ಕಾಂಗ್ರೆಸ್ ಭ್ರಷ್ಟಾಚಾರ ಎಸಗಿ ರಾಜ್ಯವನ್ನು ಎಟಿಎಂ ಆಗಿಸಿದೆ: ಮೀಸಲಾತಿ ರದ್ದುಗೊಳಿಸಿದರೆ ಕ್ರಾಂತಿ ಆಗುತ್ತದೆ: ಬೊಮ್ಮಾಯಿ ಎಚ್ಚರಿಕೆ
ತುಮಕೂರು, ಏಪ್ರಿಲ್ 23: ಕಾಂಗ್ರೆಸ್ ನವರು ಭ್ರಷ್ಟಾಚಾರ ಮಾಡಿ ಕರ್ನಾಟಕವನ್ನು ಎಟಿಎಂ ಆಗಿ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುವುದಾಗಿ ಹೇಳಿದ್ದು, ಹಾಗೇನಾದರೂ ಆದರೆ ರಾಜ್ಯದಲ್ಲಿ ಕ್ರಾಂತಿಯೇ ಆಗುತ್ತದೆ ಎಂದು ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದ ವಿರುದ್ಧ ಹರಿಹಾಯ್ದರು.
ಭಾನುವಾರ ಜಿಲ್ಲೆಯ ಗುಬ್ಬಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿಲೀಪ್ ಪರವಾಗಿ ಅವರು ಇಂದು ರೋಡ್ ಶೋ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದ್ದು, ರಾಜ್ಯವು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಆಗಲಿದೆ.
ಸಾಮಾಜಿಕನ್ಯಾಯ ಎಂದು ಭಾಷಣ ಮಾಡಿ, ಎಸ್ಸಿ ಎಸ್ಟಿ ಜನಾಂಗವನ್ನು ಇದ್ದಲ್ಲಿಯೇ ಇಟ್ಟು ತಾವು ಮಾತ್ರ ಅಭಿವೃದ್ಧಿ ಆದರು ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುವುದಾಗಿ ಹೇಳಿದ್ದಾರೆ. ಅವರು ಹಾಗೆ ಮಾಡಿದರೆ ಕ್ರಾಂತಿಯಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಗುಬ್ಬಿಯಲ್ಲಿ ದಿಲೀಪ್ ಅವರ ಜೊತೆಗೆ ದೊಡ್ಡ ಶಕ್ತಿ ಇದೆ. ಅವರು 25 ಸಾವಿರ ಮತಗಳಿಂದ ಜಯ ಗಳಿಸುತ್ತಾರೆ. ಕಾಂಗ್ರೆಸ್ ಮತಗಳನ್ನು ಕಮಲಕ್ಕೆ ಹಾಕಿಸಿ ರಾಜ್ಯದಲ್ಲಿ ಜನಪರ ಸರ್ಕಾರ ಅಧಿಕಾರಕ್ಕೆ ತರಲು ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಕರ್ನಾಟಕದಲ್ಲಿ ತಿಗಳರ ಅಭಿವೃದ್ಧಿ ನಿಗಮ, ನೇಕಾರರು, ಉಪ್ಪಾರರು, ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಬಿಜೆಪಿ ಸರ್ಕಾರ ಮಾಡಿದೆ. ಕಾಂಗ್ರೆಸ್ ನವರು ಈ ಎಲ್ಲ ನಿಗಮಗಳ ಸ್ಥಾಪನೆ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಗ್ರಾಮೀಣ ಪ್ರದೇಶದಲ್ಲಿ ಕಾಡುಗೊಲ್ಲರ ಕಷ್ಟ ಕಣ್ಣೀರು ತರಿಸುವಂತಿದೆ ಎಂದರು.
ಕುಂಚಟಿಗ ಒಕ್ಕಲಿಗ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಮುಂದಿನ ದಿನಗಳಲ್ಲಿ ಸೇರಿಸಲಾಗುವುದು. ಕಾಯಕ ಮಾಡುವ 24 ಸಮುದಾಯಗಳಿಗೆ 50 ಸಾವಿರ ಸಾಲ ನೀಡಲಾಗುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆ ಗುಬ್ಬಿ ತಾಲೂಕಿನ 25 ಸಾವಿರ ರೈತರಿಗೆ ತಲುಪಿದೆ. 7000 ಮಕ್ಕಳಿಗೆ ರೈತ ವಿದ್ಯಾನಿಧಿ ಸೌಲಭ್ಯ ದೊರಕಿದೆ.

ಮೀಸಲಾತಿಯಲ್ಲಿ ಸಾಧನೆ: ಜ್ಯೋತಿ ಗಣೇಶರನ್ನು ಗೆಲ್ಲಿಸಿ ಎಂದ ಸಿಎಂ
ಎಸ್ಸಿ ಎಸ್ಟಿ ಮೀಸಲಾತಿಯನ್ನು ದೇಶದ ಯಾವುದೇ ಸರ್ಕಾರ ಮಾಡಿಲ್ಲ. ನಮ್ಮ ಬಿಜೆಪಿ ಸರ್ಕಾರ ಮಾಡಿದೆ. ಒಳ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ರೈತಾಪಿ ವರ್ಗದ ಒಕ್ಕಲಿಗ, ಲಿಂಗಾಯತ ಸಮುದಾಯದವರ ಮಿಸಲಾತಿ ಹೆಚ್ಚಳ ಮಾಡಿದ್ದೇವೆ ಎಂದರು.
ಇದೇ ವೇಳೆ ಜ್ಯೋತಿ ಗಣೇಶ್ ಅವರ ಪರ ರೋಡ್ ನಡೆಸಿದ ಸಿಎಂ ಬೊಮ್ಮಾಯಿಯವರು, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ ಮಾಡದೇ ಭ್ರಷ್ಟಾಚಾರ ಮಾಡಿದ್ದರು. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಅವರನ್ನು ಓಡಿಸಬೇಕು. ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಅವರಿಗೆ ಮತ ಹಾಕಿದರೆ ಕಾಂಗ್ರೆಸ್ ಗೆ ಮತ ಹಾಕಿದಂತೆ, ಅವರಿಗೆ ಮತ ಹಾಕಬೇಡಿ. ಬಿಜೆಪಿಯನ್ನು ಗೆಲ್ಲಿಸಿ ತುಮಕೂರಿನ ಜ್ಯೋತಿ ಬೆಳಗಲು ಜ್ಯೊತಿ ಗಣೇಶರನ್ನು ಗೆಲ್ಲಿಸಿ ಎಂದು ಕೋರಿದರು.












Click it and Unblock the Notifications