ಆರ್ಥಿಕ ಪತನ ನಿಜ, ಆದರೆ ನಾನೆಲ್ಲಿಗೂ ಓಡಿ ಹೋಗಿಲ್ಲ, ಹೋಗೋದು ಇಲ್ಲ: ಉದ್ಯಮಿ ಬಿ.ಆರ್ ಶೆಟ್ಟಿ
ಉಡುಪಿ, ಮಾರ್ಚ್ 1: ಬಹಳಷ್ಟು ದಿನಗಳಿಂದ ಮಾಧ್ಯಮದಿಂದ ದೂರವೇ ಉಳಿದಿದ್ದ ಕರಾವಳಿಯ ಅಂತರಾಷ್ಟ್ರೀಯ ಮಟ್ಟದ ಉದ್ಯಮಿ ಬಿ.ಆರ್ ಶೆಟ್ಟಿ, ಇಂದು ಉಡುಪಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಆಸ್ಪತ್ರೆಯಲ್ಲಿ ಹತ್ತು ಸಾವಿರನೇ ಮಗುವಿನ ಜನನ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ ಬಿ.ಆರ್ ಶೆಟ್ಟಿ ಇಂದು ಭಾಗವಹಿಸಿದರು.
ತಮ್ಮ ಆರ್ಥಿಕ ಪತನ, ಸದ್ಯದ ಸ್ಥಿತಿಗತಿ ಬಗ್ಗೆ ಬಿ.ಆರ್ ಶೆಟ್ಟಿ ಈ ವೇಳೆ ಮಾತನಾಡಿದರು. ನಾನು ಎಲ್ಲೂ ಹೋಗಿಲ್ಲ, ಹೋಗುವುದಿಲ್ಲ. ನನ್ನ ಸಾಮ್ರಾಜ್ಯ ಪತನ ಆಗಿದ್ದು ನಿಜ. ಆದರೆ ಅದಕ್ಕೆ ನಾನು ಕಾರಣ ಅಲ್ಲ, ನಾನೊಬ್ಬ ಬಲಿಪಶು ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಚರ್ಚೆ ಮಾಡಲು ನನಗೆ ನಾಚಿಕೆಯಾಗುತ್ತದೆ. ಈ ಹಿಂದೆ ನಾನು ಅವರ ಜೊತೆ ಮಾತನಾಡಿದ್ದೇನೆ. ಆದರೆ ಇವತ್ತಿನ ನನ್ನ ಪರಿಸ್ಥಿತಿಯಲ್ಲಿ ಅವರ ಮುಂದೆ ನಿಲ್ಲಲು ನನಗೆ ಮುಜುಗರ ಆಗುತ್ತದೆ.
ಮಾಧ್ಯಮದವರು ವಿಜಯ್ ಮಲ್ಯ ಮೋಸ ಮಾಡಿ ಓಡಿ ಹೋದ, ನೀರವ್ ಮಲ್ಯ ಬ್ಯಾಂಕುಗಳಿಗೆ ಮೋಸ ಮಾಡಿ ಓಡಿ ಹೋದ ಎಂದು ಬರೆಯುತ್ತಿದ್ದಾರೆ. ನಾಳೆ ಬಿ.ಆರ್ ಶೆಟ್ಟಿ ಓಡಿಹೋದರು ಎಂದು ಬರೆಯುತ್ತಾರೆ. ನಾನೆಲ್ಲಿಗೂ ಓಡಿ ಹೋಗಲ್ಲ ಎಂದು ಹೇಳಿದ್ದಾರೆ.
ಉಡುಪಿಯ ಹಾಜಿ ಅಬ್ದುಲ್ಲಾ ಸರಕಾರಿ ಸ್ಮಾರಕ ಆಸ್ಪತ್ರೆಯನ್ನು ಬಿ.ಆರ್ ಶೆಟ್ಟಿ ಗ್ರೂಪ್ ನಡೆಸುತ್ತಿದೆ. ಆಸ್ಪತ್ರೆಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಬಿ.ಆರ್ ಶೆಟ್ಟಿ, ಉಡುಪಿಯ ನನ್ನ ಕನಸಿನ ಕೂಸು ಬಿ.ಆರ್.ಎಸ್ ಲೈಫ್ ಆಸ್ಪತ್ರೆಯನ್ನು ನಾನು ನಿರ್ಮಾಣ ಮಾಡುತ್ತೇನೆ. ಅದೇ ರೀತಿ ಹಾಜಿ ಅಬ್ದುಲ್ಲಾ ಶಂಭು ಶೆಟ್ಟಿ ಸ್ಮಾರಕ ಸರಕಾರಿ ಆಸ್ಪತ್ರೆಯನ್ನು ಇನ್ನಷ್ಟು ಚೆನ್ನಾಗಿ ನಡೆಸಿಕೊಂಡು ಹೋಗುತ್ತೇನೆ. ಉಡುಪಿಯಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವ ಉದ್ದೇಶ ಇದೆ. ನನ್ನ ಆರ್ಥಿಕ ಪತನದ ಬಗ್ಗೆ ಹೆಚ್ಚು ಮಾತನಾಡಲು ಸಾಧ್ಯವಿಲ್ಲ, ಅದೀಗ ಕೋರ್ಟ್ ಅಂಗಳದಲ್ಲಿ ಎಂದು ಹೇಳಿದರು.












Click it and Unblock the Notifications