ವಾರದಲ್ಲಿ ಎರಡು ದಿನ ಹೆದ್ದಾರಿಯಲ್ಲಿ ನಾಗರಿಕರಿಗೆ ಪ್ರವೇಶ ನಿಷೇಧ, ಆಕ್ರೋಶ
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಏಪ್ರಿಲ್ 7: ಮುಖ್ಯವಾದ ಹೆದ್ದಾರಿಯಲ್ಲಿ ವಾರದಲ್ಲಿ ಎರಡು ದಿನ ನಾಗರಿಕರಿಗೆ ನಿಷೇಧ ಹೇರುವ ಕ್ರಮ ಭಾನುವಾರದಿಂದ ಜಾರಿಗೆ ಬಂದಿದ್ದು, ಈ ನಿಯಮಕ್ಕೆ ಜಮ್ಮು-ಕಾಶ್ಮೀರದಲ್ಲಿ ಎಲ್ಲ ಭೇದ ಮರೆತು, ರಾಜಕೀಯ ಪಕ್ಷಗಳು ಒಟ್ಟಾಗಿ ವಿರೋಧ ವ್ಯಕ್ತಪಡಿಸಿವೆ. ಈ ನಿಷೇಧವನ್ನು ವಿರೋಧಿಸುವಂತೆ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಜನರಿಗೆ ಕರೆ ನೀಡಿದ್ದಾರೆ.
ಈ ನಿಷೇಧವನ್ನು ಒಪ್ಪಿಕೊಳ್ಳಬೇಡಿ ಎಂದು ಜನರನ್ನು ಮನವಿ ಮಾಡುತ್ತೇನೆ. ಇದನ್ನು ವಿರೋಧಿಸಿ ಹಾಗೂ ನಿಮಗೆ ಬೇಕಾದ ಕಡೆ ಸಂಚರಿಸಿ. ಈ ನಿಷೇಧವನ್ನು ನಾವು ಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಆಕೆ ತಮ್ಮ ವಿಡಿಯೋ ಕೂಡ ಅಪ್ ಲೋಡ್ ಮಾಡಿದ್ದಾರೆ. ಪಿಡಿಪಿ ನಾಯಕರು ರಾಜ್ಯಪಾಲ ಸತ್ಯಪಾಲ್ ಮಲಿಕ್ ಹಾಗೂ ಅವರ ಆಡಳಿತದ ವಿರುದ್ಧ ಪ್ರತಿಭಟಿಸಿದ್ದಾರೆ.
ಇದು ಕಾಶ್ಮೀರ. ಪ್ಯಾಲೆಸ್ತೀನ್ ಅಲ್ಲ. ನಮ್ಮ ಪ್ರೀತಿಯ ಭೂಮಿಯನ್ನು ಬಯಲು ಬಂದೀಖಾನೆಯಾಗಿ ಮಾಡಲು ಬಿಡುವುದಿಲ್ಲ ಎಂದು ಆಕೆ ಹೇಳಿದ್ದಾರೆ. ಇನ್ನ್ನು ನ್ಯಾಷನಲ್ ಕ್ಯಾನ್ಫರೆನ್ಸ್ ನ ಒಮರ್ ಅಬ್ದುಲ್ಲಾ, ಇದು ಬುದ್ಧಿ ಇಲ್ಲದ ನಿಷೇಧ ಎಂದು ಕರೆದಿದ್ದಾರೆ. ಇನ್ನೂ ಅನೇಕ ನಾಯಕರು ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಭಾನುವಾರ ಹಾಗೂ ಬುಧವಾರ ಬಾರಾಮುಲ್ಲಾದಿಂದ ಉಧಂಪುರ್ ತನಕ ಭದ್ರತಾ ಪಡೆಗಳ ವಾಹನಕ್ಕಾಗಿಯೇ ತೆರೆದಿಡಲಾಗುತ್ತದೆ. ಇನ್ನೂರಾ ಎಪ್ಪತ್ತು ಕಿ.ಮೀ. ಉದ್ದದ ಈ ಹೆದ್ದಾರಿಯಲ್ಲಿ ನಾಗರಿಕರ ಸಂಚಾರ ನಿಷೇಧಿಸಿ, ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಈ ಮಧ್ಯೆ ತುರ್ತು ಸಂದರ್ಭಗಳಲ್ಲಿ ಸಂಚರಿಸಲು ಮಾತ್ರ ಪಾಸ್ ವಿತರಿಸಲಾಗುತ್ತದೆ. ಅದರ ಪರಿಶೀಲನೆಗೆ ಕೆಲವರ ನೇಮಕ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಫೆಬ್ರವರಿ ಹದಿನಾಲ್ಕನೇ ತಾರೀಕು ಜಮ್ಮು-ಶ್ರೀನಗರ್ ಹೆದ್ದಾರಿಯಲ್ಲಿ ಆತ್ಮಹತ್ಯಾ ಬಾಂಬರ್ ದಾಳಿ ನಡೆದು, ನಲವತ್ತು ಸಿಆರ್ ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ್ದರು. ಬೆಂಗಾವಲು ಪಡೆಯ ವಾಹನದ ಮೇಲೆ ಉಗ್ರನೊಬ್ಬ ಆತ್ಮಹತ್ಯಾ ದಾಳಿ ನಡೆಸಿದ್ದ. ಅಂಥ ದಾಳಿಗಳು ನಡೆಯದಿರಲಿ ಎಂದು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.












Click it and Unblock the Notifications