ಕೆಂಪೇಗೌಡರನ್ನು ಮಹೀಂದ್ರ ಕುಟುಂಬಕ್ಕೆ ಸ್ವಾಗತಿಸಿದ ಆನಂದ್ ಮಹೀಂದ್ರ
ತುಮಕೂರು, ಜನವರಿ 28; ತುಮಕೂರಿನ ಯುವ ರೈತ ಕೆಂಪೇಗೌಡನನ್ನು ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಮಹೀಂದ್ರ ಕುಟುಂಬಕ್ಕೆ ಸ್ವಾಗತಿಸಿದ್ದಾರೆ. ಕೆಂಪೇಗೌಡರ ಬೇಡಿಕೆಯಂತೆ ಬೋಲೆರೋ ವಾಹನ ಅವರ ಕೈ ಸೇರಿದೆ.
ಸಾಮಾಜಿಕ ತಾಲತಾಣದಲ್ಲಿ ಸಕ್ರಿಯರಾಗಿರುವ ಆನಂದ್ ಮಹೀಂದ್ರ ಶುಕ್ರವಾರ ರಾತ್ರಿ ಕೆಂಪೇಗೌಡರನ್ನು ಕುಟುಂಬಕ್ಕೆ ಬರಮಾಡಿಕೊಂಡು ಟ್ವೀಟ್ ಮಾಡಿದ್ದಾರೆ. ತುಮಕೂರಿನ ಕಾರು ಶೋ ರೂಂ ಸೇಲ್ಸ್ ಏಜೆಂಟ್ಗಳು ರೈತ ಕೆಂಪೇಗೌಡನಿಗೆ ಮಾಡಿದ ಅವಮಾನ ಭಾರೀ ಸುದ್ದಿಯಾಗಿತ್ತು.
And let me add my welcome to Mr. Kempegowda…🙏🏽 https://t.co/BuKnTNov42
— anand mahindra (@anandmahindra) January 28, 2022
ರಾಮನಪಾಳ್ಯ ಶೋ ರೂಂನಲ್ಲಿ ನಡೆದ ಘಟನೆ ಬಗ್ಗೆ ಜನವರಿ 25ರಂದು ಮಹೀಂದ್ರ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದರು. ಘಟನೆ ಕುರಿತು ಈಗಾಗಲೇ ಕಂಪನಿ ತನಿಖೆ ನಡೆಸುತ್ತಿದೆ.

ಶೋ ರೂಂಗೆ ಬೋಲೆರೋ ವಾಹನ ಖರೀದಿಗೆ ಹೋಗಿದ್ದ ರೈತ ಕೆಂಪೇಗೌಡನಿಗೆ ಅವಮಾನ ಮಾಡಲಾಗಿತ್ತು. ಬಳಿಕ ಕೆಂಪೇಗೌಡ ಒಂದೇ ಗಂಟೆಯಲ್ಲಿ 10 ಲಕ್ಷ ರೂ.ಗಳನ್ನು ತಂದು ಸಿಬ್ಬಂದಿ ಮುಂದಿಟ್ಟು ವಾಹನ ನೀಡುವಂತೆ ಪಟ್ಟು ಹಿಡಿದಿದ್ದ. ಶುಕ್ರವಾರ ಅವರಿಗೆ ವಾಹನವನ್ನು ನೀಡಲಾಗಿದೆ.
ಘಟನೆಯ ವಿವರ; ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ರೈತ ಕೆಂಪೇಗೌಡ ಬೋಲೆರೋ ಗೂಡ್ಸ್ ವಾಹನ ಬುಕ್ ಮಾಡಲು ಹೋಗಿದ್ದರು. ಆಗ ರೈತನ ಬಟ್ಟೆ ನೋಡಿ ಸೇಲ್ಸ್ ಏಜೆಂಟ್ಗಳು ಅವಮಾನ ಮಾಡಿದ್ದರು. 10 ರೂ. ಕೊಡುವ ಯೋಗ್ಯತೆ ಇಲ್ಲ ವಾಹನ ಬುಕ್ ಮಾಡಲು ಬಂದಿದ್ದಾರೆ ಎಂದು ಸುಮಾರು ಅರ್ಧ ಗಂಟೆಗಳ ಕಾಲ ಕಿಚಾಯಿಸಿದ್ದರು.
ಜನವರಿ 21ರಂದು ಈ ಘಟನೆ ನಡೆದಿತ್ತು. ಸೇಲ್ಸ್ ಏಜೆಂಟ್ಗಳ ಅವಮಾನದಿಂದ ಹಠಕ್ಕೆ ಬಿದ್ದ ಕೆಂಪೇಗೌಡ ಒಂದು ಗಂಟೆಯಲ್ಲಿ 10 ಲಕ್ಷ ರೂ. ತಂದು ವಾಹನ ಈಗಲೇ ಕೊಡಿ ಎಂದು ಪಟ್ಟು ಹಿಡಿದು ಕುಳಿತರು. ತಮ್ಮ ತಪ್ಪಿನ ಅರಿವಾಗಿ ಶೋ ರೂಂ ಸಿಬ್ಬಂದಿ ವಾಹನ ಎರಡು ದಿನದಲ್ಲಿ ನೀಡುವುದಾಗಿ ವಾಪಸ್ ಕಳಿಸಿದ್ದರು, ಅವರ ಕ್ಷಮೆ ಸಹ ಕೇಳಿದ್ದರು.
ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶೋ ರೂಂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆ ಬಗ್ಗೆ ಆನಂದ್ ಮಹೀಂದ್ರ ಮತ್ತು ಸಿಇಒ ವಿಜಯ್ ನಕ್ರಾ ಟ್ವೀಟ್ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದರು.
ಸಿಇಓ ವಿಜಯ್ ನಕ್ರಾ ತಮ್ಮ ಟ್ವೀಟ್ನಲ್ಲಿ, "ಗ್ರಾಹಕರಿಗೆ ಅತ್ಯುತ್ತಮ ಅನುಭವ ಒದಗಿಸಬೇಕು ಎನ್ನುವ ನಮ್ಮ ಪ್ರಯತ್ನದಲ್ಲಿ ಡೀಲರ್ಗಳ ಪಾತ್ರ ಅತಿ ಮುಖ್ಯ. ನಮ್ಮ ಗ್ರಾಹಕರನ್ನು ಗೌರವ ಮತ್ತು ಘನತೆಯಿಂದ ಕಾಣಬೇಕು ಎನ್ನುವುದು ನಮ್ಮ ನಿಯಮ. ಘಟನೆಯ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎಂದು ಭರವಸೆ ನೀಡಿದ್ದರು.
ಇಂದು ಮಹೀಂದ್ರ ಆಟೋಮೊಟೀವ್ ಕೆಂಪೇಗೌಡರಿಗೆ ವಾಹನ ಡೆಲಿವರಿ ನೀಡಿದ ಬಗ್ಗೆ ಟ್ವೀಟ್ ಮಾಡಿದೆ. "ಜನವರಿ 21ರಂದು ನಮ್ಮ ಡೀಲರ್ ಬಳಿ ಕೆಂಪೇಗೌಡ ಮತ್ತು ಆತನ ಸ್ನೇಹಿತರು ಬಂದಾಗ ನಡೆದ ಘಟನೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಾವು ಭರವಸೆ ನೀಡಿದಂತೆ ಘಟನೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದೆ.
"ಮಹೀಂದ್ರ ಆಯ್ಕೆ ಮಾಡಿದ್ದಕ್ಕಾಗಿ ನಾವು ಕೆಂಪೇಗೌಡರಿಗೆ ಧನ್ಯವಾದ ಅರ್ಪಿಸುತ್ತೇವೆ. ನಾವು ಅವರನ್ನು ಮಹೀಂದ್ರ ಕುಟುಂಬಕ್ಕೆ ಸ್ವಾಗತಿಸುತ್ತೇವೆ" ಎಂದು ಟ್ವೀಟ್ ಮಾಡಲಾಗಿದೆ.
Here is our official update with reference to the incident that happened at one of our dealers' showrooms in Tumukur, Karnataka. https://t.co/m1lTpObXVC pic.twitter.com/etzQTonykP
— Mahindra Automotive (@Mahindra_Auto) January 28, 2022
ಜನವರಿ 25ರಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿ, "ಮಹೀಂದ್ರ ಕಂಪನಿಯ ಮುಖ್ಯ ಉದ್ದೇಶವೇ ನಮ್ಮ ಸಮುದಾಯಗಳು ಮತ್ತು ಎಲ್ಲ ಸಹಭಾಗಿಗಳಿಗೆ ಶಕ್ತಿ ತುಂಬುವುದು. ವ್ಯಕ್ತಿಯ ಘನತೆ ಎತ್ತಿಹಿಡಿಯುವುದು ನಮ್ಮ ಸಂಸ್ಥೆಯ ಉದ್ದೇಶ. ಈ ಮೌಲ್ಯದೊಂದಿಗೆ ರಾಜಿ ಆಗುವುದು ಅಥವಾ ನಮ್ಮ ನೀತಿಗಳಿಂದ ದೂರ ಹೋಗುವ ಯಾವುದೇ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಮತ್ತು ತುರ್ತಾಗಿ ಗಮನಿಸುತ್ತೇವೆ" ಎಂದು ಹೇಳಿದ್ದರು.
ಕನ್ನಡದ 'ದಿಗ್ಗಜರು' ಸಿನಿಮಾದ ದೃಶ್ಯದಂತೆ ನಡೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಂತಿಮವಾಗಿ ಕೆಂಪೇಗೌಡ ಕೈಗೆ ವಾಹನ ಸಿಕ್ಕಿದೆ. ವ್ಯಕ್ತಿಯ ಬಟ್ಟೆ ನೋಡಿ ಅವಮಾನ ಮಾಡಿದ ಶೋ ರೂಂ ಸಿಬ್ಬಂದಿ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾದು ನೋಡಬೇಕಿದೆ.












Click it and Unblock the Notifications