Ishan Kishan: ಭಾರತ ತಂಡಕ್ಕೆ ಎಡಗೈ ಬ್ಯಾಟರ್ ವಾಪಸ್?
ಹಲವು ಕಾರಣಗಳಿಂದ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದು ಮಾತ್ರವಲ್ಲದೆ, ಬಿಸಿಸಿಐನ ಒಪ್ಪಂದವನ್ನು ಮಾತ್ರ ಕಳೆದುಕೊಂಡಿದ್ದ ಇಶಾನ್ ಕಿಶಾನ್, ದುಲೀಪ್ ಟ್ರೋಫಿಯಲ್ಲಿ ಬಿಸಿಸಿಐ ಆಯ್ಕೆದಾರರಿಗೆ ಹೊಸ ಸಂದೇಶ ಕಳಿಸಿದ್ದಾರೆ. ಸದ್ಯ ನಡೆಯುತ್ತಿರುವ ದುಲೀಪ್ ಟ್ರೊಫಿ ಪಂದ್ಯದಲ್ಲಿ ಇಶಾನ್ ಕಿಶನ್ ಭರ್ಜರಿ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಮತ್ತೆ ಭಾರತ ತಂಡದ ಕದ ತಟ್ಟಿದ್ದಾರೆ.
ಅನಂತಪುರದ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಬಿ ತಂಡದ ವಿರುದ್ಧ ಭಾರತ ಸಿ ತಂಡದ ಬ್ಯಾಟರ್ ಇಶಾನ್ ಕಿಶನ್ 126 ಎಸೆತಗಳಲ್ಲಿ 111 ರನ್ ಗಳಿಸುವ ಮೂಲಕ ಮಿಂಚಿದರು. ಅವರ ಈ ಇನ್ನಿಂಗ್ಸ್ನಲ್ಲಿ 14 ಬೌಂಡರಿ, 3 ಸಿಕ್ಸರ್ ಕೂಡ ಸೇರಿದ್ದವು.

ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಮೊದಲು ಪ್ರಕಟಿಸಲಾದ ತಂಡಗಳಲ್ಲಿ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿದ್ದರೂ, ಅವರು ಬುಚಿ ಬಾಬು ಪಂದ್ಯಾವಳಿಯಲ್ಲಿ ಆಡುವಾಗ ತೊಡೆಸಂದು ಗಾಯದಿಂದ ಬಳಲುತ್ತಿದ್ದ ಕಾರಣ ಅವರು ಮೊದಲ ಪಂದ್ಯದಲ್ಲಿ ಆಡಲು ಅವಕಾಶ ಸಿಗಲಿಲ್ಲ. ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಗಿತ್ತು.
ಆದರೆ ಗುರುವಾರ ಆರಂಭವಾದ ಎರಡನೇ ಸುತ್ತಿನ ಪಂದ್ಯದಲ್ಲಿ ಇಶಾನ್ ಕಿಶನ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ನೀಡಲಾಯಿತು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಇಶಾನ್ ಕಿಶಾನ್ ಎದುರಾಳಿಗಳನ್ನು ದಂಡಿಸಿದರು. ಕಳೆದ ತಿಂಗಳು ನಡೆದ ಬುಚಿ ಬಾಬು ಪಂದ್ಯಾವಳಿಯಲ್ಲಿ ತ್ರಿಶತಕ ಗಳಿಸಿದ್ದ ಅವರು ಅದೇ ಆಟವನ್ನು ದುಲೀಪ್ ಟ್ರೋಫಿಯಲ್ಲಿ ಮುಂದುವರೆಸಿದರು. ಬಾಬಾ ಇಂದ್ರಜಿತ್ ಜೊತೆಗೆ 189 ರನ್ಗಳ ಜೊತೆಯಾಟ ಆಡಿದರು.
ಭಾರತ ತಂಡಕ್ಕೆ ವಾಪಸ್?
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಅವರು ಉತ್ತಮ ಪ್ರದರ್ಶನದ ನಡುವೆಯೂ ಅಶಿಸ್ತಿನ ಕಾರಣದಿಂದ ಭಾರತ ತಂಡದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ. ಈ ವರ್ಷ ಬಿಸಿಸಿಐ ಅವರನ್ನು ಒಪ್ಪಂದದ ಪಟ್ಟಿಯಿಂದ ಕೂಡ ತೆಗೆದುಹಾಕಿತ್ತು. ಈಗ ಶ್ರೇಯಸ್ ಅಯ್ಯರ್ ಕೂಡ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಆಡುತ್ತಿದ್ದು, ಭಾರತ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
ಇಶಾನ್ ಕಿಶನ್ ಅವರ ಭರ್ಜರಿ ಶತಕ ನೋಡಿದ ಅಭಿಮಾನಿಗಳು, ಅವರಿಗೆ ಮತ್ತೆ ಭಾರತ ತಂಡದಲ್ಲಿ ಆಡಲು ಅವಕಾಶ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಎಡಗೈ ಬ್ಯಾಟರ್ ಆಗಿರುವ ಇಶಾನ್ ಕಿಶನ್, ಆರಂಭಿಕರಾಗಿ ಆಡುತ್ತಾರೆ, ಮಧ್ಯಮ ಕ್ರಮಾಂಕದಲ್ಲಿ ಕೂಡ ಆಡುತ್ತಾರೆ. ವಿಕೆಟ್ ಕೀಪರ್ ಕೂಡ ಆಗಿರುವ ಆಗಿರುವ ಕಾರಣ ಅವರು ತಂಡಕ್ಕೆ ಉತ್ತಮ ಆಯ್ಕೆ ಎನ್ನುವ ವಾದ ಅಭಿಮಾನಿಗಳದ್ದು.












Click it and Unblock the Notifications