ಉಡುಪಿಯಲ್ಲಿ ಕೊರೊನಾ ಮುಕ್ತಿಗೆ ನಿರಾಶ್ರಿತರಿಂದ ಪ್ರಾರ್ಥನೆ
ಉಡುಪಿ, ಏಪ್ರಿಲ್ 14: ಭಾರತ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಿಗೆ ತಲೆನೋವಾಗಿರುವ ಮಹಾಮಾರಿ ಕೊರೊನಾ ವೈರಸ್ ನಿಂದ ಮುಕ್ತಿಗಾಗಿ ಉಡುಪಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಉಡುಪಿಯ ಸಿಟಿ ಬಸ್ ಸ್ಟಾಂಡ್ ನಲ್ಲಿ ಸುಮಾರು ಮುನ್ನೂರಕ್ಕಿಂತಲೂ ಹೆಚ್ಚು ನಿರಾಶ್ರಿತರು, ನಿರ್ಗತಿಕರು ಈ ಪ್ರಾರ್ಥನೆ ಸಲ್ಲಿಸಿದರು. ಸಮಾಜ ಸೇವಕ ವಿಶು ಶೆಟ್ಟಿ ಇವರಿಗೆಲ್ಲಾ ಕಳೆದ ಇಪ್ಪತ್ತೈದು ದಿನದಿಂದ ಮೂರು ಹೊತ್ತು ಆಹಾರ ಕೊಡುತ್ತಿದ್ದಾರೆ.
ಕರಾವಳಿ ಜಿಲ್ಲೆ ಉಡುಪಿಯಲ್ಲಿ ಉತ್ತರ ಕರ್ನಾಟಕ ಭಾಗದಿಂದ ಹೋಗಿರುವ ನೂರಾರು ಜನರು ಇಂದು ಪ್ರಾರ್ಥನೆ ಸಲ್ಲಿಸಿದರು. ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಅವರು ಅಲ್ಲೇ ಉಳಿದುಕೊಂಡಿದ್ದಾರೆ. ಆಹಾರ ಮತ್ತು ವಸತಿ ವ್ಯವಸ್ಥೆ ಇಲ್ಲದೇ ನಿರಾಶ್ರಿತರಾಗಿದ್ದರು.
ಇವತ್ತು ಸೌರಮಾನ ಯುಗಾದಿ ಆಗಿರುವುದರಿಂದ ಕೊರೊನಾ ವೈರಸ್ ಆತಂಕ ದೂರ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು. ಬೇರೆ ಬೇರೆ ಊರಿನಿಂದ ಬಂದು ಉಡುಪಿಯಲ್ಲಿ ಸಿಕ್ಕಿಹಾಕಿಕೊಂಡಿರುವ, ಉಡುಪಿಗೆ ದಿನಗೂಲಿಗಾಗಿ ಬಂದಿರುವ ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ದೇಶದ ಒಳಿತಿಗಾಗಿ ಪ್ರಾರ್ಥಿಸಿದರು. ಸಾಮೂಹಿಕ ಪ್ರಾರ್ಥನೆ ನಂತರ ಎಂದಿನಂತೆ ಚಹಾ ತಿಂಡಿ ವಿತರಿಸಲಾಯಿತು.