ಕಾಶ್ಮೀರದಲ್ಲಿ ವಾಹನ ಸ್ಫೋಟ: ಮೂವರು ಯೋಧರಿಗೆ ಗಾಯ
ಶ್ರೀನಗರ ಜೂನ್ 2: ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ಸೆಡೌನಲ್ಲಿ ಗುರುವಾರ ನಡೆದ ವಾಹನ ಸ್ಫೋಟದಲ್ಲಿ ಮೂವರು ಭಾರತೀಯ ಯೋಧರು ಗಾಯಗೊಂಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಖಾಸಗಿ ವಾಹನವನ್ನು ಭಾರತೀಯ ಸೇನೆ ಬಾಡಿಗೆ ಪಡೆದಿತ್ತು. ಈ ವಾಹನವನ್ನು ಉಗ್ರರು ಸ್ಫೋಟಿಸಿರುವ ಶಂಕೆಯಿದೆ.
"ಸ್ಫೋಟದ ಸ್ವರೂಪ ಮತ್ತು ಸ್ಫೋಟಕ್ಕೆ ಬಳಸಲಾದ ವಸ್ತುಗಳ ಕುರಿತು ತನಿಖೆ ನಡೆಯುತ್ತಿದೆ. ಗ್ರೆನೇಡ್ ದಾಳಿಯಿಂದ ಸ್ಫೋಟ ಸಂಭವಿಸಿದೆಯೇ ಅಥವಾ ಈ ಮೊದಲೇ ವಾಹನದಲ್ಲಿ ಐಇಡಿ(ಸುಧಾರಿತ ಸ್ಫೋಟಕ ವಸ್ತು) ಇರಿಸಿ ಸ್ಫೋಟಿಸಲಾಗಿಯೇ ಅಥವಾ ವಾಹನದಲ್ಲಿ ಬ್ಯಾಟರಿ ಸ್ಫೋಟಗೊಳ್ಳುವಂತೆ ಮಾಡಲಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ,'' ಎಂದು ಕಾಶ್ಮೀರದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್(ಐಜಿಪಿ) ವಿಜಯ್ ಕುಮಾರ್ ತಿಳಿಸಿದ್ದಾರೆ.
"ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ್ ಜಿಲ್ಲೆಯ ಸೆಡೌನಲ್ಲಿ ಖಾಸಗಿ ವಾಹನದ ಒಳಗೆ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ. ಸ್ಫೋಟದಿಂದ ವಾಹನವು ಕೂಡ ತೀವ್ರವಾಗಿ ಹಾನಿಯಾಗಿದೆ. ಗಾಯಗೊಂಡ ಮೂವರು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ,'' ಎಂದು ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಯೋಧರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸ್ಥಳಾಂತರಿಸಲು ಅಥವಾ ಕಾರ್ಯಾಚರಣೆ ಸಮಯದಲ್ಲಿ ಖಾಸಗಿ ವಾಹನಗಳನ್ನು ಬಳಸಲಾಗುತ್ತದೆ. ಆದರೆ ಖಾಸಗಿ ವಾಹವನ್ನು ಬಾಡಿಗೆ ಪಡೆಯುವ ಮೊದಲು ಅದನ್ನು ಕೂಲಂಕುಶವಾಗಿ ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ.
ಎರಡು ದಿನಗಳ ಮೊದಲು ಕಾಶ್ಮೀರ ಶೋಫಿಯಾನ್ ಜಿಲ್ಲೆಯ ಕೀಗಂ ಪ್ರದೇಶದಲ್ಲಿ ಉಗ್ರರು, ನಾಗರಿಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಫಾರೂಕ್ ಅಹಮದ್ ಶೇಖ್ ಎಂಬುವವರು ಗುಂಡೇಟು ತಿಂದು ಗಾಯಗೊಂಡಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 31ರಂದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಶಾಲಾ ಶಿಕ್ಷಕಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.
ಶಿಕ್ಷಕಿ ಕಾಶ್ಮೀರಿ ಪಂಡಿತ್ ಆಗಿರುವ ಕಾರಣದಿಂದಲೇ ಭಯೋತ್ಪಾದಕರು ಆಕೆಯನ್ನು ಗುರಿಯಾಗಿಸಿಕೊಂಡು ಗುಂಡಿಕ್ಕಿ ಕೊಂದಿದ್ದಾರೆ. ಆಕೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಶಿಕ್ಷಕಿ ಸಾವನ್ನಪ್ಪಿದರು. ಮೃತ ಶಿಕ್ಷಕಿ ಜಮ್ಮುವಿನ ಸಾಂಬಾ ನಿವಾಸಿಯಾಗಿದ್ದರು.
ದಾಳಿಯ ನಂತರ, ದಾಳಿಕೋರರನ್ನು ಹಿಡಿಯಲು ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ. ಆದರೆ ಭಯೋತ್ಪಾದಕರ ಗುರುತು ಇನ್ನೂ ಸಿಗಲಿಲ್ಲ. ಆದರೆ ಅವರು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲ್ಪೋರಾ ಪ್ರದೇಶಕ್ಕೆ ಸೇರಿದವರು ಎನ್ನಲಾಗಿದೆ.
ಇನ್ನೊಂದೆಡೆ, ಮಂಗಳಾವಾರ ಜಮ್ಮು ಮತ್ತು ಕಾಶ್ಮೀರದ ಅವಂತಿಪೋರಾ ಜಿಲ್ಲೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications