1000 ರೂ. ಗಡಿ ದಾಟಿದ ಶಂಕರಪುರ ಮಲ್ಲಿಗೆ ದರ
ಉಡುಪಿ, ಆಗಸ್ಟ್ 30: ಶಂಕರಪುರ ಮಲ್ಲಿಗೆ ದರ ಅಟ್ಟೆಗೆ 1000 ರೂ. ಗಡಿ ದಾಟಿದೆ. ಲಾಕ್ ಡೌನ್ ಅವಧಿಯ ಬಳಿಕ ಮೊದಲ ಬಾರಿಗೆ ದರ ಏರಿಕೆಯಾಗಿದ್ದು, ಬೆಳೆಗಾರರು ಸಂತಸಗೊಂಡಿದ್ದಾರೆ.
ಈ ವಾರದಲ್ಲಿ ಶಂಕರಪುರ ಮಲ್ಲಿಗೆ ದರ ಏರಿಕೆ ಕಾಣುತ್ತಿತ್ತು. ಶನಿವಾರ ಅಟ್ಟೆಗೆ 1050 ರೂ. ದರವಿತ್ತು. ಲಾಕ್ ಡೌನ್ ಸಮಯದಲ್ಲಿ ದರ ಕುಸಿತವಾಗಿತ್ತು. ಹಲವು ತಿಂಗಳ ಬಳಿಕ ಇದೇ ಮೊದಲ ಬಾರಿಗೆ 1000 ರೂ.ಗೆ ದರ ಏರಿಕೆಯಾಗಿದೆ.
ಲಾಕ್ ಡೌನ್ ಸಮಯದಲ್ಲಿ ಉಡುಪಿ ಬಿಟ್ಟು ಬೇರೆ ಕಡೆಗೆ ಶಂಕರಪುರ ಮಲ್ಲಿಗೆ ಸಾಗಣೆಯಾಗುತ್ತಿರಲಿಲ್ಲ. ಆದ್ದರಿಂದ ದರ ಕುಸಿತವಾಗಿತ್ತು. ಅಟ್ಟೆಯ ದರ 50 ರೂ.ಗೆ ಇಳಿಕೆಯಾಗಿತ್ತು.

ಮಳೆಯಿಂದಾಗಿ ಪ್ರಸ್ತುತ ಇಳುವರಿ ಕಡಿಮೆ ಇದೆ. ಅಲ್ಲದೇ ಹಬ್ಬ, ಶುಭ ಸಮಾರಂಭಗಳ ಕಾರಣದಿಂದಾಗಿ ದರ ಏರಿಕೆಯಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಶಂಕರಪುರ ಮಲ್ಲಿಗೆಗೆ ಭಾರಿ ಬೇಡಿಕೆ ಇರುತ್ತದೆ. ಈ ಬಾರಿ ಲಾಕ್ ಡೌನ್ ಕಾರಣ ಈ ತಿಂಗಳಿನಲ್ಲಿ ವ್ಯಾಪಾರ ಕುಸಿತವಾಗಿತ್ತು.
ಅನ್ ಲಾಕ್ ಆರಂಭಗೊಂಡ ಬಳಿಕ ಶಂರಕಪುರ ಮಲ್ಲಿಗೆ ದರ ಅಟ್ಟೆಗೆ 100 ರಿಂದ 400 ರೂ. ತನಕ ಇತ್ತು. ಜುಲೈ 31ರಂದು 850 ರೂ.ಗೆ ದರ ತಲುಪಿತ್ತು. ಆಗಸ್ಟ್ 15ರ ಬಳಿಕ 400 ರಿಂದ 560 ರೂ. ತನಕ ದರವಿತ್ತು.
ಆಗಸ್ಟ್ 27ರಂದು 730 ರೂ. ಇದ್ದ ದರ, ಶನಿವಾರ 1050 ರೂ. ಗೆ ತಲುಪಿದೆ. ಮುಂಬೈಗೆ ಶಂಕರಪುರ ಮಲ್ಲಿಗೆ ಸಾಗಣೆಯಾಗುತ್ತಿಲ್ಲ. ಮುಂಬೈಗೆ ಸಾಗಣೆ ಆರಂಭವಾದರೆ ದರ ಇನ್ನೂ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications