ಉಡುಪಿ ಕೃಷ್ಣಮಠದ ರಥಬೀದಿಯಲ್ಲೀಗ ಸಪ್ತೋತ್ಸವ ಸಂಭ್ರಮ
ಉಡುಪಿ, ಜನವರಿ 11: ಪರ್ಯಾಯಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಶ್ರೀ ಕೃಷ್ಣಮಠದಲ್ಲಿ ಸಪ್ತೋತ್ಸವ ಆರಂಭಗೊಂಡಿದೆ. ರಾತ್ರಿ ತೆಪ್ಪೋತ್ಸವವಾದ ಬಳಿಕ ರಥಬೀದಿಯಲ್ಲಿ ರಥೋತ್ಸವ ಸಂಪನ್ನಗೊಂಡಿತು. ಎರಡು ರಥಗಳ ಪೈಕಿ ಒಂದರಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ, ಇನ್ನೊಂದರಲ್ಲಿ ಶ್ರೀ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ಉತ್ಸವ ಮೂರ್ತಿಗಳನ್ನು ಇರಿಸಿ ನೂರಾರು ಭಕ್ತರು ರಥವನ್ನು ಎಳೆದರು.
ಸಪ್ತೋತ್ಸವದಲ್ಲಿ ಶ್ರೀಕೃಷ್ಣಾಪುರ, ಶ್ರೀ ಅದಮಾರು, ಪಲಿಮಾರು ಕಿರಿಯ ಶ್ರೀಪಾದರು ಪಾಲ್ಗೊಂಡರು. ಇದು ಪಲಿಮಾರು ಮಠ ಪರ್ಯಾಯದ ಕೊನೆಯ ಸಪ್ತೋತ್ಸವವಾಗಿದ್ದು, 21 ಸೇವಾಕರ್ತರು ಹೆಸರು ನೋಂದಾಯಿಸಿದ್ದರು.

ಜನವರಿ 14ರಂದು ಮಕರ ಸಂಕ್ರಾಂತಿ ಉತ್ಸವದ ದಿನ ಬ್ರಹ್ಮರಥ ಸಹಿತ ಮೂರು ರಥಗಳ ಉತ್ಸವ ನಡೆಯಲಿದೆ. ಇದರಲ್ಲಿ ಒಂದು ರಥದಲ್ಲಿ ಕೃಷ್ಣ, ಇನ್ನೊಂದರಲ್ಲಿ ಮುಖ್ಯಪ್ರಾಣ, ಮತ್ತೊಂದು ರಥದಲ್ಲಿ ಅನಂತೇಶ್ವರ- ಚಂದ್ರೇಶ್ವರ ದೇವರ ಉತ್ಸವ ಮೂರ್ತಿಗಳನ್ನು ಇರಿಸಿ ರಥೋತ್ಸವ ನಡೆಸಲಾಗುತ್ತದೆ. ಮರುದಿನ ಅಂದರೆ 15ರಂದು ಚೂರ್ಣೋತ್ಸವ ಅಥವಾ ಹಗಲು ಉತ್ಸವ ನಡೆಯಲಿದೆ.

ಜನವರಿ 17 ರಂದು ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಈ ಪರ್ಯಾಯ ಅವಧಿಯ ಕೊನೆಯ ದಿನವಾಗಿದ್ದು, ಹದಿನೆಂಟರಿಂದ ಅದಮಾರು ಮಠದ ಪರ್ಯಾಯ ಪ್ರಾರಂಭವಾಗಲಿದೆ. ಈ ಸಂಬಂಧ ಎಲ್ಲ ಸಿದ್ಧತೆಗಳು ನಡೆಯುತ್ತಿದ್ದು, ಕೃಷ್ಣಮಠ ,ರಥಬೀದಿ ಮತ್ತು ಉಡುಪಿ ನಗರ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ.












Click it and Unblock the Notifications