ಕೇರಳದಲ್ಲಿ ಮತ್ತೆ ಮಳೆ: ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆ
ತಿರುವನಂತಪುರಂ, ನವೆಂಬರ್ 14: ಕೇರಳದ ವಿವಿಧ ಭಾಗಗಳಲ್ಲಿ ಶನಿವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ರಾಜ್ಯದ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಅಧಿಕಗೊಂಡಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ರಾತ್ರಿ ಇಡೀ ಸುರಿದ ಭಾರೀ ಮಳೆಯಿಂದಾಗಿ ಭಾನುವಾರ ಬೆಳಗಿನ ಜಾವ ಹಲವು ರಸ್ತೆಗಳು ಜಲಾವೃತಗೊಂಡಿವೆ. ವಿಶೇಷವಾಗಿ ರಾಜ್ಯದ ದಕ್ಷಿಣ ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯ ರಾಜಧಾನಿ ತಿರುವನಂತಪುರಂನ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಇದರಿಂದಾಗಿ ಕೊಲ್ಲಂ ಜಿಲ್ಲೆಯ ಕೆಲವು ಭಾಗಗಳಲ್ಲಿ ಕೆಲವು ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಬಲವಾದ ಪಶ್ಚಿಮ ಮಾರುತಗಳು ಮತ್ತು ಅರೇಬಿಯನ್ ಸಮುದ್ರದ ಆಗ್ನೇಯ ಪ್ರದೇಶದ ಮೇಲೆ ಚಂಡಮಾರುತದ ಪರಿಚಲನೆಯು ಭಾರೀ ಮಳೆಯನ್ನು ಪ್ರಚೋದಿಸಿದೆ. ಹೀಗಾಗಿ ತಿರುವನಂತಪುರಂ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ತಿರುವನಂತಪುರಂ ಅಲ್ಲದೆ, ಕೊಲ್ಲಂ, ಆಲಪ್ಪುಳ, ಪತ್ತನಂತಿಟ್ಟ, ಇಡುಕ್ಕಿ, ಕೊಟ್ಟಾಯಂ, ಮತ್ತು ಕಾಸರಗೋಡು ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೈ ಅಲರ್ಟ್ ಘೋಷಿಸಿದೆ.
ಜಲಾನಯನ ಪ್ರದೇಶದಲ್ಲಿ ಆರೆಂಜ್ ಅಲರ್ಟ್
ಇನ್ನೂ ಇಡುಕ್ಕಿ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದ್ದು, ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಲ್ಲಪೆರಿಯಾರ್ ನೀರಿನ ಮಟ್ಟವೂ ಹೆಚ್ಚಿದ್ದು, 140 ಅಡಿ ತಲುಪಿದ ಹಿನ್ನೆಲೆಯಲ್ಲಿ ಸುತ್ತ ಮುತ್ತ ವಾಸಿಸುವ ಜನರಿಗೆ ತಮಿಳುನಾಡು ಸರ್ಕಾರ ಎಚ್ಚರಿಕೆ ನೀಡಿದೆ. ತಿರುವನಂತಪುರಂ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಹಾಗೂ ನದಿ ತೀರ ಮತ್ತು ಪ್ರವಾಸಿ ತಾಣಗಳಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆ ನೀಡಿದ್ದಾರೆ.
ಪಥನಂತಿಟ್ಟಾ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಜಿಲ್ಲಾಡಳಿತವು ಭಾರೀ ಮಳೆಯಿಂದಾಗುವ ಅಪಾಯದಮಟ್ಟ ಅಧಿಕವಿರುವ ವಿಶೇಷವಾಗಿ ನದಿ ದಡದಲ್ಲಿ ಅಥವಾ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ವಾಸಿಸುವವರಿಗೆ ತೀವ್ರ ಎಚ್ಚರಿಕೆಯನ್ನು ಸೂಚಿಸಿದೆ. ಭೂಕುಸಿತ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲು ಸಲಹೆ ನೀಡಿದೆ.
ಹಲವು ರಸ್ತೆಗಳು ಬಂದ್ ಆಗಿವೆ
ನೆಯ್ಯಟಿಂಕರಾದ ಮರತ್ತೂರು ಸೇತುವೆಗೆ ಹಾನಿಯಾದ ಕಾರಣ ತಿರುವನಂತಪುರದಿಂದ ಕನ್ನಿಯಾಕುಮಾರಿವರೆಗಿನ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸಂಚಾರ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದರಿಂದ ರಾಜ್ಯವು ತಿರುವನಂತಪುರಂ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಪರಿಹಾರ ಶಿಬಿರಗಳನ್ನು ತೆರೆದಿದೆ. ಎರ್ನಾಕುಲಂನ ರಸ್ತೆಯಲ್ಲಿ ಟ್ರಕ್ ಮೇಲೆ ಮಣ್ಣು ಕುಸಿದು ಟ್ರಕ್ ಚಾಲಕ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವನ್ನಪ್ಪಿರುವ ವರದಿಯಾಗಿದೆ. ಎರ್ನಾಕುಲಂ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ರಸ್ತೆಗಳು ಬಂದ್ ಆಗಿವೆ. ಕೊಟ್ಟಾಯಂ ಜಿಲ್ಲೆಯಲ್ಲೂ ಬೆಳಗ್ಗೆಯಿಂದ ಉತ್ತಮ ಮಳೆಯಾಗಿದ್ದು, ಆದರೆ ಅಲ್ಲಿಂದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ರೈಲು ಸೇವೆಗಳಿಗೆ ಅಡ್ಡಿಯುಂಟಾಗಿದೆ
ನಿರಂತರ ಮಳೆಯಿಂದಾಗಿ ಶನಿವಾರ ಕೇರಳದ ಕೆಲವು ಭಾಗಗಳಲ್ಲಿ ಸಣ್ಣ ಭೂಕುಸಿತಗಳು ಸಂಭವಿಸಿದ್ದು ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಹೀಗಾಗಿ ಗುಡ್ಡಗಾಡು ಪ್ರದೇಶಗಳು, ನದಿ ಬದಿಗಳು ಮತ್ತು ಪ್ರವಾಸಿ ಕೇಂದ್ರಗಳಲ್ಲಿ ಅಧಿಕಾರಿಗಳು ತೀವ್ರ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿರುವನಂತಪುರದಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದ್ದು, ಕೊಲ್ಲಂ, ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಎಚ್ಚರಿಕೆ ನೀಡಲಾಗಿತ್ತು.
ರೆಡ್ ಅಲರ್ಟ್ ಪ್ರದೇಶದಲ್ಲಿ 20 ಸೆಂ.ಮೀ ಮಳೆ
IMD ಪ್ರಕಾರ, ನವೆಂಬರ್ 16 ರವರೆಗೆ ರಾಜ್ಯದ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಿಂಚಿನ ಜೊತೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ರೆಡ್ ಅಲರ್ಟ್ ಪ್ರದೇಶದಲ್ಲಿ 24 ಗಂಟೆಗಳಲ್ಲಿ 20 ಸೆಂ.ಮೀ ಗಿಂತ ಹೆಚ್ಚಿನ ಭಾರೀ ಮಳೆಯನ್ನು ಸೂಚಿಸುತ್ತದೆ. ಆದರೆ ಆರೆಂಜ್ ಅಲರ್ಟ್ ಇರುವ ಪ್ರದೇಶಗಳಲ್ಲಿ 6 ಸೆಂ.ಮೀ ನಿಂದ 20 ಸೆಂ.ಮೀ ವರೆಗೆ ಭಾರೀ ಮಳೆಯ ಸೂಚನೆ ಇದೆ. ಹಳದಿ ಎಚ್ಚರಿಕೆ ಹೊಂದಿರುವ ಪ್ರದೇಶಗಳಲ್ಲಿ 6 ರಿಂದ 11 ಸೆಂ.ಮೀ ನಡುವೆ ಭಾರೀ ಮಳೆಯಾಗುತ್ತದೆ.