7 ಮಂದಿ ತುಂಬಿಕೊಂಡು ಉಡುಪಿಗೆ ಬಂದಿದ್ದ ಆಂಬ್ಯುಲೆನ್ಸ್ ಪೊಲೀಸರ ವಶಕ್ಕೆ
ಉಡುಪಿ, ಏಪ್ರಿಲ್ 14: ಕೊರೊನಾ ವೈರಸ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು ಎನ್ನುವ ಕಾರಣಕ್ಕೆ ಉಡುಪಿ ಜಿಲ್ಲೆಯ ಎಲ್ಲಾ ಗಡಿಗಳನ್ನು ಬಂದ್ ಮಾಡಲಾಗಿದೆ. ಯಾವ ಕಡೆಯಿಂದಲೂ ವಾಹನಗಳು ಜಿಲ್ಲೆಗೆ ಬರದಂತೆ ತಡೆಯಲಾಗಿದೆ.
ಆದರೆ ಗಡಿಯನ್ನು ಲಾಕ್ ಮಾಡಿದ್ದರೂ ಏನಾದರೂ ನೆಪವೊಡ್ಡಿ ಜಿಲ್ಲೆಯೊಳಗೆ ಪ್ರವೇಶಿಸುವವರು ನಿಂತಿಲ್ಲ. ಇಂದು ಕೂಡ ಮಹಾರಾಷ್ಟ್ರದ ನೋಂದಣಿ ಸಂಖ್ಯೆ ಇರುವ ಆಂಬ್ಯುಲೆನ್ಸ್ ನಲ್ಲಿ ಏಳು ಮಂದಿ ಜಿಲ್ಲೆಗೆ ಬಂದಿದ್ದಾರೆ. ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ಹೇಳಿಕೊಂಡು ಬಂದಿದ್ದಾರೆ. ಆ ವ್ಯಕ್ತಿಯೊಂದಿಗೆ ಆರು ಮಂದಿಯೂ ಬಂದಿದ್ದಾರೆ.
ಸಂಶಯಗೊಂಡ ಕೆಎಂಸಿ ಆಸ್ಪತ್ರೆಯವರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಇವರು ಮುಂಬೈಯಿಂದ ಮಣಿಪಾಲಕ್ಕೆ ಬರಲು ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ, ವೈದ್ಯಾಧಿಕಾರಿಯಿಂದ ಯಾವುದೇ ದೃಢೀಕರಣ ಪತ್ರ ಇವರ ಬಳಿ ಇರಲಿಲ್ಲ ಎಂಬುದು ತಿಳಿದುಬಂದಿದೆ. ಅನಾರೋಗ್ಯಪೀಡಿತ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಜೊತೆಗೆ ಬಂದ ಆರು ಮಂದಿಗೆ ಉದ್ಯಾವರ ಆಸ್ಪತ್ರೆಯಲ್ಲಿ 28 ದಿನಗಳ ಕ್ವಾರಂಟೈನ್ ವಿಧಿಸಲಾಗಿದೆ.

ಅಂಬ್ಯುಲೆನ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದ್ದಾರೆ.












Click it and Unblock the Notifications