ಕೊರಗಜ್ಜ ದೈವದ ಪವಾಡ: ಕರಿಗಂಧ ಹಾಕಿದ ಕೂಡಲೇ ಮಗುವಿನ ಆರೋಗ್ಯದಲ್ಲಿ ದಿಢೀರ್ ಚೇತರಿಕೆ
ಉಡುಪಿ, ಅಕ್ಟೋಬರ್ 23: ತುಳುನಾಡಿನ ಬಹು ಜನರ ನಂಬುಗೆಯ ಕೊರಗಜ್ಜ ದೈವ ಮತ್ತೆ ಪವಾಡ ಮೆರೆದಿದೆ. ವೈದ್ಯರೇ ಮಗು ಬದುಕುವ ಭರವಸೆಯನ್ನು ನೀಡದ ಸಂದರ್ಭದಲ್ಲಿ ಮಗುವಿನ ಹೆತ್ತವರು ಕೊರಗಜ್ಜನಲ್ಲಿ ಪ್ರಾರ್ಥಿಸಿ ಮಗುವಿನ ಹಣೆಗೆ ಕರಿಗಂಧ ಹಚ್ಚಿದ ಕೆಲವೇ ಗಂಟೆಗಳಲ್ಲಿ ಮಗುವಿನ ಆರೋಗ್ಯದಲ್ಲಿ ದಿಢೀರ್ ಚೇತರಿಕೆ ಕಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಸಾಗರ ಮೂಲದ ನಾಗಶ್ರೀ ಎಂಬುವವರ ನಾಲ್ಕು ತಿಂಗಳ ಪುಟ್ಟ ಹೆಣ್ಣು ಮಗುವಿಗೆ ವಿಪರೀತ ಜ್ವರ ಕಂಡು ಬಂದಿತ್ತು. ಎರಡು ದಿನ ಕಳೆದರೂ ಜ್ವರ ಕಡಿಮೆಯಾಗದೇ ಮಗು ಅಳು ನಿಲ್ಲಿಸುತ್ತಿರಲ್ಲಿಲ್ಲ. ಹೀಗಾಗಿ ಕುಂದಾಪುರದ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಅಸ್ಪತ್ರೆಯಲ್ಲಿ ಮಗುವಿಗೆ ಪಿಡ್ಸ್ ಇರುವುದಾಗಿಯೂ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಅಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ಕೆಎಂಸಿಗೆ ದಾಖಲಿಸಲಾಗಿತ್ತು.
ಐಸಿಯುನಲ್ಲಿದ್ದ ಮಗುವಿನ ಅರೋಗ್ಯ ಚಿಂತಾಜನಕವಾಗಿತ್ತು. ಅಷ್ಟೇ ಅಲ್ಲ ಪದೇ ಪದೇ ಮಗುವಿನ ಹೃದಯ ಸ್ತಬ್ಧವಾಗುತ್ತಿರುವುದರ ಬಗ್ಗೆ ವೈದರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ವೈದರ ಪ್ರಯತ್ನ ಮಾಡುವುದಾಗಿಯೂ ಭರವಸೆ ನೀಡಿದರೂ ಮಗುವಿನ ಪ್ರಾಣ ಉಳಿಯುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.

ಮಗುವಿನ ಪರಿಸ್ಥಿತಿ ಕಂಡ ಕುಟುಂಬಸ್ಥರು ಕಂಗಾಲಾಗಿ ಹೋಗಿದ್ದರು.ಅಷ್ಟರಲ್ಲಿ ಅಸ್ಪತ್ರೆ ಬಳಿಯಿದ್ದ ಓರ್ವ ವ್ಯಕ್ತಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಹೇಳಿದ ಹಿನ್ನಲೆಯಲ್ಲಿ ಮಗುವಿನ ಹೆತ್ತವರು ಇಂದ್ರಾಳಿ, ಎಂಜಿಎಂ ಹಾಸ್ಟೆಲ್ ಬಳಿಯಿರುವ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ಗಂಧ ಪ್ರಸಾದ ಪಡೆದು ತೆರಳಿದ್ದರು.
ಕೊರಗಜ್ಜನ ಕರಿಗಂಧವನ್ನು ಮಗುವಿನ ಹಣೆಗೆ ಹಚ್ಚುತ್ತಿದ್ದಂತೆಯೇ, ಗಂಭೀರ ಸ್ಥಿತಿಯಲ್ಲಿದ್ದ ಪುಟ್ಟ ಕಂದಮ್ಮನ ಅರೋಗ್ಯ ದಿಢೀರಾಗಿ ಚೇತರಿಕೆ ಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು. ವೈದರು ಕೂಡ ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡುವ ಮೂಲಕ ಮಗು ಅರೋಗ್ಯವಾಗಿ ಹೆತ್ತಮ್ಮಳ ಕೈಯಲ್ಲಿ ಮತ್ತೆ ಬಂದು ಸೇರಿದೆ.
ಹೃದಯ ಬಡಿತವೇ ನಿಂತು ಹೋಯಿತು ಎಂದಿದ್ದ ಮಗು ಮತ್ತೆ ಕಿಲಕಿಲ ನಗುತ್ತಿರುವುದನ್ನ ಕಂಡ ಕುಟುಂಬಸ್ಥರ ಸಂತೋಷ ಮುಗಿಲು ಮುಟ್ಟಿದೆ. ಇದಕ್ಕೆಲ್ಲ ಕಾರಣ ನಂಬಿದ ಕೊರಗಜ್ಜ ಎನ್ನುವುದು ಕುಟುಂಬಸ್ಥರ ನಂಬಿಕೆ. ಹೀಗಾಗಿ ಅಸ್ಪತ್ರೆಯಿಂದ ನೇರವಾಗಿ ಇಂದ್ರಾಳಿ ಬಳಿಯ ಕೊರಗಜ್ಜನ ಕ್ಷೇತ್ರಕ್ಕೆ ಬಂದು ಮಗುವನ್ನು ಕೊರಗಜ್ಜ ಸ್ವಾಮಿಯ ಮುಂದಿಟ್ಟು ಪ್ರಾರ್ಥನೆ ಸಲ್ಲಿಸಿ ಗಂಧ ಪ್ರಸಾದ ಪಡೆದುಕೊಂಡರು. ಬದುಕಿರುವವರೆಗೂ ಈ ಮಗು ಕೊರಗಜ್ಜನ ಪ್ರಸಾದವೆಂದೇ ನಂಬಿ ಬದುಕುತ್ತೇವೆ ಎಂದು ಹೇಳುತ್ತಾ ಆನಂದಭಾಷ್ಪಗಳೊಂದಿಗೆ ತಮ್ಮೂರಿಗೆ ತೆರಳಿದ್ದಾರೆ.

ತುಳುನಾಡಿನ ಕಾರ್ಣಿಕದ ದೈವ ಕೊರಗಜ್ಜ ಒಂದಲ್ಲ ಒಂದು ರೀತಿಯಲ್ಲಿ ತನ್ನ ಕಾರ್ಣಿಕತೆಯನ್ನು ತೋರಿಸಿ ಕೊಡುತ್ತಿರುತ್ತಾನೆ ಎನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿಯಾಗಿದೆ. ಇಂದ್ರಾಳಿ ಬಳಿಯಿರುವ ಕ್ಷೇತ್ರದಲ್ಲಿ ಇಂತಹ ಹತ್ತಾರು ಪವಾಡಗಳು ನಡೆಯುತ್ತಿರುತ್ತಿದ್ದು ಕೊರಗಜ್ಜ ಪವಾಡಕ್ಕೆ ಭಕ್ತರು ಮತ್ತೆ ಶರಣಾಗಿದ್ದಾರೆ.












Click it and Unblock the Notifications