29 ವರ್ಷದ ನಂತರ ಕಾಶ್ಮೀರಕ್ಕೆ ಹಿಂತಿರುಗಿದ ರೋಶನ್ ಗೆ ಭರ್ಜರಿ ಸ್ವಾಗತ
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಮೇ 2: ಕಾಶ್ಮೀರಿ ಪಂಡಿತರ ಮೇಲೆ ನಡೆದ ಹಿಂಸಾಚಾರದ ವೇಳೆ 1990ನೇ ಇಸವಿಯಲ್ಲಿ ರೋಶನ್ ಮಾವ ಅವರ ಮೇಲೆ ಅಪರಿಚಿತ ಬಂದೂಕುಧಾರಿಯಿಂದ ನಾಲ್ಕು ಬಾರಿ ಗುಂಡು ಹಾರಿತ್ತು. ಕೊನೆಗೆ ತಮ್ಮ ಪ್ರೀತಿಯ ಕಾಶ್ಮೀರ ಬಿಟ್ಟು ಹೊರಟರು. ದೆಹಲಿ ಸೇರಿದರು. ಆ ನಂತರ ಮನೆಗೆ ಕೂಡ ಹಿಂತಿರುಗಲಿಲ್ಲ.
ಆದರೆ, ಅಲ್ಲಿಗೆ ಕಥೆ ಕೊನೆಯಾಗಲಿಲ್ಲ. ಮನೆ ಬಿಟ್ಟು ಹೋದ ಇಪ್ಪತ್ತೊಂಬತ್ತು ವರ್ಷಗಳ ನಂತರ ರೋಶನ್ ಮಾವ ಕಾಶ್ಮೀರಕ್ಕೆ ಹಿಂತಿರುಗುತ್ತಿದ್ದಾರೆ. ಅಷ್ಟೇ ಅಲ್ಲ, ಶ್ರೀನಗರದಲ್ಲಿ ಮತ್ತೆ ಒಣ ಹಣ್ಣುಗಳ ಮಳಿಗೆ ಆರಂಭಿಸಿದ್ದಾರೆ. ಇಂಥ ಸಂದರ್ಭದಲ್ಲಿ ಅವರಿಗೆ ಇತರ ವರ್ತಕರು ಅದ್ಭುತವಾದ ಸ್ವಾಗತ ಕೋರಿದ್ದಾರೆ.
'ನನ್ನ ಧನ್ಯವಾದ ಹೇಳಲು ಪದಗಳು ದೊರೆಯುತ್ತಿಲ್ಲ. ನನಗೆ ಸಂತೋಷ ಹಾಗೂ ದುಃಖ ಎರಡೂ ಆಗುತ್ತಿದೆ. ನನ್ನ ಜಾಗದಿಂದ ಇಪ್ಪತ್ತೊಂಬತ್ತು ವರ್ಷ ದೂರವಿದ್ದೆ. ನನಗೆ ಸಿಕ್ಕ ಸ್ವಾಗತದಿಂದ ಬಹಳ ಸಂತಸವಾಗಿದ್ದೆ' ಎಂದು ರೋಶನ್ ಹೇಳಿದ್ದಾರೆ. ನಾನು ದೇಶಾದ್ಯಂತ ಸುತ್ತಾಡಿದ್ದೇನೆ. ಕಾಶ್ಮೀರದಂಥ ಮತ್ತೊಂದು ಸ್ಥಳವಿಲ್ಲ. ಕಾಶ್ಮೀರಿ ಮುಸ್ಲಿಮರು ಮತ್ತು ಪಂಡಿತರ ಮಧ್ಯೆ ಸೋದರತ್ವ ಹಾಗೇ ಇದೆ ಎಂದಿದ್ದಾರೆ.

ನನಗೆ ದೆಹಲಿಯಲ್ಲಿ ವ್ಯಾಪಾರ ಮತ್ತು ಒಳ್ಳೆ ಮನೆ ಇದೆ. ಇಪ್ಪತ್ತೊಂಬತ್ತು ವರ್ಷಗಳ ನಂತರ ಮತ್ತೆ ಜನರ ಮಧ್ಯೆ ಬರುತ್ತಿರುವುದು ಸಂತೋಷ ತಂದಿದೆ ಎಂದು ಅವರು ಹೇಳಿದ್ದಾರೆ. 1990ರ ದಶಕದಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ತೀರಾ ಹೆಚ್ಚಾಗಿದ್ದ ಕಾಲದಲ್ಲಿ ಕಾಶ್ಮೀರಿ ಪಂಡಿತರು ತಮ್ಮ ಆಸ್ತಿ, ಪಾಸ್ತಿ ಮನೆ ಬಿಟ್ಟು ಕಾಶ್ಮೀರ ಬಿಟ್ಟು ತೆರಳಿದ್ದರು.
ಹನ್ನೊಂದು ವರ್ಷದ ಹಿಂದೆ ಪ್ರಧಾನಮಂತ್ರಿ ಪುನರ್ ನಿರ್ಮಾಣ ಯೋಜನೆ ಅಡಿ ಪಂಡಿತರಿಗೆ ಆರು ಸಾವಿರ ಉದ್ಯೋಗ ಮಂಜೂರು ಮಾಡಲಾಗಿತ್ತು. ಆದರೆ ಈ ವರೆಗೆ ಮೂರು ಸಾವಿರ ಪಂಡಿತರಿಗೆ ಮಾತ್ರ ಈವರೆಗೆ ಉದ್ಯೋಗ ಸಿಕ್ಕಿದೆ. ಯಾರು ಕಾಶ್ಮೀರಕ್ಕೆ ವಾಪಸಾದರೋ ಅವರು ತಾತ್ಕಾಲಿಕ ಕಾಲೋನಿಗಳಲ್ಲಿ ಸೌಕರ್ಯಗಳಿಲ್ಲದೆ ವಾಸಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.












Click it and Unblock the Notifications