ಕೆಆರ್ಎಸ್ ಹಿನ್ನೀರಿನಲ್ಲಿ ಗಮನ ಸೆಳೆದ ಯೂತ್ ಸೈಲಿಂಗ್ ಕ್ರೀಡೆ
ಮಂಡ್ಯ, ಆಗಸ್ಟ್, 09: ರಾಷ್ಟ್ರ ಮಟ್ಟದ ಮಲ್ಟಿ ಕ್ಲಾಸ್ ಯೂತ್ ಸೈಲಿಂಗ್ ಅಂಡ್ ಕೈಟ್ ಬೋರ್ಡ್ ಚಾಂಪಿಯನ್ಶಿಪ್ಗೆ ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿನಲ್ಲಿ ಚಾಲನೆ ನೀಡಲಾಗಿದೆ. ಅತ್ಯಾಕರ್ಷಕವಾಗಿ ನಡೆದ ಪಂದ್ಯ ಕ್ರೀಡಾಭಿಮಾನಿಗಳಿಗೆ ಮುದ ನೀಡಿತು.
ಕೆಆರ್ಎಸ್ ಹಿನ್ನೀರಿನಲ್ಲಿ ಇಂದಿನಿಂದ ಆಗಸ್ಟ್ 13ರವರೆಗೆ ವಿವಿಧ ಕ್ರೀಡೆಗಳು ನಡೆಯಲಿವೆ. ಮಂಡ್ಯ ಜಿಲ್ಲಾಡಳಿತದ ಸಹಕಾರದೊಂದಿಗೆ, ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಹಾಭಾಗಿತ್ವದಲ್ಲಿ ಇದನ್ನು ಆಯೋಜಿಸಲಾಗಿದೆ. ಕ್ರೀಡೆಯನ್ನು ನೋಡಲು ಸುತ್ತಮುತ್ತಲಿನ ಊರಿನವರು ಸಾಗರೋಪಾದಿಯಲ್ಲಿ ನೆರೆದಿದ್ದರು.
ಕೆಆರ್ಎಸ್ ಸುತ್ತಾ ಪರೀಕ್ಷಾರ್ಥ ಸ್ಫೋಟ, ಗಣಿಧಣಿಗಳ ಒತ್ತಡಕ್ಕೆ ಮಣಿಯಿತಾ ಜಿಲ್ಲಾಡಳಿತ?
ದೇಶದ ವಿವಿಧೆಡೆಯಿಂದ 120ಕ್ಕೂ ಹೆಚ್ಚು ಸೈಲರ್ಸ್ ಪಾಲ್ಗೊಂಡಿದ್ದರು. ಯುವ ಸೈಲರ್ಸ್ಗೆ ಇದೊಂದು ಅದ್ಭುತ ಅವಕಾಶವಾಗಿದ್ದು, ತಮ್ಮ ಪ್ರತಿಭೆಯನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗರುತಿಸಿಕೊಳ್ಳಲು ಸಹಾಯವಾಗಲಿದೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 15 ಲಕ್ಷ ರೂಪಾಯಿ ಅನುದಾನ ನೀಡುವ ಮೂಲಕ ಸೈಲಿಂಗ್ ಚಾಂಪಿಯನ್ ಶಿಪ್ಗೆ ಮತ್ತಷ್ಟು ಉತ್ತೇಜನ ನೀಡಲಾಗಿದೆ. ಸೈಲಿಂಗ್ ಸ್ಪರ್ಧೆ ಆಯೋಜಿಸಿರುವುದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ಈ ಭಾಗವನ್ನು ಟೂರಿಸಂ ಹಬ್ ಮಾಡುವ ಉದ್ದೇಶವೂ ಇದೆ ಎಂದು ಸಚಿವರು ತಿಳಿಸಿದರು.
ಕೆಆರ್ಎಸ್ ಹಿನ್ನೀರಿನಲ್ಲಿ ಆಯೋಜಿಸಿರುವ ಮಲ್ಟಿಕ್ಲಾಸ್ ಯೂತ್ ಸೈಲಿಂಗ್ ಅಂಡ್ ಕೈಟ್ ಬೋರ್ಡ್ ಚಾಂಪಿಯನ್ಶಿಪ್ ಕಾರ್ಯಕ್ರಮವನ್ನು ಮುಂದಿನ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಅಂಡ್ ಸೆಂಟರ್ ಬೆಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಈ ಕ್ರೀಡೆಯನ್ನು ಹಮ್ಮಿಕೊಳ್ಳಲಾಗಿತ್ತು.
ದೇಶದ ವಿವಿಧ ಭಾಗಗಳಿಂದ 120ಕ್ಕಿಂತ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಕಳೆದ ವರ್ಷ 4 ಕ್ರೀಡಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದರು. ಈ ಚಾಂಪಿಯನ್ಶಿಪ್ ಉದ್ಯೋಗಗದ ದೃಷ್ಟಿಯಿಂದಲೂ ಸಹಾಯಕವಾಗುತ್ತದೆ ಎಂದು ಸಚಿವ ಕೆ. ಸಿ. ನಾರಾಯಣ ಗೌಡ ಹೇಳಿದರು.
ಕ್ರೀಡೆಗೆ ಉತ್ತೇಜನ ನೀಡುವ ಅಗತ್ಯತೆ ಇದ್ದು, ಇದಕ್ಕೆ ಬೇಕಾಗಿರುವ ವ್ಯವಸ್ಥೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಚಾಂಪಿಯನ್ಶಿಪ್ ಪ್ರತಿವರ್ಷ ಕೆಆರ್ಎಸ್ನಲ್ಲಿ ನಡೆಯುವುದರಿಂದ ಸ್ಥಳೀಯವಾಗಿ ಯುವಕರಿಗೆ ತುಂಬಾ ಸಹಾಯಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.