ಉಡುಪಿಯ ವಿಟ್ಲಪಿಂಡಿಗೆ ಮೆರುಗು ನೀಡಿದ ಯುವಕರ ವಿಶಿಷ್ಟ ವೇಷಗಳು
ಉಡುಪಿ, ಸೆಪ್ಟೆಂಬರ್ 12: ಪ್ರತಿ ಬಾರಿಯಂತೆ ಈ ಬಾರಿಯೂ ಯುವಕರಿಬ್ಬರು ವಿಶಿಷ್ಟ ವೇಷ ಹಾಕುವ ಮೂಲಕ ವಿಟ್ಲಪಿಂಡಿಗೆ ಮೆರುಗು ತಂದರು. ರವಿ ಕಟಪಾಡಿ ಮತ್ತು ರಾಮಾಂಜಿ ಎಂಬಿಬ್ಬರು ಯುವಕರು ಪ್ರತಿ ವರ್ಷ ಅಷ್ಟಮಿ ಸಂದರ್ಭ ಸಾಮಾಜಿಕ ಸಂದೇಶ ಸಾರುವ, ಅಪರೂಪದ ವೇಷ ಹಾಕಿ ಉಡುಪಿ ಜನತೆಗೆ ಮನರಂಜನೆಯ ಜೊತೆಗೆ ಸಂದೇಶವನ್ನೂ ನೀಡುತ್ತಿದ್ದಾರೆ.
ಅಷ್ಟಮಿ ಮತ್ತು ವಿಟ್ಲಪಿಂಡಿ ಸಂದರ್ಭ ನಗರದಲ್ಲೆಡೆ ಸಂಚಾರ ನಡೆಸಿ ಅದರಿಂದ ಸಂಗ್ರಹವಾಗುವ ಹಣವನ್ನು ರೋಗಿಗಳಿಗೆ, ಅಶಕ್ತರಿಗೆ, ಅರ್ಹರಿಗೆ ನೀಡುವುದು ವಾಡಿಕೆ.
ಸಮಾಜ ಸೇವಕ ರವಿ ಕಟಪಾಡಿ ಈ ಬಾರಿ ಕೊರೊನಾ ಜಾಗೃತಿಗಾಗಿಯೇ ವೇಷ ತೊಟ್ಟಿದ್ದರು. ಈ ಹಿಂದಿನ ವರ್ಷಗಳಲ್ಲಿ ಇವರು ತಮ್ಮ ವಿಭಿನ್ನ ಶೈಲಿಯ ವೇಷಗಳ ಮೂಲಕವೇ ಉಡುಪಿಯಲ್ಲಿ ಮನೆ ಮಾತಾಗಿದ್ದಾರೆ. ಕೋವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ಈ ವರ್ಷ ಜಾಗೃತಿ ಮೂಡಿಸುವ ಸಲುವಾಗಿ ವೇಷ ಹಾಕಿ ಗಮನ ಸೆಳೆದಿದ್ದಾರೆ.

ಮತ್ತೋರ್ವ ಯುವಕ ರಾಮಾಂಜಿ 'ಕೋ-ವಿಧ' ಎಂಬ ವಿಭಿನ್ನ ಸಂದೇಶ ಸಾರುವ ವೇಷದೊಂದಿಗೆ ನಗರ ಸಂಚಾರ ಮಾಡಿ ಜನತೆಗೆ ಸಂದೇಶ ಸಾರುವ ಕೆಲಸ ಮಾಡಿದರು.
ನಮ್ಮ ಭೂಮಿ ಬಳಗದ ಉತ್ಸಾಹಿ ಯುವಕ ರಾಮಾಂಜಿ ಕಳೆದ ಎಂಟು ವರ್ಷಗಳಿಂದ ಅಷ್ಟಮಿ ಸಂದರ್ಭ ಬಣ್ಣ ಹಚ್ಚುತ್ತಾರೆ. ಈ ಮೂಲಕ ಉತ್ಸವದ ಮೆರುಗನ್ನೂ ಹೆಚ್ಚಿಸುತ್ತಾರೆ. ಈ ಬಾರಿ ರಾಮಾಂಜಿ ಕೋ-ವಿಧ ಎಂಬ ವೇಷ ಧರಿಸಿ ಜನಮನ ಸೆಳೆದಿದ್ದಾರೆ.

'ಕೊರೊನಾ, ಕೊರೊನಾ ಕಾಲ ಮತ್ತು ಕೊರೊನಾ ನಂತರ' ಎಂಬ ಪರಿಕಲ್ಪನೆಯಲ್ಲಿ ವೇಷ ಮೂಡಿ ಬಂದಿದೆ. ಪ್ರತಿ ವರ್ಷ ವೇಷಹಾಕಿ ಧನಸಂಗ್ರಹ ಮಾಡಿ ಕಷ್ಟದಲ್ಲಿದ್ದವರಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುತ್ತಿದ್ದರು. ಎಂಟನೇ ವರ್ಷದ ಈ ವೇಷವನ್ನು ಹರಕೆ ರೂಪದಲ್ಲಿ ದೇವರಿಗೆ ಸಮರ್ಪಿಸಿದ್ದಾರೆ.












Click it and Unblock the Notifications