ಪಡುಬಿದ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜೀವಬಿಟ್ಟ ವಿದ್ಯಾರ್ಥಿನಿ
ಉಡುಪಿ, ಏಪ್ರಿಲ್ 14: ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಪಡುಬಿದ್ರೆ ಸಮೀಪದ ಅದಮಾರುವಿನಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ.
ಪಡುಬಿದ್ರೆ ಅದಮಾರು ನಿವಾಸಿ ಕಂಚಿನಡ್ಕ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸುಜನ್ಯಾ (13) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ನಿನ್ನೆ ಸಂಜೆ ಬಾಲಕಿ ಮೊಬೈಲ್ ನೋಡುತ್ತಾ ಕೂತಿದ್ದಳು. ಮೊಬೈಲ್ ನೋಡುತ್ತಿದ್ದ ಈಕೆಗೆ ತಂದೆ ತಾಯಿ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಬೇಸರ ಮಾಡಿಕೊಂಡ ಬಾಲಕಿ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಮನೆಯವರು ಪಡುಬಿದ್ರೆಯ ಆಸ್ಪತ್ರೆಗೆ ಬಾಲಕಿಯನ್ನು ಕರೆದುಕೊಂಡು ಹೋಗಿ, ನಂತರ ಉಡುಪಿಗೆ ಕೊಂಡೊಯ್ದಿದ್ದರು. ಅಷ್ಟರಲ್ಲಿ ಆಕೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೊಬೈಲ್ ಕೊಡದಿದ್ದಕ್ಕೆ ಬೇಸರಗೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೃತಳ ತಾಯಿ ಮಾನಂಪಾಡಿ ಶಾಲೆಯಲ್ಲಿ ಶಿಕ್ಷಕಿ ಆಗಿದ್ದು, ತಂದೆ ಹಳೆಯಂಗಡಿ ಬೊಳ್ಳುರು ಶಾಲೆಯಲ್ಲಿ ಶಿಕ್ಷಕರಾಗಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications