ಉಡುಪಿಯಲ್ಲಿ ಪೇಜಾವರ ಕಿರಿಯ ಶ್ರೀಗಳಿಂದ ಬೌಂಡರಿಗಳ ಸುರಿಮಳೆ
ಉಡುಪಿ, ನವೆಂಬರ್ 5: ಆರತಿ ಹಿಡಿದು ಪೂಜೆ ಮಾಡುವ ಕೈಯಲ್ಲಿ ಕ್ರಿಕೆಟ್ ಬ್ಯಾಟ್.. ಕಚ್ಚೆ ಎತ್ತಿ ಕಟ್ಟಿ ಶಾಲನ್ನು ಸೊಂಟಕ್ಕೆ ಬಿಗಿದ ಸ್ವಾಮೀಜಿ.. ಪ್ರತೀ ಬಾಲ್ ಗೆ ಫೋರ್.. ಫೋರ್.. ಫೋರ್.. ಈ ಅಪರೂಪದ ದೃಶ್ಯ ಕಂಡು ಬಂದಿದ್ದು ಉಡುಪಿಯಲ್ಲಿ.
ಉಡುಪಿಯಲ್ಲಿ ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಕ್ರಿಕೆಟ್ ಆಟವಾಡಿದ್ದಾರೆ. ಉಡುಪಿಯ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿದ ಕಿರಿಯ ಸ್ವಾಮೀಜಿ ಬೌಂಡರಿಗಳ ಸುರಿಮಳೆ ಸುರಿಸಿ ನೋಡುಗರನ್ನು ಅಚ್ಚರಿಗೆ ಕೆಡವಿದರು.
ಮಧ್ವ ಟ್ರೋಫಿಗೆ ಚಾಲನೆ
ಮಧ್ವ ಟ್ರೋಫಿ ಕ್ರಿಕೆಟ್ ಕೂಟಕ್ಕೆ ಚಾಲನೆ ನೀಡಿ ಸುಮಾರು 10 ಬಾಲ್ ಗಳನ್ನು ಎದುರಿಸಿದ ಸ್ವಾಮೀಜಿ ಯಾವುದೇ ಎಸೆತದಲ್ಲೂ ಬೀಟ್ ಆಗಿಲ್ಲ. ಎಲ್ಲ ಬಾಲ್ ಗಳನ್ನು ಲೆಗ್ ಸೈಡ್ ಬೌಂಡರಿಗಟ್ಟಿದರು.
ಹುಬ್ಬೇರಿಸಿದ ಜನ
ಮೈದಾನದಲ್ಲಿ ಇದ್ದ ಕ್ರಿಕೆಟ್ ಪ್ರೇಮಿಗಳು ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಭರ್ಜರಿ ಬ್ಯಾಟಿಂಗ್ ನೋಡಿ ಹುಬ್ಬೇರಿಸಿದರು.
ಕಬಡ್ಡಿ, ಬ್ಯಾಡ್ಮಿಂಟನ್ ಆಡುತ್ತಿದ್ದೆ
ಈ ಸಂದರ್ಭ ಮಾತನಾಡಿದ ಶ್ರೀಗಳು, "ಪೂರ್ವಾಶ್ರಮದಲ್ಲಿ ಕಬಡ್ಡಿ, ಬ್ಯಾಡ್ಮಿಂಟನ್ ಆಡುತ್ತಿದ್ದೆ. ಕ್ರಿಕೆಟ್ ಬಗ್ಗೆ ಹೆಚ್ಚು ಒಲವಿರಲಿಲ್ಲ. ಆದರೆ, ಕ್ರಿಕೆಟ್ ಆಟ ಗೊತ್ತಿಲ್ಲ ಎಂದೇನಲ್ಲ," ಎಂದರು.
ಬಂದ ಬಾಲ್ಗೆ ಹೊಡೆದೆ
"ನಾನು ಕ್ರಿಕೆಟ್ ಆಡಲಿಲ್ಲ. ಬಂದ ಬಾಲ್ ಗೆ ಬ್ಯಾಟಿನಿಂದ ಹೊಡೆದೆ ಅಷ್ಟೇ," ಎಂದು ತಮ್ಮ ಬೌಂಡರಿಗಳ ಸುರಿಮಳೆಯ ಬಗ್ಗೆ ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವಿವರಿಸಿದರು.
ಕ್ರೀಡಾಕೂಟದ ಟಾಸನ್ನ ಸ್ವಾಮೀಜಿಯವರು ಚಿಮ್ಮಿಸಿ ಎರಡು ದಿನಗಳ ಪಂದ್ಯಾಟಕ್ಕೆ ಚಾಲನೆ ನೀಡಿದರು.