ಭೂಲೋಕದ ಸ್ವರ್ಗದಂತೆ ಕಂಗೊಳಿಸಿದ ಅಂಬಲಪಾಡಿ ಮಹಾಕಾಳಿ ದೇವಸ್ಥಾನ
ಉಡುಪಿ, ಆಗಸ್ಟ್.03: ಭಕ್ತಿಯ ನಿವೇದನೆಗೆ ದೇವರಿಗೆ ಹೂವನ್ನರ್ಪಿಸಿವುದು ಸಂಪ್ರದಾಯ. ಒಂದು ಎಸಳಾದರೂ ಹೂವಿಟ್ಟು ಪೂಜೆ ಮಾಡಿದರೆ ದೇವರಿಗೆ ಸಂಪ್ರೀತಿಯಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಉಡುಪಿಯ ಅಂಬಲಪಾಡಿ ದೇವಸ್ಥಾನದಲ್ಲಿ ಒಂದು ವಿಶಿಷ್ಟ ಹೂವಿನ ಸೇವೆ ನಡೆಯಿತು.
ದೂರದ ಚಿಕ್ಕಬೆಳ್ಳಾಪುರದ ಭಕ್ತವೃಂದದವರು ಉಡುಪಿಯ ಅಂಬಲಪಾಡಿಗೆ ಬಂದು ಲಕ್ಷಾಂತರ ರುಪಾಯಿಯ ಹೂವಿನ ಅಲಂಕಾರ ಮಾಡಿ ಖುಷಿಪಟ್ಟರು. ದೇವಸ್ಥಾನವೇ ಉದ್ಯಾನವನದಂತಾಗಿರುವ ಈ ಮನೋಹರ ದೃಶ್ಯ ನೋಡಿದರೆ ಹೂವಿನ ರಂಗವಲ್ಲಿ ಇಟ್ಟಂತೆ ಕಾಣುತ್ತಿತ್ತು.
'ಮಲ್ಲಿಗೆ ಸುಗ್ಗಿ'ಯ ಸಂಭ್ರಮದಲಿ ಬಳ್ಳಾರಿಯ ಹೂವಿನಹಡಗಲಿ
ಉಡುಪಿಯಲ್ಲಿ ಪ್ರಸಿದ್ಧವಾಗಿರುವ ಅಂಬಲಪಾಡಿಯ ಜನಾರ್ಧನ ಮಹಾಕಾಳಿ ದೇವಸ್ಥಾನ ಇಂದು ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತಿತ್ತು. ದೇವರ ವಿಗ್ರಹ ಮಾತ್ರವಲ್ಲ, ಗುಡಿ ಗೋಪುರ, ಗೋಡೆ ಒಂದಿಂಚೂ ಬಿಡದೆ ಹೂವಿನ ಅಲಂಕಾರ ಮಾಡಲಾಗಿತ್ತು.
ಇದು ಭಕ್ತರೊಬ್ಬರ ಸೇವೆ. ಹೌದು, ಚಿಕ್ಕಬಳ್ಳಾಪುರದ ಭಕ್ತವೃಂದದವರು, ಮಹಾಕಾಳಿಯ ಮಹಾ ಭಕ್ತರು. ಅದಕ್ಕಂತಲೇ ವರ್ಷಕ್ಕೊಮ್ಮೆ ಉಡುಪಿಗೆ ಬಂದು ತಾವೇ ಗೆಳೆಯರು ಜೊತೆಗೂಡಿ ದೇವಾಲಯವನ್ನು ಈ ರೀತಿ ಅಲಂಕರಿಸುತ್ತಾರೆ. ಇಂದು ಶುಕ್ರವಾರ, ಮಹಾಕಾಳಿ ದೇವಸ್ಥಾನಕ್ಕೆ ಇಂದು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.
ಆದರೆ ಈ ಶುಭ ಶುಕ್ರವಾರ ದೇವಸ್ಥಾನಕ್ಕೆ ಬಂದವರಿಗೆ ಅಚ್ಚರಿ ಕಾದಿತ್ತು. ದೇವಾಲಯಕ್ಕೆ ಕಾಲಿಡುತ್ತಿದ್ದಂತೆ ಹೂವಿನ ಘಮಘಮ ಒಂದೆಡೆಯಾದರೆ ನಯನ ಮನೋಹರ ದೃಶ್ಯ ಭಕ್ತರನ್ನು ಮೂಕವಿಸ್ಮಿತರನ್ನಾಗಿಸಿತು. ಸುಮಾರು ಐದು ಲಕ್ಷ ರುಪಾಯಿ ವೆಚ್ಚದಲ್ಲಿ ಈ ಅಲಂಕಾರ ಸೇವೆ ನಡೆಯಿತು.
ಮಹಾಕಾಳಿಯ ಸನ್ನಿಧಾನಕ್ಕೆ ಬಂದ ನಂತರ ನಮ್ಮ ಜೀವನದ ಗತಿಯೇ ಬದಲಾಯ್ತು, ಹಾಗಂತ ವರ್ಷಂಪ್ರತಿ ಬಂದು ದೇವರ ಸೇವೆ ಮಾಡ್ತೇವೆ ಅನ್ನೋದು ಚಿಕ್ಕ ಬಳ್ಳಾಪುರದ ಭಕ್ತರ ಅಭಿಮತ. ಸ್ಥಳಿಯ ಭಕ್ತರಿಗೂ ಈ ಅಲಂಕಾರ ಮುದ ನೀಡಿತು.
ಉಳ್ಳವರು ಅದ್ದೂರಿಯ ಅಲಂಕಾರ ಮಾಡಿದರೆ, ಸಾಮಾನ್ಯ ಭಕ್ತನೊಬ್ಬ ಒಂದು ಎಸಳು ಹೂವಿಟ್ಟು ಪೂಜಿಸಿದರೂ ಸರಿ. ಭಕ್ತಿಯ ನಿವೇದನೆಗೆ ದೇವರು ಒಲಿದು ಬರುತ್ತಾರೆ ಅನ್ನುವುದು ಭಕ್ತ ಜನರ ನಂಬಿಕೆ.