ಅದಮಾರು ಪರ್ಯಾಯ ಭತ್ತ ಮುಹೂರ್ತ ಸಂಪನ್ನ
ಉಡುಪಿ, ಡಿಸೆಂಬರ್ 6: ಅದಮಾರು ಮಠದಲ್ಲಿಂದು ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಭತ್ತ ಮುಹೂರ್ತ ಸಂಪನ್ನಗೊಂಡಿತು. ಬರುವ ಜನವರಿಯಲ್ಲಿ ಪರ್ಯಾಯ ಮಹೋತ್ಸವ ನಡೆಯಲಿದ್ದು ಇದರ ಅಂಗವಾಗಿ ಬೆಳಿಗ್ಗೆ 8.30ರ ಮುಹೂರ್ತದಲ್ಲಿ ಭತ್ತ ಮುಹೂರ್ತ ನಡೆಯಿತು.
ಪರ್ಯಾಯ ಮಹೋತ್ಸವಕ್ಕೆ ಮುನ್ನ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಧಾನ್ಯ ಮುಹೂರ್ತ, ಕಟ್ಟಿಗೆ ಮುಹೂರ್ತ ಮತ್ತು ಭತ್ತ ಮುಹೂರ್ತ ಮಾಡುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯ.
ಜನವರಿ 18ರಂದು ನೂತನ ಪರ್ಯಾಯ ಪೀಠಾಧಿಪತಿಯಾಗಿ ಅದಮಾರು ವಿಶ್ವಪ್ರಿಯ ಶ್ರೀಗಳು ವಿರಾಜಮಾನರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಉಡುಪಿಯ ಕೃಷ್ಣಮಠದಲ್ಲಿ ಭತ್ತ ಮುಹೂರ್ತ ಸಂಪನ್ನಗೊಂಡಿತು. ಪರ್ಯಾಯ ಮಹೋತ್ಸವದ ಉದ್ದಕ್ಕೂ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಣೆಯಾಗಲಿದೆ. ಪರ್ಯಾಯಕ್ಕೂ ಮುನ್ನ ಭತ್ತದ ಮುಡಿಗಳನ್ನು ಸಂಗ್ರಹ ಮಾಡುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಭತ್ತ ಹಳತಾದಷ್ಟೂ ಅದರ ರುಚಿ ಹೆಚ್ಚುತ್ತಾ ಹೋಗುತ್ತದೆ; ಈ ಕಲ್ಪನೆಯಲ್ಲಿ ಪ್ರತೀ ಪರ್ಯಾಯ ಮಹೋತ್ಸವಕ್ಕೆ ಮುನ್ನ ಭತ್ತದ ಮುಡಿಗಳನ್ನು ಶ್ರೀ ಮಠದಲ್ಲಿ ಸಂಗ್ರಹಿಸಿಡುವ ಸಂಪ್ರದಾಯವೇ ಭತ್ತ ಮುಹೂರ್ತ.

ಬೆಳಿಗ್ಗೆ ಎಂಟೂವರೆ ಸುಮಾರಿಗೆ ಭತ್ತ ಮುಹೂರ್ತ ವಿಧಿವತ್ತಾಗಿ ನಡೆಯಿತು. ಮುಹೂರ್ತಕ್ಕೂ ಮುನ್ನ ಚಂದ್ರಮೌಳೀಶ್ವರ, ಮುಖ್ಯಪ್ರಾಣ ಸಹಿತ ವಿವಿಧ ದೇವರುಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಮೆರವಣಿಗೆ ಮೂಲಕ ಭತ್ತದ ಮುಡಿಗಳನ್ನು ಕೃಷ್ಣ ಮಠಕ್ಕೆ ತರಲಾಯಿತು. ಕೃಷ್ಣ ಮಠದ ಬಡಗುಮಾಳಿಗೆಯಲ್ಲಿ ಅಕ್ಕಿಮುಡಿಗೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಲಾಯಿತು.












Click it and Unblock the Notifications