ಆತಂಕ ಹುಟ್ಟಿಸಿದೆ ಉಡುಪಿಯಲ್ಲಿ ಮದ್ಯಕ್ಕಾಗಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ!
ಉಡುಪಿ, ಮಾರ್ಚ್ 30: ಕೊರೊನಾ ಕಾರಣದಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಒಂದೆಡೆ ಜನ ನೀರು, ಆಹಾರ ಸಿಗದೇ ಪರದಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಮತ್ತೊಂದೆಡೆ ಕುಡಿಯಲು ಮದ್ಯ ಸಿಗತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳೂ ನಡೆಯುತ್ತಿವೆ.
ಲಾಕ್ ಡೌನ್ ನಿಂದಾಗಿ ದೇಶಾದ್ಯಂತ ಮದ್ಯದಂಗಡಿಗಳನ್ನೂ ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗಾಗಿ ಕುಡಿಯಲು ಮದ್ಯ ಸಿಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಈ ಸಂಗತಿ ಆತಂಕ ತಂದಿದೆ. ಉಡುಪಿ ಜಿಲ್ಲೆಯಲ್ಲಿ ಈ ಕಾರಣಕ್ಕೆ ಇದುವರೆಗೆ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.

ಉಡುಪಿಯಲ್ಲಿ ಇದುವರೆಗೆ ಆರು ಮಂದಿ ಆತ್ಮಹತ್ಯೆ
ಲಾಕ್ ಡೌನ್ ಆದಾಗಿನಿಂದ ಉಡುಪಿಯಲ್ಲಿ, ಇದುವರೆಗೂ ಮದ್ಯ ಸಿಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿರುವವರ ಸಂಖ್ಯೆ ಆರಕ್ಕೆ ಏರಿದೆ. ಜಿಲ್ಲೆಯಲ್ಲಿ ಒಟ್ಟು ಆರು ಮಂದಿ ಮದ್ಯ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇದು ಜಿಲ್ಲಾಡಳಿತದಲ್ಲಿ ಆತಂಕವನ್ನೂ ಹೆಚ್ಚಿಸಿದೆ. ಕೊರೊನಾ ಭೀತಿಯೊಂದಿಗೆ ಈ ರೀತಿ ಸಂಗತಿಗಳೂ ನಡೆಯುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

ಕೌನ್ಸಿಲಿಂಗ್ ಗೆ ಸಿದ್ಧವಾದ ಜಿಲ್ಲಾಡಳಿತ
ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯನ್ನು ಗಮನಿಸಿದ ಜಿಲ್ಲಾಡಳಿತ ಇದೀಗ ಕೌನ್ಸಿಲಿಂಗ್ ಮಾಡಲು ಸಿದ್ಧವಿರುವುದಾಗಿ ತಿಳಿಸಿದೆ. "ಮನೋವೈದ್ಯ ಡಾ. ಪಿವಿ ಭಂಡಾರಿ ಜೊತೆ ಈ ಕುರಿತು ಮಾತನಾಡಿದ್ದೇವೆ. ಜಿಲ್ಲಾಡಳಿತದ ಬಳಿ ಕೌನ್ಸಿಲಿಂಗ್ ವಿಭಾಗ ಇದೆ. ಮಾಹಿತಿ ಸಿಕ್ಕರೆ ಸಾರ್ವಜನಿಕರು ನಮ್ಮ ಗಮನಕ್ಕೆ ತನ್ನಿ" ಎಂದು ಮನವಿ ಮಾಡಲಾಗಿದೆ.

"ಕಾಲ್ ಸೆಂಟರ್ ಗೆ ಕರೆ ಮಾಡಿ"
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, "ವ್ಯಸನಿಗಳನ್ನು ಸರಿಪಡಿಸಲು ನಾವು ಕ್ರಮ ಕೈಗೊಳ್ಳುತ್ತೇವೆ. ಕುಟುಂಬಸ್ಥರು ಯಾರೂ ಜಿಲ್ಲಾಡಳಿತಕ್ಕೆ ಈವರೆಗೆ ಮಾಹಿತಿ ಕೊಟ್ಟಿಲ್ಲ. ಜನ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿ ಸರಕಾರ ಮದ್ಯಪ್ರವೇಶ ಮಾಡಬೇಕಾಗುತ್ತದೆ. ಕುಟುಂಬಸ್ಥರು ಕಾಲ್ ಸೆಂಟರ್ ಗೆ ಕರೆ ಮಾಡಿ" ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ, ಕೋಲಾರದಲ್ಲೂ ಆತ್ಮಹತ್ಯೆ ಪ್ರಕರಣ
ಲಾಕ್ ಡೌನ್ ನಿಂದಾಗಿ ಮದ್ಯ ಸಿಗುತ್ತಿಲ್ಲ, ಕುಡಿಯಲು ಆಗುತ್ತಿಲ್ಲ ಎಂದು ಕೇರಳದಲ್ಲಿ ಮೊದಲು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ನಡೆದಿತ್ತು. ನಂತರ ಹುಬ್ಬಳ್ಳಿಯಲ್ಲೂ ನಿನ್ನೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಕೋಲಾರದಲ್ಲೂ ಒಬ್ಬ ವ್ಯಕ್ತಿ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಮತ್ತೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.












Click it and Unblock the Notifications