ಶಾಲೆ ಮಕ್ಕಳೇ ಮಾಡಿದ ಕಡಿಮೆ ಖರ್ಚಿನ, ಪರಿಸರಸ್ನೇಹಿ ಗಣಪನ ನೋಡಿರಿ..
ಉಡುಪಿ, ಆಗಸ್ಟ್ 24: ಮುಲ್ಕಿ ಪಂಜಿನಡ್ಕದ ಕೆಪಿಎಸ್ ಕೆ ಅನುದಾನಿತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ರಟ್ಟಿನ ಪೆಟ್ಟಿಗೆಯಲ್ಲಿ ಸುಮಾರು 4 ಅಡಿ ಎತ್ತರದ ಗಣೇಶನ ಮೂರ್ತಿಯನ್ನು ರಚಿಸಿದ್ದಾರೆ. ಚಿತ್ರಕಲಾ ಅಧ್ಯಾಪಕ ವೆಂಕಿ ಪಲಿಮಾರು ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಗಣಪನನ್ನು ರಚಿಸಿದ್ದಾರೆ.
ಮಕ್ಕಳು ತಮ್ಮ ಮನೆಗಳಿಂದ ತಂದ ವಿವಿಧ ಆಕಾರ, ವಿವಿಧ ಗಾತ್ರದ ರಟ್ಟಿನ ಪೆಟ್ಟಿಗೆಗಳಿಂದ ಗಣೇಶನನ್ನು ರಚಿಸಲಾಗಿದೆ. ಈ ಗಣೇಶನ ಮೂರ್ತಿಗೆ ಕೆಲವು ರಟ್ಟಿನ ಪೆಟ್ಟಿಗೆಗಳು, 2 ಕೆ.ಜಿ. ಫೆವಿಕೋಲ್ ಮತ್ತು ಸ್ವಲ್ಪ ಬಣ್ಣವನ್ನು ಮಾತ್ರ ಬಳಸಿದ್ದು, ಪರಿಸರಸ್ನೇಹಿ ಜೊತೆಗೆ ಮಿತವ್ಯಯ ಗಣಪ ಇದಾಗಿದೆ.

ಶಾಲೆಯ ಮುಖ್ಯೋಪಾಧ್ಯಾಯರಾದ ನಾಗಭೂಷಣ ರಾವ್ ಈ ಗಣೇಶನನ್ನು ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಅನಾವರಣಗೊಳಿಸಲಿದ್ದು, ನಂತರ 10 ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶವಿರುತ್ತದೆ ಎಂದಿದ್ದಾರೆ.
ಒನ್ ಇಂಡಿಯಾ ಕನ್ನಡ ಜೊತೆಗೆ ಮಾತನಾಡಿದ ವಿದ್ಯಾರ್ಥಿಗಳು, ಪರಿಸರಕ್ಕೆ ಹಾನಿಕಾರಕವಲ್ಲದ ಜೇಡಿಮಣ್ಣಿನ ನೈಸರ್ಗಿಕ ಗಣಪತಿ ಪೂಜಿಸುವ ಮೂಲಕ ಪರಿಸರ ಕಾಳಜಿ ವ್ಯಕ್ತಪಡಿಬೇಕು. ಆ ಮೂಲಕ ಜಲ ಮೂಲಗಳ ಉಳಿವಿಗೆ ನಮ್ಮದೊಂದಿಷ್ಟು ಪ್ರಯತ್ನ ಆಗುತ್ತದೆ ಎಂದಿದ್ದಾರೆ.
ವಿಷಕಾರಿ ರಾಸಾಯನಿಕ, ಲೋಹದ ಲೇಪದ, ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಗಣೇಶನ ಮೂರ್ತಿ ಬಳಸದೆ ಸಾದಾ ಜೇಡಿಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಿ. ಎಲೆ, ಹೂವುಗಳಿಂದ ಮಾಡಿದ ನೈಸರ್ಗಿಕ ಬಣ್ಣ ಹಚ್ಚಿದ ಗಣಪತಿ ಪೂಜಿಸಬೇಕು.

ಸಾಮೂಹಿಕವಾಗಿ ನಡೆಸುವ ಗಣಪತಿ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕು. ಎಲ್ಲಿಯೂ ಪ್ಲಾಸ್ಟಿಕ್ ಬಳಸಬೇಡಿ. ಬಾವಿ, ಕೆರೆ, ನದಿಗಳಲ್ಲಿ ಗಣಪತಿ ವಿಸರ್ಜನೆ ಮಾಡಬೇಡಿ. ಹಾಗೆ ಮಾಡುವುದರಿಂದ ಅಂತರ್ಜಲ, ಕುಡಿಯುವ ನೀರಿನ ಸೆಲೆ ಹಾಳಾಗುತ್ತವೆ. ಇದರ ಬದಲಿಗೆ ಬಕೆಟ್ ಗಳಲ್ಲಿ, ಸಂಚಾರಿ ವಿಸರ್ಜನಾ ವಾಹನಗಳಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೆ ಮಾಡಿರಿ ಎಂದರು.
ಕಡಲ ತೀರದಲ್ಲಿ ಗಣೇಶನ ಮರಳ ಶಿಲ್ಪ ಕಲಾಕೃತಿ
ಇನ್ನು ಗಣೇಶ ಚತುರ್ಥಿಯ ಪ್ರಯಕ್ತ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಣಿಪಾಲದ ತ್ರಿವರ್ಣ ಆರ್ಟ್ ಸೆಂಟರ್ ವಿದ್ಯಾರ್ಥಿಗಳು ಬುಧವಾರ ಮಲ್ಪೆಯ ಕಡಲ ತೀರದಲ್ಲಿ ಗಣೇಶನ ಮರಳ ಶಿಲ್ಪ ಕಲಾಕೃತಿಯನ್ನು ರಚಿಸಿದ್ದಾರೆ.
ನಾಲ್ಕು ಅಡಿ ಎತ್ತರ ಹಾಗೂ 10 ಅಡಿ ಅಗಲದ ಗಣೇಶ ಮತ್ತು ಮೂಷಿಕನ ಕಲಾಕೃತಿಯನ್ನು ಮರಳಿನಲ್ಲಿ ರಚಿಸಿ, ನೋ ಪಲ್ಯೂಶನ್ ಎಂಬ ಸಂದೇಶವನ್ನು ಬಿತ್ತರಿಸಲಾಯಿತು. ಕಲಾವಿದ ಹರೀಶ್ ಸಾಗ ಮಾರ್ಗದರ್ಶನದಲ್ಲಿ ತ್ರಿವರ್ಣ ಕೇಂದ್ರದ ವಿದ್ಯಾರ್ಥಿಗಳಾದ ಪ್ರಸಾದ್ ಆರ್., ಸತೀಶ್ ಕುಲಾಲ್ ಈ ಕಲಾಕೃತಿಯನ್ನು ರಚಿಸಿದರು.












Click it and Unblock the Notifications