ಬ್ಲ್ಯೂ ವೇಲ್ ತಡೆಗೆ ರಾಜ್ಯ ಶಿಕ್ಷಣ ಇಲಾಖೆಯ ಕ್ರಮ ಸೊನ್ನೆ
ಮಂಗಳೂರು, ಆಗಸ್ಟ್ 31 : ವಿವಾದಿತ ಬ್ಲ್ಯೂ ವೇಲ್ ಆನ್ ಲೈನ್ ಗೇಮ್ ಭಾರತದಲ್ಲಿ ಸುಮಾರು 200ಕ್ಕಿಂತ ಮಕ್ಕಳನ್ನು ಬಲಿ ತೆಗೆದುಕೊಂಡಿದ್ದು, ಇದೀಗ ಈ ಗೇಮ್ ಪೋಷಕರನ್ನು ಬೆಚ್ಚಿಬೀಳಿಸಿದೆ.
ಬ್ಲೂ ವ್ಹೇಲ್ ಚಾಲೆಂಜ್ ಆತ್ಮಹತ್ಯಾ ಕೂಪ: ತಿಳಿಯಬೇಕಾದ 10 ಸಂಗತಿ
ಮಕ್ಕಳಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡುವ ಈ ಅಪಾಯಕಾರಿ ಬ್ಲ್ಯೂ ವೇಲ್ ಆನ್ ಲೈನ್ ಗೇಮ್ ಕುರಿತು ಕರ್ನಾಟಕ ಶಿಕ್ಷಣ ಇಲಾಖೆ ಇದುವರೆಗೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ವಿಫಲವಾಗಿದೆ.
ಶಿಕ್ಷಣ ಸಚಿವ ತನ್ವಿರ್ ಸೇಠ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅವರು ಈ ಕುರಿತು ಹೇಳಿಕೆಯೊಂದನ್ನು ನೀಡುವುದನ್ನು ಬಿಟ್ಟರೆ ಗೇಮ್ ತಡೆ ಕುರಿತು ಶಿಕ್ಷಣ ಇಲಾಖೆ ಕಡೆಯಿಂದ ಯಾವುದೇ ಕಟ್ಟುನಿಟ್ಟಿನ ಕ್ರಮ ಇದುವರೆಗೆ ಕೈಗೊಂಡಿಲ್ಲ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿದಾಗ ಬ್ಲ್ಯೂವೇಲ್ ಗೇಮ್ ಬಗ್ಗೆ ವಿದ್ಯಾರ್ಥಿ ಹಾಗೂ ಹೆತ್ತವರಲ್ಲಿ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಪಷ್ಟವಾಗಿದೆ.
'ಬ್ಲೂ ವೇಲ್' ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುತ್ತಿರುವ ಮಂಗಳೂರಿನ ಶಾಲೆ
ನಗರದ ಕೆನರಾ ಪ್ರೌಢಶಾಲೆ, ಕಾರ್ಮೆಲ್ ಶಾಲೆ ಮತ್ತು ಕೆನರಾ ಕಾಲೇಜು ಆನ್ ಲೈನ್ ಗೇಮ್ ನ ಅಪಾಯವನ್ನು ಮಕ್ಕಳಲ್ಲಿ ಮನವರಿಕೆ ಮಾಡಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ಶಾರದಾ ವಿದ್ಯಾಲಯ, ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳು ಕೂಡ ತಮ್ಮ ಮಕ್ಕಳನ್ನು ಆನ್ ಲೈನ್ ಗೇಮ್ ನಿಂದ ಪಾರು ಮಾಡಲು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ಇನ್ನು ನಗರದ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಬ್ಲ್ಯೂ ವೇಲ್ ನಂತಹ ಅಪಾಯಕಾರಿ ಆನ್ ಲೈನ್ ಗೇಮ್ ಕುರಿತು ವಿದ್ಯಾರ್ಥಿ ಹಾಗೂ ಹೆತ್ತವರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವರ್ಕ್ ಶಾಪ್ ನಡೆಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹಮ್ಮಿಕೊಳಲಾಗುವುದು ಎಂದು ಕಾಲೇಜಿನ ಪ್ರಿನ್ಸಿಪಾಲ್ ಪ್ರಭಾ ತಿಳಿಸಿದ್ದಾರೆ.