ಉಡುಪಿ ಕಾನೂನು ವಿದ್ಯಾರ್ಥಿ ಅಪಹರಣ ಪ್ರಕರಣದಲ್ಲಿ ಇಬ್ಬರ ಬಂಧನ
ಉಡುಪಿ, ಸೆಪ್ಟೆಂಬರ್ 5: ಉಡುಪಿ ಕಾನೂನು ವಿದ್ಯಾರ್ಥಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಉಡುಪಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರನ್ನು ಕವನ್ ಶೆಟ್ಟಿ ಹಾಗೂ ವಿವೇಕ್ ಜಿ ಸುವರ್ಣ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ 28 ಲಕ್ಷ ರೂಪಾಯಿ ಅವ್ಯವಹಾರದ ವಿಚಾರದಲ್ಲಿ ಉಡುಪಿಯ ಕಾನೂನು ವಿದ್ಯಾರ್ಥಿ ವಿಜಯ ಕುಮಾರ್ ಎಂಬವರನ್ನು ಅಪಹರಣ ಮಾಡಲಾಗಿತ್ತು.
ಕಾನೂನು ವಿದ್ಯಾರ್ಥಿ ವಿಜಯ ಕುಮಾರ್ ಅವರನ್ನು ಅಪಹರಿಸಿ ತೀವ್ರ ಹಲ್ಲೆ ನಡೆಸಿದ ಬಳಿಕ ಉಡುಪಿಗೆ ವಾಪಸ್ ತಂದು ಬಿಡಲಾಗಿತ್ತು. ಈ ಕುರಿತು ಆಗಸ್ಟ 31 ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಅಪಹರಣ ಪ್ರಕರಣದ ಕುರಿತು ತನಿಖೆ ನಡೆಸಿದ ಉಡುಪಿ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿಗಳಾದ ಕವನ್ ಶಟ್ಟಿ ಹಾಗೂ ವಿವೇಕ್ ಜಿ ಸುವರ್ಣ ಅವರನ್ನು ಬಂಧಿಸಿದ್ದಾರೆ.
ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ಪ್ರಕಾಶ್ ಮಲ್ಪೆ ಸೇರಿದಂತೆ ಈ ಪ್ರಕರಣದಲ್ಲಿ ಭಾಗಿ ಯಾಗಿದ್ದಾರೆ ಎಂದು ಹೇಳಲಾಗಿರುವ 4ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕೂ ಪೊಲೀಸರು ಶೋಧ ನಡೆಸುತ್ತಿದ್ದಾರೆ.