ಉಡುಪಿ ಅಡುಗೆ ವೈಶಿಷ್ಟ್ಯ..ಘಮ ಘಮಿಸುವ ಸಾರು
ಉಡುಪಿ, ಆ.5 : ಉಡುಪಿಗೆ ಭೇಟಿ ನೀಡಿ, ಶ್ರೀ ಕೃಷ್ಣನ ದರ್ಶನ ಪಡೆದ ಬಳಿಕ ಭಕ್ತರು ಘಮಘಮಿಸುವ ಸಾರು, ಸಾಂಬಾರು, ಪಾಯಸ ಸಹಿತ ಭೋಜನವನ್ನು ಪ್ರಸಾದವಾಗಿ ಭಕ್ತಿಯಿಂದ ಸ್ವೀಕರಿಸುತ್ತಾರೆ.
ಉಡುಪಿ ಭಕ್ತಿಯ ಜೊತೆಗೆ ಊಟಕ್ಕೂ ಪ್ರಸಿದ್ಧಿ ಪಡೆದಿದೆ. ಯಾವ ನಗರಕ್ಕೆ ನೀವು ಕಾಲಿಟ್ಟರೂ ಉಡುಪಿ ಹೋಟೆಲ್, ಕೆಫೆ, ದರ್ಶಿನಿ ನಿಮಗೆ ಕಾಣಸಿಗುತ್ತದೆ. ಇದು ಉಡುಪಿಯ ಅಡುಗೆಯ ಮಹಿಮೆ
ಉಡುಪಿಯಲ್ಲಿ ಸಿಗುವ ಸಾರಿನ ರುಚಿ ಹತ್ತಿದವರು ಶ್ರೀಕೃಷ್ಣ ಮಠದ ಭೋಜನ ಶಾಲೆ ಹುಡುಕಿ, ಸಾರು ಮಾಡುವ ವಿಧಾನವನ್ನು ಕೇಳಿ ಬರೆದುಕೊಂಡರು ಹೋಗಿ ಪ್ರಯೋಗ ಮಾಡಿದರೂ, ಆ ರುಚಿ ಸಿಗುವುದಿಲ್ಲ.
ಉಡುಪಿಗೆ ಪ್ರವಾಸ ಬಂದವರು ಅಂಗಡಿಯಲ್ಲಿ ಸಿಗುವ ಉಡುಪಿ ಸಾರಿನ ಮಸಾಲೆ ತೆಗೆದುಕೊಂಡು ಹೋಗುವುದು ಮಾಮೂಲಿ. ಉಡುಪಿಯ ಘಮ ಘಮಿಸುವ ಸಾರಿನೊಂದಿಗೆ ಊಟಕ್ಕೆ ಕುಳಿತರೆ ತೇಗು ಬರುವ ತನಕ ತಿನ್ನಬೇಕು ಅನ್ನಿಸುತ್ತದೆ.
ಸಾರಿನ ಮಹಿಮೆಗೆ ಮಾರು ಹೋಗದವರಿಲ್ಲ
ಇದು ಉಡುಪಿ ಅಡಿಗೆಯ ಮಹಿಮೆ. ಉಡುಪಿಗೆ ಬಂದರೆ ಕೃಷ್ಣ ಮಠದಲ್ಲಿ ಭೋಜನ ಮಾಡದೆ ಮರಳುವುದೇ? ಎನ್ನುವುದು ಹಲವರ ಪ್ರಶ್ನೆ. ಈರುಳ್ಳಿ, ಬೆಳ್ಳುಳ್ಳಿ ರಹಿತವಾದ ಸಾರು ಆರೋಗ್ಯಕ್ಕೂ ಪೂರಕ ಎನ್ನುತ್ತಾರೆ ಪಾಕ ತಜ್ಞರು.
ಗುಳ್ಳದ ಸಾಂಬರು ಸವಿಯದಿದ್ದರೆ ಹೇಗೆ?
ಸೋದೆ ಶ್ರೀವಾದಿರಾಜರು ಐನೂರು ವರ್ಷಗಳ ಹಿಂದೆ ಮಟ್ಟು ಗ್ರಾಮದ ಜನತೆಗೆ ಪ್ರಸಾದವಾಗಿ ನೀಡಿದ ಗುಳ್ಳದ ಸಾಂಬಾರು, ಪಲ್ಯ, ಗುರ್ಜಿ ಎಲ್ಲವೂ ತಿನ್ನಲು ಬಲು ರುಚಿ. ಭೋಜನ ಶಾಲೆಯ ಪ್ರಾಣ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಬರೀ ನೆಲದಲ್ಲಿ ಶ್ರೀಕೃಷ್ಣ ಪ್ರಸಾದ ಸ್ವೀಕರಿಸಿದರೆ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆಯೂ ಇದೆ.
ಉಡುಪಿ ಹೋಟೆಲ್ ಪ್ರಸಿದ್ಧಿ ಏಕೆ?
ದೇಶ-ವಿದೇಶದಲ್ಲಿ ಉಡುಪಿ ಹೋಟೆಲ್ ನಡೆಸುವವರು ಮೊದಲು ಉಡುಪಿಯ ಭೋಜನ ಶಾಲೆಯಲ್ಲಿ ಪಾಕ ತಜ್ಞರಾಗಿದ್ದವರು ಅಥವಾ ಪೂಜೆಯಲ್ಲಿ ಸಹಾಯಕರಾಗಿದ್ದವರಾಗಿದ್ದವರು. ಈಗ ಉದ್ಯೋಗ ವೃತ್ತಿಯ ನೆಲೆಯಲ್ಲಿ ಉಡುಪಿಯ ಹೊರಗಿನವರು, ಬ್ರಾಹ್ಮಣರು ಹೋಟೆಲ್ ಮುನ್ನಡೆಸುತ್ತಿದ್ದಾರೆ.
ಉಡುಪಿ ಮಸಾಲೆ ದೋಸೆ ಬಗ್ಗೆ ಗೊತ್ತಾ?
ಉಡುಪಿ ಮೂಲದ ಕೆ.ಕೃಷ್ಣರಾವ್ ಮಸಾಲೆ ದೋಸೆಯ ಜನಕರಾಗಿದ್ದು ಕೇವಲ ಏಳುನೂರು ರೂಪಾಯಿಗಳಿಗೆ ಹೋಟೆಲ್ ಖರೀದಿಸಿದರು. ದಾಸ್ ಪ್ರಕಾಶ್ ಹೋಟೆಲ್ ನ ಮಾಲೀಕರಾದ ಕೆ. ಸೀತಾರಾಮ ರಾವ್ ಅವರು ಉಡುಪಿಯವರು.
ಉಡುಪಿಯ ಪ್ರಸಿದ್ಧ ಖಾದ್ಯಗಳು
ಕಡುಬು ಚಟ್ನಿ, ಕಾಯಿ ಹಾಲು, ನೀರು ದೋಸೆ, ಕಾಯಿ ಕಡುಬು, ಅರಸಿನ ಎಲೆ ಕಡುಬು, ಸುಳಿ ಕಡಬು, ಉಂಡೆ ಕಡಬು, ಗಸಿ ಪತ್ರೊಡೆ, ಹಲಸಿನ ಹಣ್ಣಿನ ಗಟ್ಟಿ, ಯಲ್ಲಪ್ಪ, ಗುಳಿಯಪ್ಪ, ಅಕ್ಕಿರೊಟ್ಟಿ, ಉದ್ದಿನ ನಿಟ್ಟು, ಮಣ್ಣಿ ಲಡ್ಡು, ಹೋಳಿಗೆ ಹೀಗೆ...
ಮಾಂಸಾಹಾರಿ ಖಾದ್ಯಗಳ ಪಟ್ಟಿ
ಮಾಂಸಾಹಾರಿ ಯಲ್ಲಿ ಕೋರಿ ರೊಟ್ಟಿ, ಚಿಕನ್ ವೈಟ್, ಚಿಕನ್ ಸುಕ್ಕ, ಕಾಣೆ ಮೀನಿನ ಗಸಿ ಬಂಗುಡೆ ಫ್ರೈ, ಚಿಕನ್ ಬಿರಿಯಾನಿ ಮುಂತಾದವು.