ಭಾಸ್ಕರ್ ಶೆಟ್ಟಿ ಕೊಲೆ : ರಾಜೇಶ್ವರಿ ಜಾಮೀನು ಅರ್ಜಿ ತಿರಸ್ಕೃತ
ಉಡುಪಿ, ಡಿಸೆಂಬರ್. 28 : ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಥಮ ಆರೋಪಿ ಪತ್ನಿ ರಾಜೇಶ್ವರಿ ಶೆಟ್ಟಿ ಜಾಮೀನು ಅರ್ಜಿಯನ್ನು ಬುಧವಾರ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ತಿರಸ್ಕೃತ ಮಾಡಿದೆ.
ಜಾಮೀನುಗಾಗಿ ರಾಶಜೇಶ್ವರಿ ಶೆಟ್ಟಿ ಅವರು ಉಡುಪಿ ಜಿಲ್ಲಾ ಸತ್ರ ನ್ಯಾಯಲಕ್ಕೆ ಅರ್ಜಿ ಸಲ್ಲಿಸಿದ್ದರು. ಆರೋಪಿ ಪರ ವಕೀಲ ಅರುಣ್ ಬಂಗೇರ ವಾದ ಮಂಡಿಸಿದರು.
ಸರಕಾರಿ ವಿಶೇಷ ಅಭಿಯೋಜಕ ಶಾಂತರಾಮ್ ಶೆಟ್ಟಿ ಪ್ರತಿವಾದ ಮಂಡಿಸಿದರು. ವಾದ -ಪ್ರತಿವಾದವನ್ನ ಆಲಿಸಿದ ನ್ಯಾಯಾಧೀಶ ಟಿ. ವೆಂಕಟೇಶ್ ನಾಯ್ಕ್ ತೀರ್ಪು ನೀಡಿದರು. [ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ]
ಘಟನೆ ಹಿನ್ನೆಲೆ ಏನು? ಗಲ್ಫ್ ರಾಷ್ಟ್ರಗಳಲ್ಲಿ ಹಾಗೂ ಉಡುಪಿಯಲ್ಲಿ ಬಹುಕೋಟಿ ಉದ್ಯಮದ ಪಾಲುದಾರರಾಗಿದ್ದ ಭಾಸ್ಕರ ಶೆಟ್ಟಿ ಉಡುಪಿಯ ಇಂದ್ರಾಳಿಯಲ್ಲಿರುವ ತನ್ನ ಮನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು.
ಸುಮಾರು ಎಂಟು ದಿನಗಳ ಬಳಿಕ ಅವರ ಪತ್ನಿ ಮತ್ತು ಮಗನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಭಾಸ್ಕರ ಶೆಟ್ಟಿಯನ್ನು ತಾವೇ ಕೊಲೆ ಮಾಡಿರುವುದಾಗಿ ಪತ್ನಿ ಮತ್ತು ಮಗ ತಪ್ಪೊಪ್ಪಿಕೊಂಡಿದ್ದರು.
ಮಾತ್ರವಲ್ಲದೇ ನಂದಳಿಕೆಯ ಸ್ವಯಂಘೋಷಿತ ಜ್ಯೋತಿಷಿ ನಿರಂಜನ ಭಟ್ಟ ಎಂಬಾತನ ಸಹಾಯದಿಂದ ಆತನ ಮನೆಯ ಹೋಮಕುಂಡದಲ್ಲಿ ಶೆಟ್ಟಿಯವರ ಶವವನ್ನು ದಹಿಸಿ ಪಳೆಯುಳಿಕೆಗಳನ್ನು ಸಮೀಪದ ನದಿಯಲ್ಲಿ ಎಸೆದಿರುವುದಾಗಿ ಹೇಳಿಕೆ ನೀಡಿದ್ದರು.