ಮದುವೆಗೆ ಒಪ್ಪದ ತಂದೆ-ತಾಯಿಯನ್ನು ಕೊಲ್ಲಿಸಿದ ಮಗ
ತುಮಕೂರು, ಮಾರ್ಚ್ 19 : ತುಮಕೂರು ನಗರದಲ್ಲಿ ನಡೆದ ದಂಪತಿಗಳ ಹತ್ಯೆಗೆ ಕಾರಣ ಬಹಿರಂಗವಾಗಿದೆ. ಹೆತ್ತವರನ್ನು ಕೊಲ್ಲಲು ಸುಪಾರಿ ನೀಡಿದ್ದ ಮಗ, ಸುಪಾರಿ ಪಡೆದು ಕೊಲೆ ಮಾಡಿದ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಬಂಧಿತ ಆರೋಪಿಗಳನ್ನು ಹತ್ಯೆಯಾದ ಗೋಪಾಲ್ ಮತ್ತು ರೂಪ ಅವರ ಪುತ್ರ ಧೀರಜ್ ಮತ್ತು ಬೆಂಗಳೂರಿನ ಹರೀಶ್ (22), ಚಂದ್ರಮೌಳಿ (20, ರವಿ (26), ಆನಂದ (23) ಮತ್ತು ರಾಮಚಂದ್ರ (36) ಎಂದು ಗುರುತಿಸಲಾಗಿದೆ. [ತುಮಕೂರು: ರೈಸ್ ಮಿಲ್ ಮಾಲೀಕ ಹಾಗೂ ಪತ್ನಿ ಕೊಲೆ]

ಘಟನೆಯ ವಿವರ : 2016ರ ಮಾರ್ಚ್ 13ರ ಮಧ್ಯರಾತ್ರಿ ನಮ್ಮ ತಂದೆ ತಾಯಿಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಮೃತರಾದ ಗೋಪಾಲಶೆಟ್ಟಿ ಮತ್ತು ರೂಪ ದಂಪತಿಗಳ ಪುತ್ರ ಧೀರಜ್ ಹೊಸಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ಪೊಲೀಸರು ಸ್ಥಳ ಪರಿಶೀಲನೆ ಮಾಡಿದಾಗ ಮನೆಯಲ್ಲಿ ಯಾವುದೇ ಒಡವೆ, ವಸ್ತ್ರ ಮತ್ತು ಹಣ ಮತ್ತಿತರ ಬೆಲೆ ಬಾಳುವ ವಸ್ತುಗಳ ಕಳುವಾಗಿರಲಿಲ್ಲ. ಆಗ ಪೊಲೀಸರು ಇದು ಹತ್ತಿರದವರಿಂದಲೇ ನಡೆದಿರುವ ಹತ್ಯೆ ಎಂಬ ತೀರ್ಮಾನಕ್ಕೆ ಬಂದಿದ್ದರು.
ಧೀರಜ್ ವರ್ತನೆ ಬಗ್ಗೆ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದೆ, ಮದುವೆಗೆ ತಂದೆ, ತಾಯಿ ವಿರೋಧ ವ್ಯಕ್ತಪಡಿಸಿದ ಕಾರಣ ಸುಪಾರಿ ನೀಡಿ ಕೊಲೆ ಮಾಡಿಸಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

ಅನ್ನದಲ್ಲಿ ವಿಷ ಹಾಕಲು ಮುಂದಾಗಿದ್ದ : ಬೆಂಗಳೂರಿನಲ್ಲಿ ಅಕ್ಕಿ ವ್ಯಾಪಾರ ಮಾಡುತ್ತಿದ್ದ ರಾಮಚಂದ್ರ ರೆಡ್ಡಿ ಎಂಬುವವರನ್ನು ಭೇಟಿ ಮಾಡಿದ್ದ ಧೀರಜ್ ಅವರ ಬಳಿ ತನ್ನ ಸಮಸ್ಯೆ ಹೇಳಿಕೊಂಡಿದ್ದ. ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆನಂದ ಮತ್ತು ರವಿ ಎಂಬುವವರೊಂದಿಗೆ ಸೇರಿ ಕೊಲೆಯ ಸಂಚು ರೂಪಿಸಿ ಕೊಲೆ ಮಾಡಲು 9 ಲಕ್ಷ ರೂಗಳ ಸುಫಾರಿ ನೀಡಿದ್ದ. [ಸುದ್ದಿ ದನಿ : ತಂದೆ-ತಾಯಿ ಕೊಲೆಗೆ ಸುಪಾರಿ ಕೊಟ್ಟ ಮಗ]
ಅನ್ನದಲ್ಲಿ ವಿಷ ಬೆರೆಸಿ ಕೊಲೆ ಮಾಡುವಂತೆ ಸುಪಾರಿ ಕಿಲ್ಲರ್ಸ್ ಸಲಹೆ ಕೊಟ್ಟಿದ್ದರು. ಆದರೆ, ಅದರ ವಾಸನೆ ತಂದೆ-ತಾಯಿಗೆ ಗೊತ್ತಾಗಬಹುದು ಎಂದು ವಿಷ ಬೆರೆಸಿದ ಅನ್ನ ನೀಡಲು ಆತ ಹಿಂದೇಟು ಹಾಕಿದ್ದ. ಧೀರಜ್ ದೂರವಾಣಿ ಕರೆ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆ ನಡೆದದ್ದು ಹೇಗೆ? : ಮಾಚ್ 8 ರಂದು ಸುಪಾರಿ ಕಿಲ್ಲರ್ಸ್ಗಳನ್ನು ತುಮಕೂರಿಗೆ ಕರೆಸಿಕೊಂಡಿದ್ದ ಧೀರಜ್ ಐಶ್ವರ್ಯ ಲಾಡ್ಜ್ನಲ್ಲಿ ವಾಸ್ತವ್ಯ ಮಾಡಿಕೊಟ್ಟಿದ್ದ. ತಮ್ಮ ಮನೆ ಇರುವ ಜಾಗ ಮುಂತಾದ ಸ್ಥಳಗಳ ಪರಿಚಯ ಮಾಡಿಸಿದ್ದ.
ಮಾರ್ಚ್ 13ರಂದು ಹರಿತವಾದ ಆಯುಧಗಳೊಂದಿಗೆ ಧೀರಜ್ ಮನಗೆ ನುಗ್ಗಿದ ಆರೋಪಿಗಳು, ಧೀರಜ್ ಎದುರೇ ಗಾಢ ನಿದ್ರೆಯಲ್ಲಿದ್ದ ಗೋಪಾಲಶೆಟ್ಟಿ ಮೇಲೆರಗಿ ಮನಬಂದಂತೆ ಡ್ರಾಗನ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಈ ವೇಳೆ ಎಚ್ಚರಗೊಂಡ ರೂಪ ಅವರ ಮೇಲೆಯೂ ಹಲ್ಲೆ ನಡೆಸಿದ್ದರು.
ಕೊಲೆ ಮಾಡಿ ಸುಪಾರಿ ಪಡೆದ ಹಣದಲ್ಲಿ 5 ಲಕ್ಷ ರೂ.ಗಳನ್ನು ಪಡೆದು, ಉಳಿದ ಹಣವನ್ನು ನಂತರ ಪಡೆಯುವುದಾಗಿ ತಿಳಿಸಿ, ಬಂದ ಕಾರಿನಲ್ಲಿಯೇ ವಾಪಸ್ ಹೋಗಿದ್ದರು. ಕೊಲೆಗಾರರನ್ನು ಪತ್ತೆ ಹೆಚ್ಚಿದ ಪೊಲೀಸ್ ತಂಡಕ್ಕೆ ವಿಶೇಷ ನಗದು ಪುರಸ್ಕಾರ ಘೋಷಿಸಲಾಗಿದೆ.












Click it and Unblock the Notifications