"ಸಿಎಂ ಸ್ಥಾನ ಹೋದ ನಂತರ ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ''
ಉಡುಪಿ, ನವೆಂಬರ್ 5: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ ಕೆಂಡಕಾರಿದ್ದಾರೆ.
ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನಿಂದ ಮುಖ್ಯಮಂತ್ರಿ ಸ್ಥಾನ ಹೋದ ನಂತರ ಅವರಿಗೆ ಹುಚ್ಚು ಹಿಡಿದು ಹೋಗಿದೆ ಎಂದು ಸಚಿವ ಈಶ್ವರಪ್ಪ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಯಾಕೆ ಮುಖ್ಯಮಂತ್ರಿ ಬದಲಾವಣೆ ಆಗಬೇಕು? ಸಿದ್ದರಾಮಯ್ಯನಿಗೆ ಆಕಾಶದಿಂದ ಸುದ್ದಿ ಉದುರಿದ್ಯಾ? ಮೋದಿ, ನಡ್ಡಾ, ಅಮಿತ್ ಶಾ ಫೋನ್ ಮಾಡಿ ಹೇಳಿದರಾ? ಎಂದು ಪ್ರಶ್ನಿಸಿದರು.

ನೀವು ಜನರ ಮಧ್ಯೆ ಹೋಗಿ ಕೆಲಸ ಮಾಡಿ. ನಾನು ದೇವಸ್ಥಾನದಲ್ಲಿ ಇದೀನಿ, ಇಲ್ಲದಿದ್ದರೆ ಇನ್ನೂ ಕೆಟ್ಟ ಪದ ಹೇಳುತ್ತಿದ್ದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ವಿಚಾರವಾಗಿ ಸಿದ್ಧರಾಮಯ್ಯ ನೀಡಿದ್ದ ಹೇಳಿಕೆ ವಿರುದ್ಧವೂ ಅಸಮಾಧಾನ ಹೊರ ಹಾಕಿದರು. ಇದೊಂದು ರಾಜಕೀಯ ಪ್ರೇರಿತ ಬಂಧನ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಹಾಗಾದರೆ ಕೊಲೆ ಪ್ರಕರಣವನ್ನು ತನಿಖೆ ಮಾಡಬಾರದಾ? ಹಾಗಾದರೆ ಕೊಲೆಗೆ ಕಾಂಗ್ರೆಸ್ ಬೆಂಬಲ ಕೊಡುತ್ತಾ? ಸಿದ್ದರಾಮಯ್ಯ ಬೆಂಬಲ ಕೊಡುವುದಾದರೆ ಒಪ್ಪಿಕೊಂಡು ಬಿಡಲಿ ಕಿಡಿಕಾರಿದರು.
ನಮ್ಮವರನ್ನೆಲ್ಲ ಜೈಲಿಗೆ ಕಳಿಸಿದ್ದು ಕೂಡಾ ರಾಜಕೀಯ ಪ್ರೇರಿತನಾ? ಬಾಯಿಗೆ ಬಂದಂತೆ ಮಾತನಾಡುವುದು ವಿರೋಧ ಪಕ್ಷದ ನಾಯಕನಿಗೆ ಶೋಭೆ ತರುವುದಿಲ್ಲ. ತಪ್ಪಿತಸ್ಥನಲ್ಲದಿದ್ದರೆ ಬಿಡುಗಡೆಯಾಗಿ ಹೊರಗೆ ಬರಲಿ. ಕಾಂಗ್ರೆಸ್ನ ಧೋರಣೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.












Click it and Unblock the Notifications