ಸಮುದ್ರ ರಾಜನಿಗೆ ಪೂಜೆ ಸಲ್ಲಿಸಿ ಕಡಲಿಗಿಳಿದ ಮೀನುಗಾರರು
ಉಡುಪಿ, ಆಗಸ್ಟ್ 17: ಭಾರೀ ಮಳೆಯಿಂದಾಗಿ ಪ್ರಾರಂಭದಲ್ಲೇ ವಿಘ್ನ ಎದುರಿಸಿದ್ದ ಕರಾವಳಿಯ ಮೀನುಗಾರಿಕೆ ಕೊನೆಗೂ ಪ್ರಾರಂಭಗೊಂಡಿದೆ. ಮೀನುಗಾರರು ಈ ಋತುವಿನ ಮೀನುಗಾರಿಕೆಗೆ ಇಳಿದಿದ್ದಾರೆ.
ಹೊಸ ಋತುವಿನ ಮೀನುಗಾರಿಕೆಗೆ ತೆರಳುವ ಮುನ್ನ ಸಮುದ್ರ ರಾಜನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಉಡುಪಿಯ ಮಲ್ಪೆಯಲ್ಲಿ ಮೀನುಗಾರರು ಬಲರಾಮ ದೇವರಿಗೆ ಪೂಜೆ ಸಲ್ಲಿಸಿ, ಸಮುದ್ರಕ್ಕೆ ಕ್ಷೀರ ಅರ್ಪಿಸಿ ಮೀನುಗಾರಿಕೆ ಪ್ರಾರಂಭಿಸಿದ್ದಾರೆ.
ಮುಗಿದ ಮಳೆಗಾಲದ ರಜೆ: ಮಳೆಗಾಲ ಬಂತೆಂದರೆ ಯಾಂತ್ರೀಕೃತ ಮೀನುಗಾರಿಕೆ ಸ್ಥಗಿತಗೊಳ್ಳುತ್ತದೆ. ಮಳೆಗಾಲದ ಎರಡು ತಿಂಗಳು ಮೀನುಗಾರಿಕೆಗೆ ನಿಷೇಧದ ಅವಧಿ. ಜೂನ್ ನಲ್ಲಿ ಸ್ಥಗಿತಗೊಳ್ಳುವ ಮೀನುಗಾರಿಕೆ ಆಗಸ್ಟ್ ತಿಂಗಳಲ್ಲಿ ಪ್ರಾರಂಭಗೊಳ್ಳಬೇಕು. ಆದರೆ ಈ ಬಾರಿ ಪ್ರಾರಂಭದಲ್ಲೇ ಪ್ರಕೃತಿ ಮುನಿಯಿತು. ಪರಿಣಾಮವಾಗಿ ಆಗಸ್ಟ್ ಎರಡು ವಾರಗಳ ಮೀನುಗಾರಿಕೆ ನಷ್ಟವಾಗಿದೆ.

ಗಾಳಿ ಮಳೆಗೆ ಸಮುದ್ರದ ಅಬ್ಬರ ಜೋರಿರುವುದರಿಂದ ಮೀನುಗಾರರು ಕಡಲಿಗಿಳಿಯೋ ಸಾಹಸ ಮಾಡಿಲ್ಲ. ಜಿಲ್ಲಾಡಳಿತವೂ ರೆಡ್ ಅಲರ್ಟ್ ಘೋಷಿಸಿ ಕಡಲಿಗಿಳಿಯದಂತೆ ಎಚ್ಚರಿಕೆ ನೀಡಿತ್ತು. ಇದೀಗ ಮಳೆ ಕ್ಷೀಣಗೊಂಡಿದ್ದು ಕಡಲು ಕೂಡ ಶಾಂತವಾಗಿದೆ.
ಉಡುಪಿಯ ಮಲ್ಪೆಯಲ್ಲಿ ಮೀನುಗಾರರು ಸಮುದ್ರರಾಜನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬೆಣ್ಣೆಕುದ್ರು ಮತ್ತು ವಡಬಾಂಡೇಶ್ವರ ದೇವಸ್ಥಾನದಲ್ಲಿ ಬಲರಾಮ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಸಮುದ್ರರಾಜನಿಗೂ ಪೂಜೆ ನೆರವೇರಿಸಿ ಹೊಸ ಋತುವಿನ ಮೀನುಗಾರಿಕೆಗೆ ತೆರಳಿದ್ದಾರೆ. ಈ ಋತುವಿನಲ್ಲಿ ಮೀನುಗಾರಿಕೆ ವಿಪುಲವಾಗಿ ಆಗುವುದರ ಜೊತೆಗೆ ಅವಘಡಗಳೂ ಸಂಭವಿಸದಿರಲಿ ಎಂದು ಸಮುದ್ರದೇವರಾದ ಬಲರಾಮನನ್ನು ಪ್ರಾರ್ಥಿಸಿಕೊಂಡರು.
ಮಲ್ಪೆ ಸರ್ವ ಋತು ಬಂದರಿನಲ್ಲಿ ನೂರಾರು ಯಾಂತ್ರೀಕೃತ ಮತ್ತು ಆಳಸಮುದ್ರ ಬೋಟ್ ಗಳಿವೆ. ಈಗ ಕಡಲು ಶಾಂತಗೊಂಡಿರುವುದರಿಂದ ಇವೆಲ್ಲ ಬೋಟ್ ಗಳು ಅಗತ್ಯ ಮಂಜುಗಡ್ಡೆ ಮತ್ತು ಬಲೆಗಳನ್ನು ಸಿದ್ಧಪಡಿಸಿ ಹೊಸ ನಿರೀಕ್ಷೆಯೊಂದಿಗೆ ಕಡಲಿಗಿಳಿದಿವೆ. ಮಳೆಗಾಲದಲ್ಲಿ ಮೀನುಗಳ ಸಂತಾನವೃದ್ಧಿ ಆಗುವುದರಿಂದ ಮೀನುಗಾರರೂ ಹೊಸ ಭರವಸೆಯೊಂದಿಗೆ ಕಡಲಿಗಿಳಿದಿದ್ದಾರೆ.












Click it and Unblock the Notifications