ತುಮಕೂರು : ಪತಿಯಿಂದಲೇ ಪತ್ನಿ, ಮಕ್ಕಳ ಮೇಲೆ ಆಸಿಡ್ ದಾಳಿ
ತುಮಕೂರು, ಫೆ.7 : ಕೌಟುಂಬಿಕ ಕಲಹದಿಂದ ಬೇಸತ್ತ ಪತಿಯೊಬ್ಬ ಪತ್ನಿ ಮತ್ತು ಇಬ್ಬರು ಮಕ್ಕಳ ಮೇಲೆ ಆಸಿಡ್ ಹಾಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಘಟನೆ ನಂತರ ಆತ ಪರಾರಿಯಾಗಿದ್ದು, ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶಿರಾ ತಾಲೂಕಿನ ಮದನೂರು ಗ್ರಾಮದ ರಂಗನಾಥ ಎಂಬಾತ ಪತ್ನಿ ಜಯಲಕ್ಷ್ಮೀ ಮತ್ತು ಲತಾ (11) ಮತ್ತು ಮೇಘಾ (6) ಎಂಬ ಮಕ್ಕಳ ಮೇಲೆ ಶುಕ್ರವಾರ ರಾತ್ರಿ ಆಸಿಡ್ ದಾಳಿ ಮಾಡಿದ್ದಾನೆ. ಜಯಲಕ್ಷ್ಮೀ ತವರು ಮನೆಗೆ ತೆರಳಿದ್ದರು, ಅಲ್ಲಿಗೆ ಹೋದ ರಂಗನಾಥ ಪತ್ನಿ ಹಾಗೂ ಮಕ್ಕಳ ಮೇಲೆ ಆಸಿಡ್ ಹಾಕಿದ್ದಾನೆ.

ಆಸಿಡ್ ದಾಳಿಗೆ ಒಳಗಾದ ಮೂವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು ಜಯಲಕ್ಷ್ಮೀ ಮತ್ತು ಲತಾ ಅವರ ಸ್ಥಿತಿ ಗಂಭೀರವಾಗಿದೆ. ಘಟನೆ ಬಳಿಕ ರಂಗನಾಥ ಪರಾರಿಯಾಗಿದ್ದು, ಗುಬ್ಬಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. [ಚಿಕ್ಕಬಳ್ಳಾಪುರದಲ್ಲಿ ಮಹಿಳೆ ಮೇಲೆ ಆಸಿಡ್ ದಾಳಿ]
ಸೋಮವಾರ ಮದುವೆಗೆ ಹೋಗಿದ್ದರು : ಶಿರಾ ತಾಲೂಕಿನ ಮದನೂರು ಗ್ರಾಮದ ರಂಗನಾಥನಿಗೆ ಗುಬ್ಬಿ ಬಳಿಯ ಯಲ್ಲಾಪುರದ ನಿವಾಸಿ ಜಯಲಕ್ಷ್ಮೀ ಅವರನ್ನು ಮದುವೆ ಮಾಡಿಕೊಡಲಾಗಿತ್ತು. ರಂಗನಾಥ ಚಿಕ್ಕಪುಟ್ಟ ವಿಷಯಕ್ಕೂ ಪತ್ನಿಯೊಡನೆ ಜಗಳವಾಡುತ್ತಿದ್ದ. ಸೋಮವಾರ ಸಂಬಂಧಿಕರ ಮದುವೆಗಾಗಿ ಜಯಲಕ್ಷ್ಮೀ ತೆರಳಿದ್ದರು. [ಆಸಿಡ್ ದಾಳಿ ಜಾಮೀನು ರಹಿತ ಅಪರಾಧ]
ಶುಕ್ರವಾರ ಅತ್ತೆಯ ಮನೆಗೆ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದ ರಂಗನಾಥ ಹೆಂಡತಿ ಜೊತೆ ಜಗಳವಾಡಿದ್ದ. ಜಯಲಕ್ಷ್ಮೀ ಮನೆಗೆ ಬರಲು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ರಂಗನಾಥ ಪತ್ನಿ ಮತ್ತು ಮಕ್ಕಳ ಮೇಲೆ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾನೆ.












Click it and Unblock the Notifications