾರು ಅರ್ಧ ಗಂಟೆಗಳ ಕಾಲ ಗೌಪ್ಯ ಮಾತುಕತೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

'ಮಧ್ಯಸ್ಥಿಕೆಗೆ ಯಾರೇ ಆಕ್ಷೇಪಿಸಿದರೂ ಸೌಹಾರ್ದ ಪ್ರಯತ್ನ ಮುಂದುವರಿಸುತ್ತೇನೆ. ರಾಮ ಮಂದಿರ ವಿಚಾರವನ್ನು ಕೋರ್ಟ್ ನಿಂದ ಹೊರಗೆ ಬಗೆಹರಿಸಲು ಯತ್ನ ನಡೆಯುತ್ತಿದೆ' ಎಂದು ತಿಳಿಸಿದರು.
'ನಾನು ಭೇಟಿಯಾದವರೆಲ್ಲಾ ರಾಮಮಂದಿರದ ಪರವಾಗಿದ್ದಾರೆ. ರಾಮ ಮಂದಿರಕ್ಕೆ ಮುಸ್ಲಿಂಮರೂ ಸಹಮತ ವ್ಯಕ್ತಪಡಿಸಿದ್ದಾರೆ. ರಾಮ ಮಂದಿರ ವಿಚಾರದಲ್ಲಿ ಎಲ್ಲರೂ ಸೌಹಾರ್ದ ಪ್ರಿಯರು' ಎಂದು ಹೇಳಿದರು.

ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮಿಜಿಗಳು ಮಾತನಾಡಿ, 'ತಮ್ಮ ಹಾಗು ರವಿಶಂಕರ್ ಗುರೂಜಿ ಅವರ ಜೊತೆಗಿನ ಮಾತುಕತೆ ವಿವರ ನೀಡಲು ನಿರಾಕರಿಸಿದರು. ರವಿಶಂಕರ್ ಗುರೂಜಿಗೆ ಧರ್ಮ ಸಂಸದ್ ನಲ್ಲಿ ವಿರೋಧ ವಿತ್ತು ಎಂದು ಹೇಳಲಾರೆ. ಇಂದು ಧರ್ಮ ಸಂಸದ್ ನ ಅಭಿಪ್ರಾಯಗಳ ಬಗ್ಗೆ ಚರ್ಚೆಯಾಗಿದೆ. ಶ್ರೀರಾಮ ಮಂದಿರ ನಿರ್ಮಾಣ ವಿಚಾರ ನ್ಯಾಯಾಲಯದ ಹೊರಗೆ ತೀರ್ಮಾನವಾಗಲಿ ಅನ್ನೋದೇ ಎಲ್ಲರ ಆಶಯ' ಎಂದು ಹೇಳಿದರು.












Click it and Unblock the Notifications